ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್ ಮತ್ತು ಯಶ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ.
ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್ ಸ್ಟಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ಸಿದ್ಧರಾಗಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರದ ಚೈತ್ರಾ ಗೋಶಾಲೆಯ ಕಟ್ಟಡ ನಿರ್ಮಾಣ ಕೆಲಸ ಜವಾಬ್ದಾರಿಯನ್ನು ಯಶ್ ಒಪ್ಪಿಕೊಂಡಿದ್ದರು. ಕೊಟ್ಟ ಮಾತಿನಂತೆ ಕಟ್ಟಡ ಮೇಲ್ಚಾವಣಿ ನಿರ್ಮಾಣದ ಕೆಲಸ ಆರಂಭಿಸಿದ್ದಾರೆ.
ಯಶ್ ನಂತರ ಗೋಶಾಲೆಯ ಸಹಾಯಕ್ಕೆ ಮುಂದಾಗಿರುವ ಇನ್ನೊಬ್ಬ ನಟ ದರ್ಶನ್, ಚೈತ್ರಾ ಗೋಶಾಲೆಗೆ ಭೇಟಿಕೊಟ್ಟು ಹಸುಗಳಿಗೆ ಹುಲ್ಲು ತರಿಸಿಕೊಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗ ತಂಡ ವತಿಯಿಂದ ಗೋಶಾಲೆಯ ಮೇಲ್ಛಾವಣಿ ಹಾಗೂ ಕೊಟ್ಟಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದೆ. ಅಂದಾಜು 13ರಿಂದ 15 ಲಕ್ಷ ರೂಪಾಯಿಗಳವರೆಗೆ ವೆಚ್ಚದ ನಿರ್ಮಾಣ ಕಾರ್ಯವಾಗಿದೆ.
ದರ್ಶನ್ ಅದೇ ಗೋಶಾಲೆಯ ಗೋವುಗಳಿಗೆ 10 ಟ್ರಾಕ್ಟರ್ ಮೇವನ್ನು ದಾನವಾಗಿ ನೀಡಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಮಂಡ್ಯದಲ್ಲಿ ಜೋಡೆತ್ತುಗಳು ಸುದ್ದಿ ಮಾಡುತ್ತಿವೆ. (ದಿಗ್ವಿಜಯ ನ್ಯೂಸ್)