ಅರಕಲಗೂಡು: ದೇವರು ಮನುಷ್ಯನಿಗೆ ಕರುಣಿಸಿರುವ ವಿಶೇಷ ಬುದ್ಧಿಶಕ್ತಿಯನ್ನು ಸತ್ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ದೊಡ್ಡಮಠದ ಆವರಣದಲ್ಲಿ ಚನ್ನಬಸವೇಶ್ವರರ ಕತೃ ಗದ್ದುಗೆಯ ನೂತನ ಕಟ್ಟಡ ಲೋಕಾರ್ಪಣೆ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಪ್ರಾಣಿ-ಪಕ್ಷಿಗಳಿಗೆ ಸಾಮಾನ್ಯ ಜ್ಞಾನ ನೀಡಿರುವ ಭಗವಂತ ಮನುಷ್ಯನಿಗೆ ಮಾತ್ರ ಉನ್ನತ ಜ್ಞಾನಾರ್ಜನೆ ಕರುಣಿಸಿದ್ದಾನೆ. ಜಗತ್ತು ನಿರಂತರವಾಗಿ ಪ್ರತಿಕ್ಷಣವೂ ಬದಲಾಗುತ್ತಿದ್ದು ಪರಿವರ್ತನಾಶೀಲತೆಗೆ ತಕ್ಕಂತೆ ಮನುಷ್ಯ ಉನ್ನತ ಅಲೋಚನೆ ಬೆಳೆಸಿಕೊಳ್ಳಬೇಕು. ತಾವು ಮಾಡಿದ ಸತ್ಕಾರ್ಯಗಳು ಸದಾ ಕಾಲ ಶಾಶ್ವತವಾಗಿರುತ್ತವೆ. ದುಶ್ಚಟ, ದುರಭ್ಯಾಸಗಳಿಂದ ದೂರವುಳಿದು ಬದುಕಿನಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳಬೇಕು ಎಂದರು.
ಆಧ್ಯಾತ್ಮಿಕ ಪರಂಪರೆಯ ಇತಿಹಾಸದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಮುಖೇನ ಭಾರತ ವಿಶ್ವದಲ್ಲೇ ಅಗ್ರಪಂಕ್ತಿಯಲ್ಲಿದೆ. ಇನ್ನೊಬ್ಬರ ಸುಖ, ಏಳಿಗೆ ಬಯಸುವ ಮನಸ್ಸು ಭಾರತದ್ದಾಗಿದ್ದು ಇಲ್ಲಿ ಮನುಷ್ಯ ಜೀವಿಯಾಗಿ ಹುಟ್ಟುವುದೇ ಪುಣ್ಯ. ಇಂತಹ ಶ್ರೇಷ್ಠ ಮಣ್ಣಿನಲ್ಲಿ ವೀರಶೈವ-ಲಿಂಗಾಯತ ಮಠಗಳು ಸಮಾಜದ ಉನ್ನತಿಗೆ ಮನುಕುಲದ ಏಳಿಗೆಗೆ ಅನೇಕ ರೀತಿಯಲ್ಲಿ ಕೊಡುಗೆ ನೀಡುತ್ತ ಬಂದಿವೆ. ಇಂತಹ ಮಠಗಳ ಸಾಲಿನಲ್ಲಿ ದೊಡ್ಡಮಠದ ಸಾಧನೆಯೂ ದೊಡ್ಡದಾಗಿದೆ. ಧಾರ್ಮಿಕವಾಗಿ ಮಾತ್ರಲ್ಲವಲ್ಲದೆ ಭೌತಿಕವಾಗಿ ಬೆಳೆಯಲು ಮಠದ ಶ್ರೀಗಳು ಯೋಜನೆ ರೂಪಿಸಿರುವುದು ಶ್ಲಾಘನೀಯ ಎಂದರು.
ಶಿವಗಂಗೆ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದ ಶ್ರೀ ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದ ಮೇಲೆ ಅನೇಕ ಸಲ ಆಕ್ರಮಣ ನಡೆದು ಅರಮನೆಗಳನ್ನೂ ಸಹ ಲೂಟಿ ಮಾಡಲಾಗಿದೆ. ಆದರೂ ದೇಶ ಉಸಿರಾಡುತ್ತಿದೆ ಎಂದರೆ ಇಲ್ಲಿನ ಪೂರ್ವರ ತಪೋಶಕ್ತಿ ಕಾರಣ. ಜತೆಗೆ ಪೂರ್ವರ ತಪೋಫಲದಿಂದ ಇಂತಹ ಮಠಗಳು ಬೆಳೆದಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎ. ಮಂಜು ಮಾತನಾಡಿ, ಸಮಾಜದ ಉನ್ನತಿಗೆ ಮಠಗಳ ಸೇವೆ ಅನನ್ಯ, ಸರ್ಕಾರಿ ಶಾಲೆಗಳಂತೆಯೇ ಮಠಗಳೂ ಶಿಕ್ಷಣ ನೀಡಿ ಜ್ಞಾನಾರ್ಜನೆ ಬಿತ್ತುತ್ತಿವೆ. ದೊಡ್ಡಮಠದ ಶ್ರೀಗಳು ಭಕ್ತರ ಸಹಕಾರದಿಂದ ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿಗೆ ಶ್ರಮಿಸಿರುವುದು ಶ್ಲಾಘನೀಯ ಎಂದರು.
ತಹಸೀಲ್ದಾರ್ ಕೆ.ಸಿ.ಸೌಮ್ಯಾ, ಬೆಟ್ಟದಪುರ ಮಠದ ಶ್ರೀ ಚೆನ್ನಬಸವದೇಶೀಕೇಂದ್ರ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಬೆಂಗಳೂರು ಸರ್ಪಭೂಷಣ ಮಠದ ಧರ್ಮದರ್ಶಿ ಪರಮಶಿವಯ್ಯ, ಗುರುಮೂರ್ತಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಬೇಕಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ಅವರು ಕಳುಹಿಸಿದ್ದ ಶುಭ ಸಂದೇಶವನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಓದಿ ತಿಳಿಸಿದರು. ನಾಗಣಸೂರು ರೇವೂರು ಬ್ರಹ್ಮಲಿಂಗೇಶ್ವರ ವ್ಮಠದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ಸೂಗೂರೇಶ್ವರ ಶಿವಾಚಾರ್ಯ ಸ್ವಾಮೀಜಿ, ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ವೀರಶೈವ ಮಹಾಸಭಾ ರಾಷ್ಟ್ರೀಯ ಘಟಕದ ಚಂದ್ರಕಲಾ, ರೋಹಿತ್, ಗಂಗೇಗೌಡ, ನಂದೀಶ್, ರವಿಕುಮಾರ್, ಯೋಗೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ, ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಇತರರಿದ್ದರು. ಭಕ್ತರಿಗೆ ಅನ್ನ ದಾಸೋಹ ನಡೆಯಿತು.