ಶ್ರೀರಂಗಪಟ್ಟಣ: ಅಪ್ರಾಪ್ತೆಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ವಿವಾಹಿತ ಹಾಗೂ ಆತನಿಗೆ ಸಹಕಾರ ನೀಡಿದ್ದ ಇಬ್ಬರು ಯುವಕರನ್ನು ಅರಕರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ನೇರಳೆಕೆರೆ ಗ್ರಾಮದಲ್ಲಿ ಭಾನುವಾರ ಘಟನೆ ನಡೆದಿದ್ದು, ಬಾಲಕಿಯೊಂದಿಗೆ ನಾಪತ್ತೆಯಾಗಿದ್ದ ಗ್ರಾಮದ ಸಿದ್ದಯ್ಯ ಎಂಬುವರ ಪುತ್ರ ಆರೋಪಿ ವೆಂಕಟೇಶ್(36) ಎಂಬಾತನನ್ನು ಒಂದೇ ದಿನದಲ್ಲಿ ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯೊಂದಿಗೆ ಪರಾರಿಯಾಗಲು ಈತನಿಗೆ ಹಣ ಹಾಗೂ ಆಹಾರದ ವ್ಯವಸ್ಥೆ ಕಲ್ಪಿಸಿ ಸಹಾಯ ಮಾಡಿದ್ದ ಅದೇ ಗ್ರಾಮದ ಯುವಕರಾದ ಸಚಿನ್(27) ಮತ್ತು ಕಾರ್ತಿಕ್(26) ಸೇರಿದಂತೆ ಮೂವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ವೆಂಕಟೇಶ್ ವಿವಾಹಿತನಾಗಿದ್ದು, ಪತ್ನಿ ಹಾಗೂ ಮೂವರು ಮಕ್ಕಳು ಇದ್ದಾರೆ. ಅಪ್ತಾಪ್ತೆಗೆ ಪ್ರೇಮದ ತಲೆಕಡಿಸಿ ಆಕೆಯನ್ನು ಅಪಹರಣ ಮಾಡಿ ತೋಟವೊಂದರಲ್ಲಿ ಅತ್ಯಾಚಾರಗೈದು ಬಳಿಕ ಆಕೆಯೊಂದಿಗೆ ನಾಪತ್ತೆಯಾಗಿದ್ದ. ಘಟನೆಯಿಂದ ಆತಂಕಕ್ಕೆ ಒಳಗಾದ ಪಾಲಕರು ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ನಿರ್ದೇಶನದಂತೆ ಹೆಚ್ಚುವರಿ ಎಸ್ಪಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ ಹಾಗೂ ಡಿವೈಎಸ್ಪಿ ಎಚ್.ಎಸ್.ಮುರುಳಿ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಟಿ.ಎಂ.ಪುನೀತ್ ಅವರ ನೇತೃತ್ವದಲ್ಲಿ ಪಿಎಸ್ಐ ವಿನೋದ್ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಾಲಕಿ ಸಮೇತ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ, ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಾಗಿದೆ.