ಮುದ್ದೇಬಿಹಾಳ: ಸ್ಥಳೀಯ ಸಾರಿಗೆ ಘಟಕಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಶನಿವಾರ ಭೇಟಿ ನೀಡಿ ಘಟಕದ ಕಾರ್ಯನಿರ್ವಹಣೆಗೆ ತೃಪ್ತಿ ವ್ಯಕ್ತಪಡಿಸಿದರು.

ಮೂಲ ಸೌಕರ್ಯ ಅಭಿವೃದ್ಧಿಗೆ ಕೋಟಿ ರೂ. ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.
ಎಂಡಿ ಅವರ ಅನಿರೀಕ್ಷಿತ ಭೇಟಿ ಘಟಕದ ಸಿಬ್ಬಂದಿ, ಅಧಿಕಾರಿ ವರ್ಗದವರಲ್ಲಿ ಸಂಚಲನ ಮೂಡಿಸಿತು. ಬಸ್ ನಿಲ್ದಾಣಕ್ಕೆ ತೆರಳಿ ಬಸ್ಗಳು, ಚಾಲಕರು, ನಿರ್ವಾಹಕರು, ಸಾರಿಗೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡರು.
ಎರಡು ವಾರಗಳ ಕಾರ್ಯ ನಿರ್ವಹಣೆ ಪರಿಶೀಲಿಸಿ ವಿಭಾಗದಲ್ಲಿಯೇ ಈ ಘಟಕ ಮೊದಲ ಸ್ಥಾನದಲ್ಲಿರುವುದನ್ನು ಮನವರಿಕೆ ಮಾಡಿಕೊಂಡರು. ಇದಕ್ಕೆ ಕಾರಣರಾದ ಘಟಕ ವ್ಯವಸ್ಥಾಪಕ ಎ.ಎಚ್.ಮದಭಾವಿ, ಸಿಬ್ಬಂದಿಯನ್ನು ಅಭಿನಂದಿಸಿದರು.
ಬಸ್ ನಿಲ್ದಾಣ, ಆವರಣ ಪರಿಶೀಲನೆ ಸಂದರ್ಭ ಮೂತ್ರಿ, ಶೌಚಗೃಹ ವೀಕ್ಷಿಸಿದರು. ಅವುಗಳ ದುಸ್ಥಿತಿ ಮನವರಿಕೆ ಮಾಡಿಕೊಂಡು ಮೇಲ್ದರ್ಜೆಗೇರಿಸಿ ಹೈಟೆಕ್ಗೊಳಿಸಲು ಪ್ರಸ್ತಾವನೆ ಸಲ್ಲಿಸುವಂತೆ ವಿಜಯಪುರದ ವಿಭಾಗೀಯ ನಿಯಂತ್ರಣಾಧಿಕಾರಿಗೆ ಕರೆ ಮಾಡಿ ತಿಳಿಸಿದರು.
ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಸೇವೆ ಒದಗಿಸಲು ಘಟಕ, ನಿಲ್ದಾಣ ಅಭಿವೃದ್ಧಿಗೆ ಅಗತ್ಯ ನೆರವು, ಸಹಕಾರ ನೀಡುವ ಭರವಸೆ ನೀಡಿದರು. ಘಟಕ ವ್ಯವಸ್ಥಾಪಕ ಮದಭಾವಿ ಅವರು ಘಟಕ, ನಿಲ್ದಾಣದ ಸಮಗ್ರ ಮಾಹಿತಿ ನೀಡಿದರು.