ಮಂಗಳೂರು: ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಮಂಗಳೂರು ಜೆಎಮ್ಎಫ್ಸಿ 6 ನ್ಯಾಯಾಲಯ ಆದೇಶ ನೀಡಿದೆ.
ನಿನ್ನೆ ಬೆಂಗಳೂರು ಎಸಿಎಂಎಂ ಕೋರ್ಟ್ ಆದಿತ್ಯ ರಾವ್ನನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಿತ್ತು. ಇಂದು ಮಂಗಳೂರು ಪೊಲೀಸರು ಜೆಎಮ್ಎಫ್ಸಿ 6 ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಆದಿತ್ಯ ರಾವ್ನನ್ನು ನ್ಯಾಯಾಧೀಶ ಕೆ.ಎನ್.ಕಿಶೋರ್ ಕುಮಾರ್ ವಿಚಾರಣೆ ನಡೆಸಿದರು. ಈ ವೇಳೆ ಆದಿತ್ಯ ರಾವ್ ತಾನು ಮಾಡಿದ್ದು ತಪ್ಪು, ನನಗೆ ಪಶ್ಚಾತ್ತಾಪ ಆಗಿದೆ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಆದಿತ್ಯರಾವ್ ಬಳಿ ಆರೋಗ್ಯ ಸರಿಯಾಗಿದೆಯಾ ಎಂದು ಪ್ರಶ್ನಿಸಿದ ನ್ಯಾಯಾಧೀಶರು, ನಿಮಗೆ ಹೇಳಲಿಕ್ಕೆ ಏನಾದರೂ ವಿಷಯ ಇದೆಯಾ ಎಂದು ಕೂಡ ಪ್ರಶ್ನಿಸಿದ್ದಾರೆ. ಆದರೆ ಹೆಚ್ಚೇನೂ ಹೇಳದ ಆದಿತ್ಯ ರಾವ್, ನಾನು ಮಾಡಿದ್ದೆಲ್ಲ ತಪ್ಪು ಎಂದಿದ್ದಾನೆ.
15 ದಿನ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿಕೊಂಡಿದ್ದರು. ಆದರೆ 10 ದಿನಗಳ ಕಾಲ ಮಂಗಳೂರು ಪೊಲೀಸರ ವಶಕ್ಕೆ ನೀಡಿದ್ದಾರೆ.