ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ.
ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣ ಬಳಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು. ತದನಂತರ ಪರಿಶೀಲನೆ ನಡೆಸಿದಾಗ ಸಜೀವ್ ಬಾಂಬ್ ಇರುವುದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ತೀವ್ರ ಕಟ್ಟೆಚ್ಚರ ವಹಿಸಿ, ಬಾಂಬ್ ನಿಷ್ಟ್ರಿಯ ದಳ ಬಾಂಬ್ ಅನ್ನು ಕೆಂಜಾರು ಮೈದಾನ ಕಡೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ ಸ್ಫೋಟಿಸಿದೆ. ಈ ಮೂಲಕ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದೆ.
ಇದರ ನಡುವೆ ಬಾಂಬ್ ಇಟ್ಟವರು ಯಾರು ಎಂಬುದರ ಬಗ್ಗೆ ತನಿಖೆ ಆರಂಭಿಸಿರುವ ಮಂಗಳೂರು ಪೊಲೀಸರು ಶಂಕಿತ ವ್ಯಕ್ತಿ ಮತ್ತು ವಾಹನ ಫೋಟೋವನ್ನು ಬಿಡುಗಡೆ ಮಾಡಿದೆ. ಸಿಸಿಟಿವಿಯಲ್ಲಿ ಪತ್ತೆಯಾಗಿರುವ ಶಂಕಿತನ ಫೋಟೋವನ್ನು ಪೊಲೀಸರು ರಾಜ್ಯದ ಎಲ್ಲ ಠಾಣೆಗಳಿಗೂ ರವಾನಿಸಿದ್ದಾರೆ. ಅಲ್ಲದೆ ಮಂಗಳೂರಿನಿಂದ ಆತ ತಪ್ಪಿಸಿಕೊಳ್ಳುವ ಅಪಾಯ ಎದುರಾಗಿದ್ದು ನಾಕಾಬಂದಿ ಹಾಕಿ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತ ವ್ಯಕ್ತಿ ಆಟೋದಲ್ಲಿ ಬಂದು ಬ್ಯಾಗ್ ಇಟ್ಟು ತೆರಳಿದ್ದಾನೆ. ಆತ ಸ್ಟಿಲ್ ಡಬ್ಬಿಯಲ್ಲಿ ಬಾಂಬ್ ತುಂಬಿಟ್ಟಿದ್ದ. ಮಂಗಳೂರು ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣದವರೆಗೂ ಬಸ್ನಲ್ಲೇ ಪ್ರಯಾಣ ಮಾಡಿದ್ದಾನೆ. ನಂತರ ವಿಮಾನ ನಿಲ್ದಾಣಕ್ಕೆ ಆಟೋದಲ್ಲಿ ತೆರಳಿದ್ದಾನೆ ಎಂದು ಕೇಂದ್ರೀಯ ಕೈಗಾರಿಕ ಭದ್ರತಾ ಪಡೆಯ ಡಿಜಿಜಿ ಅನಿಲ್ ಪಾಂಡೆ ಮಾಹಿತಿ ನೀಡಿದ್ದಾರೆ.
ಇಂಡಿಗೋ ವಿಮಾನದಲ್ಲಿಯೂ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು, ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಟೇಕಾಫ್ ಆಗಿ, ಹೈದರಾಬಾದ್ಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ವಾಪಸ್ ಕರೆಯಿಸಿ ಪರಿಶೀಲನೆ ನಡೆಸಲಾಯಿತು. ವಿಮಾನದಲ್ಲಿದ್ದ 126 ಪ್ರಯಾಣಿಕರನ್ನು ಕೆಳಗಿಳಿಸಿ ತಪಾಸಣೆ ಮಾಡಲಾಯಿತು.
ರಾಜ್ಯದಲ್ಲಿ ಅಲರ್ಟ್
ಬಾಂಬ್ ಪತ್ತೆ ಪ್ರಕರಣದಿಂದ ರಾಜ್ಯಾದಂತ್ಯ ಹೈಅಲರ್ಟ್ ಘೋಷಣೆಯಾಗಿದೆ. ಮೈಸೂರಿನಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಾರ್ವಜನಿಕರಿಗೆ ಅರಮನೆ ಪ್ರವೇಶ ಬಂದ್ ಮಾಡಲಾಗಿದೆ. ಅರಮನೆಯಲ್ಲಿ ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಅರಮನೆ ಪ್ರವೇಶ ನಿಷೇಧಿಸಲಾಗಿದೆ. ಎನ್ಎಸ್ಜಿ ತಂಡದಿಂದ ಅರಮನೆ ಆವರಣದಲ್ಲಿ ಭದ್ರತಾ ತಪಾಸಣೆಯ ಅಣಕು ಪ್ರದರ್ಶನ ನಡೆಯುತ್ತಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಹೈ ಆಲರ್ಟ್ ಘೋಷಿಸಲಾಗಿದೆ. ಗಡಿಪ್ರದೇಶದಲ್ಲಿ ವಾಹನಗಳ ತಪಾಸಣೆ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್)
ಯಾವುದೇ ಅಪಾಯವಿಲ್ಲದೆ ಬಾಂಬ್ ಬ್ಲಾಸ್ಟ್ : Live Updates from Mangaloreಯಾವುದೇ ಅಪಾಯವಿಲ್ಲದೆ ಬಾಂಬ್ ಬ್ಲಾಸ್ಟ್ : Live Updates from Mangalore
Dighvijay News – ದಿಗ್ವಿಜಯ ನ್ಯೂಸ್ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಜನವರಿ 20, 2020