More

    ಮನೋಲ್ಲಾಸ | ಬುದ್ಧಿವಂತಿಕೆಯ ಆಟ

    | ಅನಿತಾ ನಾಗರಾಜ ಹೆಗಡೆ

    ಒಬ್ಬ ಹುಡುಗನಿದ್ದ. ಜನರೆಲ್ಲಾ ಅವನನ್ನು ಪರಮಪೆದ್ದನೆಂದು ತಿಳಿದಿದ್ದರು. ಕಾರಣವಿಷ್ಟೆ, ಬೇರೆಯವರಿಗೆ ಅವನು ದಡ್ಡನೆಂದು ಪರಿಚಯಿಸುವ ಉದ್ದೇಶವುಳ್ಳವರು ಅವನೆದುರಲ್ಲಿ ಒಂದು ಕೈಯಲ್ಲಿ ಒಂದು ರೂಪಾಯಿಯ ಎರಡು ನಾಣ್ಯಗಳನ್ನೂ ಇನ್ನೊಂದು ಕೈಯಲ್ಲಿ ಐದು ರೂಪಾಯಿಯ ಒಂದು ನಾಣ್ಯವನ್ನೂ ಹಿಡಿಯುತ್ತಿದ್ದರು. ಆಗೆಲ್ಲ ಆ ಹುಡುಗ ಒಂದು ರೂಪಾಯಿಯ ಎರಡು ನಾಣ್ಯಗಳನ್ನು ತೆಗೆದುಕೊಳ್ಳುತ್ತಿದ್ದ. ಇದನ್ನು ಗಮನಿಸಿದವರಿಗೆ ಇವನಂತಹ ಪೆದ್ದ ಇನ್ನೊಬ್ಬ ಇಲ್ಲ ಎಂದು ಖಾತರಿಯಾಗುತ್ತಿತ್ತು. ಒಂದು ದಿನ ಆ ಹುಡುಗ ಸ್ವಲ್ಪ ದೂರದಲ್ಲಿ ಆಡುತ್ತಿರುವುದನ್ನು ಗಮನಿಸಿದ ಒಬ್ಬ ವ್ಯಕ್ತಿಗೆ ಅವನ ಪೆದ್ದುತನ ತಿದ್ದುವ ಮನಸ್ಸಾಗಿ ಆತನ ಬಳಿ ಹೋಗಿ ‘ಮಗೂ, ನೀನೇಕೆ ಐದು ರೂಪಾಯಿಗಳ ಒಂದು ನಾಣ್ಯದ ಬದಲು ಒಂದು ರೂಪಾಯಿಯ ಎರಡು ನಾಣ್ಯಗಳನ್ನು ತೆಗೆದು ಕೊಳ್ಳುತ್ತೀಯೆ? ಐದು ರೂಪಾಯಿಯ ಬೆಲೆ ಹೆಚ್ಚಲ್ಲವೇ?’ ಎಂದು ಕೇಳಿದ. ಆಗ ಆ ಹುಡುಗ ಇವನನ್ನು ನೋಡಿ ಮುಗುಳ್ನಗುತ್ತಾ ಹೀಗೆಂದ- ‘ಸರ್, ನಾಲ್ಕು ತಿಂಗಳಿನಿಂದ ಹೀಗೇ ಆಟ ನಡೀತಿದೆ. ಅವರು ಹೀಗೆ ಮಾಡಿದಾಗಲೆಲ್ಲ ನನಗೆ ಉಚಿತವಾಗಿ ಎರಡು ರೂಪಾಯಿ ಸಿಗುತ್ತಿದೆ. ಯಾವತ್ತು ನಾನು ಐದು ರೂಪಾಯಿಯ ನಾಣ್ಯಕ್ಕೆ ಕೈ ಹಾಕುತ್ತೇನೋ ಅವತ್ತೇ ಈ ಆಟ, ಈ ಮಜಾ ಎರಡೂ ನಿಂತುಹೋಗುತ್ತದೆ, ನನ್ನ ಪೆದ್ದುತನದ ಗುಟ್ಟೇ ಇದು.’

    ಇಲ್ಲಿ ನಿಜವಾದ ಮೂರ್ಖರು ಯಾರು? ಆ ಹುಡುಗನೋ ಅಥವಾ ಅವನನ್ನು ದಡ್ಡನೆಂದು ತಿಳಿದ ಜನರೋ? ಅನೇಕ ಬುದ್ಧಿವಂತರು ಜನರನ್ನು ದಡ್ಡರನ್ನಾಗಿಸಲು ತಾವು ದಡ್ಡರಂತೆ ನಟಿಸುವುದುಂಟು. ನಿಜವಾದ ದಡ್ಡರು ಅಂತಹ ಬುದ್ಧಿವಂತರ ವರ್ತನೆ ಕಂಡು ತಾವು ಬುದ್ಧಿವಂತರು ಎಂದುಕೊಳ್ಳುತ್ತಾರೆ. ಬುದ್ಧಿವಂತರಿಗೆ ಇಂತಹವರೆದುರಿಗೆ ದಡ್ಡರಂತೆ ವರ್ತಿಸಿ ತಮ್ಮ ಕಾರ್ಯವನ್ನು ಸಹಿಸಿಕೊಳ್ಳುವ ಚಾಣಾಕ್ಷ ಗುಣವಿರುತ್ತದೆ. ನಮ್ಮನ್ನು ಮೂರ್ಖರನ್ನಾಗಿಸಲು ಯತ್ನಿಸುವವರ ಮುಂದೆ ಅವರನ್ನು ಪೇಚಿಗೆ ಸಿಲುಕಿಸಲು ಕೆಲವು ಬಾರಿ ಮೂರ್ಖರ ಪಾತ್ರವನ್ನು ಮಾಡುವುದು ಅನಿವಾರ್ಯ. ಕೆಲವೊಮ್ಮೆ ನಿಜಾಂಶ ಹೊರಬರಬೇಕೆಂದರೆ ನಾವು ಆ ಆಟದಲ್ಲಿ ಕೈ ಜೋಡಿಸಲೇಬೇಕಾಗುತ್ತದೆ. ಆಗ ಅವರ ಆಟದ ಉದ್ದೇಶ ನಮಗೆ ತಿಳಿಯುತ್ತದೆ. ಆಗ ಮಾತ್ರ ಮುಂದೆ ನಮಗೆ ಎದುರಾಗುವ ಸಮಸ್ಯೆಗಳನ್ನು ಬೇರುಸಹಿತ ಕಿತ್ತೊಗೆಯಲು ಸಾಧ್ಯ. ಬುದ್ಧಿವಂತರಿಗೆ ತಮ್ಮ ಬುದ್ಧಿಮಟ್ಟದ ಅರಿವಿದ್ದರೂ ಅವರು ಇತರರ ಎದುರು ತೋರಿಸಿಕೊಳ್ಳುವುದಿಲ್ಲ. ಆದರೆ ಮೂರ್ಖರು ಮಾತ್ರ ತಮ್ಮನ್ನು ತಾವು ಬುದ್ಧಿವಂತರೆಂದೇ ಭಾವಿಸುತ್ತಾರೆ. ಮಾನವನ ಬುದ್ಧಿಶಕ್ತಿಯು ಯಾವುದೇ ಪರಿಸ್ಥಿತಿಯಲ್ಲಿ ಅವನು ಹೇಗೆ ವರ್ತಿಸುತ್ತಾನೆ, ಆ ಸನ್ನಿವೇಶಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಜೀವನದ ಬಗ್ಗೆ ಅರಿವಿರುವವರು ಬದುಕಿನಲ್ಲಿ ಕೇವಲ ಸಂತೋಷಕ್ಕಾಗಿ ಹಪಹಪಿಸದೆ ಮುಂದೆ ನೋವು, ಕಷ್ಟ ಒದಗುವುದನ್ನು ನಿರೀಕ್ಷಿಸಿ ಅದನ್ನು ತಪ್ಪಿಸುವತ್ತ ನೋಟ ನೆಟ್ಟಿರುತ್ತಾರೆ. ನಮ್ಮನ್ನು ನಾವು ಅಳೆದುಕೊಂಡು, ನಿಷ್ಕರ್ಷಿಕೊಂಡು, ಅಂತಹ ನಿಜವಾದ ಬುದ್ಧಿವಂತರ ಸಾಲಿಗೆ ಸೇರಿ ಸಂತೃಪ್ತಿಯ ಸುಭದ್ರ ಜೀವನದತ್ತ ಮುಖ ಮಾಡಲು ಯತ್ನಿಸುವುದೇ ಯಶಸ್ಸಿನ ಗುಟ್ಟು.

    (ಲೇಖಕಿ ಪದವಿ ವಿದ್ಯಾರ್ಥಿನಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts