ಗುಳೇದಗುಡ್ಡ: ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಪಾಲಕರ ಆರ್ಥಿಕ ಹೊರೆ ಇಳಿಸುತ್ತವೆ. ಆದ್ದರಿಂದ ಸಮಾಜದಲ್ಲಿ ಸಾಮೂಹಿಕ ಮದುವೆಗಳು ಹೆಚ್ಚು ನಡೆಯಬೇಕು ಎಂದು ಹೊಸದುರ್ಗದ ಭಗೀರಥ ಪೀಠದ ಡಾ. ಪುರುಷೋತ್ತಮಾನಂದ ಪುರಿ ಸ್ವಾಮಿಗಳು ಹೇಳಿದರು.

ಪರ್ವತಿ ಗ್ರಾಮದಲ್ಲಿ ರಾಜಋಷಿ ಭಗೀರಥ ಉಪ್ಪಾರರ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತ್ಯುತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನವದಂಪತಿಗಳು ದಾಂಪತ್ಯ ಜೀವನದಲ್ಲಿ ಒಬ್ಬರಿಗೊಬ್ಬರು ಅರಿತುಕೊಂಡು ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ, ಬದುಕು ಸಾಗಿಸಬೇಕು. ಉಪ್ಪಾರ ಸಮಾಜಬಾಂಧವರು ಸಾಮೂಹಿಕ ಮದುವೆ ಸಮಾರಂಭ ಹಮ್ಮಿಕೊಂಡು ಬಡವರಿಗೆ ನೆರವಾಗಿದ್ದು ಶ್ಲಾಘನೀಯ. ರಾಜಋಷಿ ಭಗೀರಥ ಮಹರ್ಷಿಗಳ ಜಯಂತಿಯಂದು ದಾಂಪತ್ಯಕ್ಕೆ ಕಾಲಿಟ್ಟ ನೀವು ಶರಣರ ಆಚಾರವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಂತೋಷದಿಂದ ಜೀವನ ನಡೆಸಿರಿ ಎಂದು ಹಾರೈಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ದಂಪತಿಗಳು ಒಂದಾಗಿ ಹಿರಿಯ ಮಾರ್ಗದರ್ಶನದಲ್ಲಿ ಸುಂದರವಾದ ಬದುಕು ಕಟ್ಟಿಕೊಳ್ಳಬೇಕು. ಸಂಸ್ಕಾರವಂತರಾಗಿ ಸಮಾಜದಲ್ಲಿ ಬದುಕಿಬಾಳಬೇಕು. ನಿಮ್ಮ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಐದು ಜೋಡಿ ವಧುವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗುರುಸಿದ್ಧೇಶ್ವರ ಮಠದ ಗುರುಸಿದ್ಧ ಪಟ್ಟದಾರ್ಯ ಸ್ವಾಮಿಗಳು, ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು, ಹೊಸರಿನ ಗುರುಸಿದ್ಧೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ರಮೇಶ ಬೂದಿಹಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಕರವೇ ಅಧ್ಯಕ್ಷ ರವೀಂದ್ರ ಅಂಗಡಿ, ಚಂದ್ರು ಪಟ್ಟಣಶೆಟ್ಟಿ, ಆಸಂಗೆಪ್ಪ ನಕ್ಕರಗುಂದಿ, ಮುತ್ತಣ್ಣ ಕಳ್ಳಿಗುಡ್ಡ, ಸುಭಾಷಚಂದ್ರ ಗೌಡರ, ಮರಿಯಪ್ಪ ತೋಗುಣಶಿ, ಗ್ರಾಪಂ ಸದಸ್ಯೆ ಜ್ಯೋತಿ ದಾಸರ, ಮಹಾಂತಯ್ಯ ಸರಗಣಾಚಾರಿ, ಸಚಿನ ಗಾಣಿಗೇರ, ಅನ್ವರಖಾನ ಪಠಾಣ, ಪುಂಡಲೀಕ ಉಪ್ಪಾರ, ಹೇಮಂತ ಮಲ್ಹಾರ, ಅಕ್ಕಮಹಾದೇವಿ ಪಟ್ಟಣಶೆಟ್ಟಿ, ರೂಪಾ ಅಂಗಡಿ ಮತ್ತಿತರರಿದ್ದಾರೆ.