ಮಂಗಳೂರು: ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ತಂಗುದಾಣ ಬಳಿ ಕಾರ್ಯಾಚರಿಸುತ್ತಿದ್ದ ಕಲರ್ಸ್ ಯುನಿಸೆಕ್ಸ್ ಸೆಲೂನ್ನಲ್ಲಿ ಅನೈತಿಕ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ರಾಮಸೇನೆ ಕಾರ್ಯಕರ್ತರು ಗುರುವಾರ ದಾಳಿ ನಡೆಸಿದ್ದು, ಬಂಧಿತ 14 ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಯುನಿಸೆಕ್ಸ್ ಸೆಲೂನ್ನಲ್ಲಿ ಅನೈತಿಕ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ಗುರುವಾರ ಮಧ್ಯಾಹ್ನ ವೇಳೆ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ನೇತೃತ್ವದ ಕಾರ್ಯರ್ತರು ದಾಳಿ ನಡೆಸಿ ಸೆಲೂನ್ನಲ್ಲಿದ್ದ ಪೀಠೋಪಕರಣಗಳನ್ನು ಹಾನಿಗೈದಿದ್ದರು. ಇದಾದ ಬಳಿಕ ಸೆಲೂನ್ನಲ್ಲಿದ್ದ ಯುವಕ ಹಾಗೂ ಯುವತಿಯರಿಗೆ ಹಲ್ಲೆಗೈದು ನಿಂದಿಸಿ, ಪರಾರಿಯಾಗಿದ್ದರು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
14ಮಂದಿಗೆ ನ್ಯಾಯಾಂಗ ಬಂಧನ: ಘಟನೆ ನಡೆದ ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಪ್ರಸಾದ್ ಅತ್ತಾವರ ಸೇರಿದಂತೆ 14ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಶುಕ್ರವಾರ 14ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಸಿಸಿ ಕ್ಯಾಮರಾದಲ್ಲಿ ದಾಖಲು: ಆರೋಪಿಗಳು ಒಬ್ಬೊಬ್ಬರಾಗಿ ಸೆಲೂನ್ ಒಳಗೆ ಬರುವುದು ಮತ್ತು ಅಲ್ಲಿ ದಾಂಧಲೆ ನಡೆಸುವುದು ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಕ್ಯಾಮರಾ ಹಿಡಿದುಕೊಂಡು ವಿಡಿಯೋ ಸೆರೆ ಹಿಡಿಯುವುದು ಕೂಡಾ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿದೆ. ಇದರಿಂದ ಎಲ್ಲಾ ಆರೋಪಿಗಳನ್ನು ಕ್ಷಿಪ್ರವಾಗಿ ಸೆರೆ ಹಿಡಿಯಲು ಅನುಕೂಲವಾಯಿತು.