ಮಂಡ್ಯ: ಆರ್.ಎಸ್.ಫೌಂಡೇಷನ್ ವತಿಯಿಂದ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಭಾನುವಾರ ಮಾಂಟೇಸರಿ ಟೀಚರ್ಸ್, ನರ್ಸರಿ ಟೀಚರ್ಸ್ ತರಬೇತಿ ಸಂಸ್ಥೆ ವತಿಯಿಂದ ಶಿಕ್ಷಕಿಯರಿಗೆ ‘ಶಿಕ್ಷೆ ಮತ್ತು ಪ್ರಶಂಸೆ’ ವಿಷಯದಡಿ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ತಿ.ನರಸೀಪುರ ತಾಲೂಕಿನ ಬಿ.ಸೀಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲಭಾಷಾ ಶಿಕ್ಷಕಿ ಅನಿತಾ ಮನೋಹರಿ, ಮಕ್ಕಳು ತಪ್ಪು ಮಾಡಿದಾಗ ಶಿಕ್ಷೆ ಕೊಡುವುದು ಹಾಗೂ ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸೆ ವ್ಯಕ್ತಪಡಿಸುವ ಬಗ್ಗೆ ಉಪನ್ಯಾಸ ನೀಡಿದರು.
ಸ್ಯಾನ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲೆ ಸುನೀತಾ ಕಾನಪುರೆ, ಆರ್.ಎಸ್.ಫೌಂಡೇಷನ್ನ ಸಂಸ್ಥಾಪಕಿ ರಂಜಿತಾ ‘ಶಿಕ್ಷಕಿಯರ ಜವಾಬ್ದಾರಿಗಳು, ಮಕ್ಕಳ ಜತೆ ಯಾವ ರೀತಿ ವರ್ತಿಸಬೇಕೆಂಬ ಚಟುವಟಿಕೆಗಳ’ ಕುರಿತು ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ 35ಕ್ಕೂ ಹೆಚ್ಚು ಶಿಕ್ಷಕಿಯರು ಪಾಲ್ಗೊಂಡಿದ್ದರು. ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು.