ಜಮಖಂಡಿ: ಕಾಯಕವೇ ಕೈಲಾಸ ಎಂಬ ಸಂದೇಶ ಕೊಟ್ಟಿರುವ ಬಸವಣ್ಣನವರು ಇಂದಿನ ಯುವಕರಿಗೆ ನಾಯಕನಾಗಬೇಕು. ಆದ್ದರಿಂದ ಸಂಪತ್ತಿನ ಬೆನ್ನು ಹತ್ತಿ ಸಂತಸ ಕಳೆದುಕೊಳ್ಳಬಾರದು. ಜೀವನದ ಸತ್ಯ ಅರ್ಥಮಾಡಿಕೊಳ್ಳಬೇಕು ಎಂದು ಓಲೇಮಠದ ಆನಂದ ದೇವರು ಶ್ರೀಗಳು ಹೇಳಿದರು.

ನಗರದ ಐತಿಹಾಸಿಕ ಓಲೇಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏ.29ರ ವರೆಗೆ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆ ಅಂಗವಾಗಿ ಹತ್ತನೆ ದಿನವಾದ ಗುರುವಾರ ಸಂಜೆ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಮ್ಮ ಹುಟ್ಟು-ಸಾವು ಭಗವಂತನ ಕೈಯಲ್ಲಿದೆ. ಯಾರೂ ಶಾಶ್ವತವಾಗಿ ಉಳಿಯಲು ಬಂದಿಲ್ಲ. ಒಂದಿಲ್ಲ ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗಲೇಬೇಕು. ಭಗವಂತ ಕೊಟ್ಟಿರುವ ಸುಂದರವಾದ ಬದುಕನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದು ಆಶೀರ್ವಚನ ನೀಡಿದರು.
ಝುಂಜರವಾಡದ ಬಸವರಾಜೇಂದ್ರ ಶರಣರು ಪ್ರವಚನ ನುಡಿ ಹಂಚಿಕೊಳ್ಳುತ್ತ ಮಾತನಾಡಿ, ಭಗವಂತನ ಮೇಲಿನ ನಂಬಿಕೆಯ ಕೊರತೆಯಿಂದ ನರಕ ಸೃಷ್ಟಿ ಮಾಡಿಕೊಳ್ಳಬಾರದು. ಪವಿತ್ರವಾದ ನಂಬಿಕೆ ಅಂತಃಕರಣದಲ್ಲಿದ್ದರೆ ದುಃಖವಿಲ್ಲ, ನೋವಿಲ್ಲ ಎಂದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಬಸವಾದಿ ಶಿವಶರಣರ ಪ್ರತಿಯೊಂದು ವಚನವೂ ಬದುಕಿನ ದಾರಿಯನ್ನು ತೋರಿಸುತ್ತವೆ. ಬದುಕನ್ನು ಕಟ್ಟಿಕೊಳ್ಳಲು ಒಂದೇ ಒಂದು ವಚನ ಸಾಕು. ಸಮಾಜದಲ್ಲಿ ತಾಂಡವವಾಡುತ್ತಿರುವ ಅಸ್ಪಶ್ಯತೆಯನ್ನು ತೊಡೆದು ಹಾಕಲು ಬಸವಣ್ಣನವರ ಅನೂಯಾಯಿಗಳಾಗಿ ಕೆಲಸ ಮಾಡಬೇಕು ಎಂದರು.
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ಬಸವಾದಿ ಶಿವಶರಣರು ಪ್ರತಿಪಾದಿಸಿದ್ದ ಶರಣ ಸಂಸ್ಕೃತಿ ಮತ್ತು ಶರಣ ಧರ್ಮವು ಜಗತ್ತಿನಾದ್ಯಂತ ಪ್ರಸಾರ ಮಾಡುವ ಹೊಣೆಯನ್ನು ಇಂದಿನ ಪೀಳಿಗೆ ನಿಬಾಯಿಸಬೇಕು. ಯಾವುದೇ ತಾರತಮ್ಯವಿಲ್ಲದೆ ಜೀವನ ಮಾಡಲು ಶರಣ ಸಂಸ್ಕೃತಿಯನ್ನು ಮತ್ತೆ ಮರಳಿ ತರಲು ಶ್ರಮಿಸಬೇಕು ಎಂದರು.
ಆಲಗೂರಿನ ಧರಿದೇವರ ಮಠದ ಲಕ್ಷ್ಮಣಮುತ್ಯಾ, ಕಲ್ಯಾಣ ಮಠದ ಗೌರಿಶಂಕರ ಶ್ರೀಗಳು, ಮರುಳರಾಧ್ಯ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ನಾಗಪ್ಪ ಸನದಿ, ವಕೀಲ ಸಿ.ಎಸ್. ಬಾಂಗಿ, ಪ್ರಾಚಾರ್ಯೆ ಡಾ.ಸುನಂದ ಶಿರೂರ, ಮಹಾದೇವ ಇಟ್ಟಿ, ಕಲ್ಲಯ್ಯ ಮಠಪತಿ, ಅಲಕಾ ಮಾಳಗಿ, ಗಿರಿಜಾ ಮೈತ್ರಿ, ಸಂಗಪ್ಪ ದಡ್ಡಿಮನಿ, ಬಸವರಾಜ ಹೊಳೆಪ್ಪಗೋಳ, ನಗರಸಭೆ ಸದಸ್ಯೆ ಬಂದವ್ವ ಅರಕೇರಿ, ರಾಮು ಕಾಖಂಡಕಿ, ಸದಾಶಿವ ಲಾಲಸಂಗಿ, ಸಹನಾ ದಳವಾಯಿ, ಅನಿತಾ ಕಕಮರಿ, ಗಿರಿಜಾ ಬಡ್ಡೂರ, ರೇಖಾ ತೆಲಬಕ್ಕನವರ ಇದ್ದರು.
ರಶ್ಮಿ ರೊಟ್ಟಿ ಭರತನಾಟ್ಯ ಪ್ರದರ್ಶಿಸಿದರು. ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಗಾರ್ತಿ ಸಹನಾ ಹುನಗುಂದ ಪೌರಾಣಿಕ ಕಥೆಯ ನೃತ್ಯ ಪ್ರದರ್ಶಿಸಿದರು. ಬಸವ ಕೇಂದ್ರದ ದೀಪಾ ಯಡಹಳ್ಳಿ ಹಾಗೂ ಸದಸ್ಯೆಯರು ಕ್ರಾಂತಿಗೀತೆ ಹಾಡಿದರು.
ಸರಸ್ವತಿ ಸಬರದ, ಸೌಂದರ್ಯ ಜಕಾತಿ ಪ್ರಾರ್ಥಿಸಿದರು. ಚಂದ್ರಶೇಖರ ಜತ್ತಿ ಸ್ವಾಗತಿಸಿದರು. ಶಿವಲೀಲಾ ಲಿಗಾಡಿ ನಿರೂಪಿಸಿದರು. ಶಿವಾನಂದ ಕೊಣ್ಣೂರ ವಂದಿಸಿದರು.