ವಿಜಯವಾಣಿ ಸುದ್ದಿಜಾಲ ಉಡುಪಿ ರಾಜ್ಯದ ಕರಾವಳಿ ಭಾಗದ ಜನರ ರೈಲಿನ ಕನಸನ್ನು ಈಡೇರಿಸಿದ್ದ ಮತ್ಸ್ಯಗಂಧ ಎಕ್ಸ್ಪ್ರೆಸ್ ಟ್ರೈನ್ ಮುಂದಿನ ವರ್ಷ ಇನ್ನಷ್ಟು ಟ್ರಿಮ್ ಆಗಲಿದ್ದು, ಪ್ರಯಾಣಿಕರಿಗೆ ಇನ್ನಷ್ಟು ಸುಗಂಧದ ಅನುಭವ ನೀಡಲಿದೆ.
ರಾಜ್ಯದ ಕೊಂಕಣ ಭಾಗದಲ್ಲಿ ಮುಂಬಯಿ ಎಲ್ಟಿಟಿ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಓಡಿದ ಮೊದಲ ರೈಲು ಇದಾಗಿದ್ದು, 2025ರ ಫೆಬ್ರವರಿ ತಿಂಗಳಲ್ಲಿ ಮೇಲ್ದರ್ಜೆಗೇರಲಿದೆ ಎಂದು ಕೊಂಕಣ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಚಾರದ ಬೆಳ್ಳಿಹಬ್ಬ
ಮುಂಬಯಿಯಲ್ಲಿರುವ ಕರಾವಳಿಗರು ಹಾಗೂ ಕರಾವಳಿಯ ವಿವಿಧ ಜಿಲ್ಲೆಗಳಿಂದ ಕಾರ್ಯ ನಿಮಿತ್ತ ಮುಂಬಯಿಗೆ ತೆರಳುವವರಿಗೆ ಮತ್ಸ್ಯಗಂಧ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಹೀಗಾಗಿ ಯಾವಾಗಲೂ ಈ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಇರುತ್ತದೆ. ಈ ಹಿನ್ನೆಲೆಯಲಿ ರೈಲಿನ ಕೋಚ್ಗಳನ್ನು ಆಧುನೀಕರಣ ಮಾಡಬೇಕು ಎಂಬ ಬೇಡಿಕೆ ದಶಕಗಳಿಂದ ಕೇಳಿಬರುತ್ತಿತ್ತು. 1998ರಲ್ಲಿ ಆರಂಭಗೊಂಡಿದ್ದ ಈ ರೈಲು, ಹಳೆಯ ಐಆರ್ಎಸ್ ಕೋಚ್ ಹೊಂದಿತ್ತು. ಕಳೆದ ವರ್ಷ ಈ ರೈಲು ತನ್ನ ಸಂಚಾರದ ಬೆಳ್ಳಿಹಬ್ಬ ಪೂರ್ಣಗೊಳಿಸಿತ್ತು.
ಫೆಬ್ರವರಿ 17ರ ಬಳಿಕ ಸಂಚರಿಸಲಿರುವ ಎಲ್ಎಚ್ ಬಿ ಕೋಚ್ ನ ಮತ್ಸ್ಯಗಂಧ ಎಕ್ಸಪ್ರೆಸ್.
ಸಂಸದ ಪೂಜಾರಿ ಒತ್ತಾಯ
ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನ ಬೋಗಿಗಳು ಮಳೆಗಾಲದಲ್ಲಿ ಸೋರುತ್ತಿವೆ. ಹೀಗಾಗಿ ಬೋಗಿ ಬದಲಿಸುವಂತೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಆ.19ರಂದು ಪತ್ರ ಬರೆದು ಒತ್ತಾಯಿಸಿದ್ದರು. ಕೊಂಕಣ ಮಾರ್ಗದಲ್ಲಿ ಓಡಿದ ಮೊದಲ ರೈಲಾಗಿದ್ದರಿಂದ ಕರಾವಳಿ ಭಾಗದ ಜನರಿಗೆ ಅವಿನಾಭಾವ ಸಂಬಂಧ ಇರುವುದನ್ನು ಹಾಗೂ ಈ ರೈಲಿನಲ್ಲಿ ಸಂಭವಿಸಿದ್ದ ಎರಡು ಅವಘಡವನ್ನೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಹೊಸ ಬದಲಾವಣೆ ಏನು?
ಇದುವರೆಗೆ 23 ಐಆರ್ಎಸ್ ಕೋಚ್ನೊಂದಿಗೆ ಸಂಚರಿಸುತ್ತಿದ್ದ ಮತ್ಸ್ಯಗಂಧ ಎಕ್ಸ್ಪ್ರೆಸ್, 22 ಎಲ್ಎಚ್ಬಿ ಕೋಚ್ಗಳೊಂದಿಗೆ ಓಡಾಟ ನಡೆಸಲಿದೆ. ಈ ರೈಲಿನಲ್ಲಿ ಎರಡು 2 ಟೈರ್ ಎಸಿ, ನಾಲ್ಕು 3 ಟೈರ್ ಎಸಿ, ಎರಡು 3 ಟೈರ್ ಎಕಾನಮಿ ಎಸಿ, 8 ಸ್ಲೀಪರ್ ಕೋಚ್, 4 ಜನರಲ್ ಕೋಚ್, ಒಂದು ಜನರೇಟರ್ ಕಾರ್ ಹಾಗೂ ಒಂದು ಎಸ್ಎಲ್ಆರ್ ಇರುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಕೊಂಕಣದ ರೈಲಿನ ಕನಸಿಗೆ ಹಸಿರು ನಿಶಾನೆ
ಇಪ್ಪತ್ತಾರು ವರ್ಷದ ಹಿಂದೆ 1998ರ ಮೇ1ರಂದು ಕೊಂಕಣ ಕರಾವಳಿ ಜನರ ರೈಲಿನ ಕನಸು ಈಡೇರಿತ್ತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ರೈಲ್ವೆ ಸಚಿವ ಮಂಗಳೂರಿನ ಜಾರ್ಜ್ ಫೆರ್ನಾಂಡೀಸ್ ಅವರು ಕೊಂಕಣ ರೈಲ್ವೆ ನಿಗಮವನ್ನು ರಾಷ್ಟ್ರಕ್ಕೆ ಅರ್ಪಿಸಿದ್ದರು. ಆ ದಿನ ಮುಂಬಯಿಯಿಂದ ಮಂಗಳೂರು ಸಂಪರ್ಕಿಸುವ ರೈಲು ಓಡಾಟಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಮುಂಬಯಿ ಎಲ್ಟಿಟಿ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಓಡಿದ ಮೊದಲ ರೈಲು ಇದೇ ಮತ್ಸ್ಯಗಂಧ ಎಕ್ಸ್ಪ್ರೆಸ್ ಆಗಿದೆ. ಇದೀಗ 2025ರ ಫೆ.17 ಮತ್ತು 18ರಂದು ಕ್ರಮವಾಗಿ ಮಂಗಳೂರು ಸೆಂಟ್ರಲ್ (ರೈಲು ನಂ.12620) ಹಾಗೂ ಮುಂಬೈಯ ಲೋಕಮಾನ್ಯ ತಿಲಕ್ ನಿಲ್ದಾಣ (12619)ದಿಂದ ಹೊರಡಲಿದೆ. ಆದರೆ, ಆಧುನಿಕ ಎಲ್ಎಚ್ಬಿ (ಲಿಂಕ್ ಹಾಫ್ಮನ್ ಬುಷ್) ಕೋಚ್ಗಳೊಂದಿಗೆ ಸಂಚರಿಸಲಿವೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಜರ್ಮನ್ ವಿನ್ಯಾಸದ ಎಲ್ಎಚ್ಬಿ ಕೋಚ್ಗಳು ಆರಾಮದ ಹಾಗೂ ಸುಖಕರ ದೀರ್ಘ ಪ್ರಯಾಣಕ್ಕೆ ಉತ್ತಮವಾಗಿರುತ್ತದೆ. ಅಧಿಕ ವೇಗ ಹಾಗೂ ಹೆಚ್ಚು ಸುರಕ್ಷಿತವಾಗಿರುವ ಈ ಕೋಚ್ಗಳಲ್ಲಿ ಶಬ್ದ ಮಾಲಿನ್ಯವೂ ಕಡಿಮೆ ಇರುತ್ತದೆ. 2025ರ ಫೆ.17ರಂದು ಮಂಗಳೂರಿನಿಂದ ಹಾಗೂ ಫೆ.18ರಂದು ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಆಧುನಿಕ ಸ್ಪರ್ಷದೊಂದಿಗೆ ಮತ್ಸ್ಯಗಂಧ ಸಂಚರಿಸಲಿದೆ.
| ಸುಧಾ ಕೃಷ್ಣಮೂರ್ತಿ. ಮೆನೇಜರ್. ಪಬ್ಲಿಕ್ ರಿಲೇಷನ್ಸ್, ಕೆಆರ್ಸಿಎಲ್, ಮಂಗಳೂರು
ಈಗಾಗಲೇ 120 ದಿನಗಳ ಬುಕ್ಕಿಂಗ್ ಆಗಿರುವ ಹಿನ್ನೆಲೆಯಲ್ಲಿ ಈಗಿರುವ ಮತ್ಸ್ಯಗಂಧ ರೈಲು ಸಂಚರಿಸಲಿದೆ. ಮುಂದಿನ ಫೆ.17ರ ಬಳಿಕ ಎಲ್ಎಚ್ಬಿ ಕೋಚ್ ಅಳವಡಿಸಿರುವ ಆಧುನಿಕ ಮತ್ಸ್ಯಗಂಧ ಸಂಚರಿಸಲಿದೆ. ನನ್ನ ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕರಾವಳಿ ಭಾಗದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.