ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾಗಿರುವ ಶಂಕಿತ ಆರೋಪಿ ಆದಿತ್ಯರಾವ್ ಬಗ್ಗೆ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.
ಬಾಂಬ್ ಇಟ್ಟಿದ್ದು ನಾನೇ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಆದಿತ್ಯರಾವ್ ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿದ್ದ ಎನ್ನಲಾಗಿದೆ. ಇದಕ್ಕಾಗಿ ಕಳೆದ ಒಂದು ವರ್ಷದಿಂದ ತಯಾರಿ ನಡೆಸಿದ್ದ ಎಂದು ತಿಳಿದುಬಂದಿದೆ.
ಉಡುಪಿಯ ಮಣಿಪಾಲ್ ಮೂಲದ ಆದಿತ್ಯರಾವ್ 2018ರಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದ. ಇದೇ ಆರೋಪದಲ್ಲಿ ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದ.
ಉಡುಪಿಯ ಕೆ.ಎಚ್.ಬಿ ಕಾಲನಿ ಸಮೀಪದ ಆದಿತ್ಯರಾವ್ ಮನೆ ಇದೆ. ಎಂಬಿಯ ಪದವೀಧರ ಆಗಿರುವ ಆದಿತ್ಯರಾವ್, ಮಂಗಳೂರಿನ ಹೋಟೆಲ್ ಒಂದರಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈತ ಪದೇ ಪದೆ ಕೆಲಸ ಬದಲಾಯಿಸುತ್ತಿದ್ದ. 2008ರಲ್ಲಿ ಬ್ಯಾಂಕ್ ಕೆಲಸ ಮಾಡುತ್ತಿದ್ದ. ಬಳಿಕ ಅದನ್ನು ಬಿಟ್ಟು ಸೆಕ್ಯುರಿಟಿ ಗಾರ್ಡ್ ಆಗಿಯೂ ಕೆಲಸ ಮಾಡುತ್ತಿದ್ದ. ಆದರೆ, ಯಾರೊಂದಿಗೂ ಹೆಚ್ಚು ಮಾತನಾಡದೇ ಒಂಟಿಯಾಗಿರುತ್ತಿದ್ದ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್)