More

    ಮನೋಲ್ಲಾಸ; ಆತ್ಮಪ್ರಶಂಸೆಯೆಂಬ ಹೊನ್ನಶೂಲ

    ಮಹಾಭಾರತ ಯುದ್ಧ ನಡೆಯುತ್ತಿತ್ತು. ಕರ್ಣನ ಪರಾಕ್ರಮದಿಂದ ತೀವ್ರವಾಗಿ ಗಾಯಗೊಂಡ ಧರ್ಮರಾಜ ರಣಾಂಗಣದಿಂದ ಶಿಬಿರಕ್ಕೆ ಹೋಗಿಬಿಟ್ಟ. ಅವನನ್ನು ಒಮ್ಮೆ ನೋಡಿ ಸಮಾಧಾನ ಪಡಿಸಿ ಬಳಿಕ ಕರ್ಣನನ್ನು ವಧಿಸುವೆಯಂತೆ ಎಂಬ ಮಾತನ್ನು ಒಪ್ಪಿ, ಅರ್ಜುನನು ಶ್ರೀಕೃಷ್ಣನೊಡನೆ ಶಿಬಿರಕ್ಕೆ ಹೋಗಿ ಧರ್ಮರಾಜನನ್ನು ಕಂಡ. ಕೃಷ್ಣಾರ್ಜುನರಿಬ್ಬರೂ ಬಂದುದನ್ನು ನೋಡಿ, ಧರ್ಮರಾಜನು ಕರ್ಣನು ಹತನಾದನೆಂದೇ ಭಾವಿಸಿ ಹರ್ಷಿತನಾದ. ಆದರೆ ಕರ್ಣನಿನ್ನೂ ಹತನಾಗಿಲ್ಲವೆಂದು ಅರಿತು ಅರ್ಜುನನನ್ನು ನಿಂದಿಸಿದ.

    ಗಾಂಡೀವ ಧನುಸ್ಸನ್ನು ಕೃಷ್ಣನಿಗೆ ಕೊಟ್ಟು ಅವನ ಸಾರಥಿಯಾಗೆಂದು ಮೂದಲಿಸಿ, ‘ಅರ್ಜುನನ ಗಾಂಡೀವಕ್ಕೆ ಧಿಕ್ಕಾರವಿರಲಿ’ ಎಂದ. ಆಗ ಕೋಪಗೊಂಡ ಅರ್ಜುನ ಧರ್ಮರಾಜನನ್ನು ಸಂಹರಿಸಲು ಉದ್ಯುಕ್ತನಾದ. ‘ಗಾಂಡೀವ ಧನುಸ್ಸನ್ನು ಬೇರೆಯವರಿಗೆ ಕೊಟ್ಟುಬಿಡು ಎಂದು ಯಾರಾದರೂ ನಿಂದಿಸಿದರೆ ಅವರನ್ನು ಸಂಹರಿಸುವುದಾಗಿ ನಾನು ಪ್ರತಿಜ್ಞೆ ಗೈದಿರುವೆ’ ಎಂದು ಕೃಷ್ಣನಿಗೆ ಅರ್ಜುನನು ಹೇಳಿದ. ಆಗ ಕೃಷ್ಣ ಅರ್ಜುನನ ಪ್ರಾರ್ಥನೆ ಮೇರೆಗೆ ಹೀಗೊಂದು ಉಪಾಯ ಸೂಚಿಸಿದ.

    ‘ಮಾನವಂತನಾದ ಮನುಷ್ಯನು ಯಾವಾಗ ತನ್ನವರಿಂದಲೇ ಮಹಾ ಅವಮಾನವನ್ನು ಹೊಂದುತ್ತಾನೆಯೋ ಅವನು ಬದುಕಿದ್ದರೂ ಸತ್ತಂತೆಯೇ ಸರಿ; ಆದ್ದರಿಂದ ಧರ್ಮರಾಜನನ್ನು ಕುರಿತು ಸ್ವಲ್ಪ ಅವಮಾನಕರವಾದ ಮಾತುಗಳನ್ನು ಹೇಳು. ಆಗ ಧರ್ಮರಾಜನು, ತನ್ನನ್ನು ಅರ್ಜುನನು ಕೊಂದಂತೆಯೇ ಎಂದು ಭಾವಿಸಿಕೊಳ್ಳುತ್ತಾನೆ.

    ಹೀಗೆ ಮಾಡುವುದರಿಂದ ನಿನ್ನ ಪ್ರತಿಜ್ಞೆಯೂ ನೆರವೇರಿದಂತಾಗುತ್ತದೆ; ಧರ್ಮರಾಜನೂ ಸಾಯದಂತಾಗುತ್ತದೆ’ ಎಂದು ಹೇಳಿದ. ಅರ್ಜುನ, ಧರ್ಮರಾಜನನ್ನು ಹೀಯಾಳಿಸಿದ. ಆದರೆ ಒಡನೆಯೇ ಪಶ್ಚಾತ್ತಾಪಪಟ್ಟು ಆತ್ಮಹತ್ಯೆಗೆ ಉದ್ಯುಕ್ತನಾದ. ಇದನ್ನು ತಡೆಯಲು ಧರ್ಮಜ್ಞನಾದ ಕೃಷ್ಣನು, ಆತ್ಮಹತ್ಯೆಗೆ ಸಮಾನವಾದ, ಆದರೆ ಅರ್ಜುನನು ಸಾಯಬೇಕಿಲ್ಲದ ಒಂದು ಉಪಾಯವನ್ನು ತಿಳಿಸಿಕೊಟ್ಟ. ‘ಅರ್ಜುನ, ನಿನ್ನನ್ನು ನೀನು ಹೊಗಳಿಕೋ. ಅದು ನಿನ್ನನ್ನು ನೀನೇ ಕೊಂದುಕೊಂಡಂತೆ’ ಎಂದ. ಅರ್ಜುನ ಹಾಗೆಯೇ ಮಾಡಿದ.

    ಆದರೆ ಅರ್ಜುನನ ಮಾತುಗಳಿಂದ ನೊಂದಿದ್ದ ಧರ್ಮರಾಜನನ್ನು ಸಮಾಧಾನಪಡಿಸಲು ‘ಸತ್ಯದ ಸಂರಕ್ಷಣಾರ್ಥವಾಗಿ ಮಾಡಿದ ನನ್ನ ಮತ್ತು ಅರ್ಜುನನ ಅಪರಾಧವನ್ನು ಕ್ಷಮಿಸು’ ಎಂದು ಕೃಷ್ಣನು ಧರ್ಮರಾಜನ ಕಾಲಿಗೆರಗಿದ. ಪರಿಸ್ಥಿತಿ ತಿಳಿಯಾಗಿ, ಅರ್ಜುನ, ಕರ್ಣಸಂಹಾರಕ್ಕೆ ತೆರಳಿದ.

    ಪರನಿಂದೆ ಮಾಡುವವರು, ಆತ್ಮಪ್ರಶಂಸೆ ಮಾಡಿಕೊಳ್ಳುವವರು ಆತ್ಮಾವಲೋಕನ ಮಾಡಿಕೊಳ್ಳುವುದು ಉಚಿತವಾದೀತು. ಸಾಮಾನ್ಯವಾಗಿ ಮನುಷ್ಯನಲ್ಲಿ ತನ್ನನ್ನು ಯಾರಾದರೂ ಹೊಗಳಬೇಕೆಂಬ ಆಸೆ ತೀವ್ರವಾಗಿರುತ್ತದೆ. ಯಾರೂ ಹೊಗಳದಿರುವವರಿದ್ದಲ್ಲಿ ಕೊನೆಗೆ ತನ್ನನ್ನು ತಾನೇ ಹೊಗಳಿಕೊಳ್ಳಲು ಹೇಸುವುದಿಲ್ಲ!

    ಶ್ರೀರಂಗಮಹಾಗುರುಗಳು, ‘ಒಳ್ಳೆಯದನ್ನು ಪ್ರಶಂಸಿಸುವುದು ಜನರ ಪಾಲಿಗೆ ಬಿಟ್ಟದ್ದು; ಆದರೆ ಕರ್ತವ್ಯನಿಷ್ಠನಾದವನು ಹೊಗಳಿಕೆಗೆ ಹಾತೊರೆಯಬಾರದು. ತಾಯಿ ಮಕ್ಕಳಿಗೆ ಊಟ ಹಾಕಿ ಅದನ್ನು ಜಾಹೀರಾತಿನ ಮೂಲಕ ಊರಲ್ಲೆಲ್ಲ ಪ್ರಚಾರ ಮಾಡಬೇಕೆ? ತಾಯಿತನ ಅವಳಲ್ಲಿ ಮಕ್ಕಳಿಗೆ ಉಣಬಡಿಸುವ ಕೆಲಸ ಮಾಡಿಸುತ್ತೆ.

    ಹೊಗಳಿಕೆ ಎಂಥೆಂಥವರ ಮೈಮನಗಳನ್ನೂ ಉಬ್ಬಿಸಿ ಪ್ರಮಾದಭಾಗಿಗಳನ್ನಾಗಿ ಮಾಡುವಂತಹುದು. ಆದ್ದರಿಂದ ಹೊಗಳಿಕೆಗೆ ಎನಿತೂ ಗಮನ ಕೊಡಬೇಡಿ. ಈಶ್ವರ ಪ್ರೀತಿಗಾಗಿ ಲೋಕಹಿತವಾಗುವಂತೆ ಪ್ರಶಂಸನೀಯವಾದ ಕೆಲಸ ಮಾಡಿ’ ಎಂದು ಎಚ್ಚರಿಸುತ್ತಿದ್ದರು. ಈ ಮಾತುಗಳು ನಮ್ಮ ಜೀವನದುದ್ದಕ್ಕೂ ದಾರಿದೀಪವಾಗಿರಲಿ.

    | ಕೆ ಎಸ್. ರಾಜಗೋಪಾಲನ್ (ಲೇಖಕರು ಸಂಸ್ಕೃತಿ ಚಿಂತಕರು ಮತ್ತು ಪ್ರವಚನಕಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts