ಮ.ಬೆಟ್ಟ: ಮಲೆ ಮಹದೇಶ್ವರ ಬೆಟ್ಟದಲ್ಲಿ ಲೋಕಾರ್ಪಣೆಗೊಂಡರೂ ಭಕ್ತರ ಬಳಕೆಗೆ ದೊರೆಯದ ಜೇನುಮಲೆ ಭವನ ಫೆ.21ರೊಳಗೆ ಸೇವೆಗೆ ದೊರೆಯಲಿದೆ.
2018ರ ನ.30ರಂದು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ತರಾತುರಿಯಲ್ಲಿ ಉದ್ಘಾಟನೆಗೊಂಡಿದ್ದ ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಜೇನುಮಲೆ ಭವನ ಈವರೆಗೂ ಸಾರ್ವಜನಿಕರ ಬಳಕೆಗೆ ದೊರೆತಿರಲಿಲ್ಲ. ಇದು ಭಕ್ತರಲ್ಲಿ ಬೇಸರ ಮೂಡಿಸಿತ್ತು.
ಈ ಸಂಬಂಧ ಕಾರ್ಯಪ್ರವೃತ್ತರಾದ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಸೋಮವಾರ ಭವನ ಪರಿಶೀಲನೆ ನಡೆಸಿ ಫೆ.21ರೊಳಗೆ ಭಕ್ತರ ಸೇವೆಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ. ಜತೆಗೆ ಇತ್ತೀಚೆಗೆ ಟೆಂಡರ್ ಪ್ರಕ್ರಿಯೆ ನಡೆಸಿ ಭವನಕ್ಕೆ ತಂದಿದ್ದ ಹಾಸಿಗೆ, ಪೀಠೋಪಕರಣಗಳ ಗುಣಮಟ್ಟವನ್ನು ಪರೀಕ್ಷಿಸಿ ಗುಣಮಟ್ಟಕ್ಕೆ ಆದ್ಯತೆ ನೀಡುವುದಾಗಿ ಹೇಳಿದರು.
ಗುಣಮಟ್ಟಕ್ಕೆ ಆದ್ಯತೆ: ಜೇನುಮಲೆ ಭವನದಲ್ಲಿ ಭಕ್ತರಿಗೆ ಅತ್ಯಾಧುನಿಕ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ಇಲ್ಲಿರುವ 90 ರಲ್ಲಿ 50 ಕೊಠಡಿಗಳಿಗೆ ಎಸಿ ಅಳವಡಿಸಲಾಗುವುದು ಎಂದು ಜಯವಿಭವಸ್ವಾಮಿ ತಿಳಿಸಿದರು.
ಟೆಂಡರ್ ಕರೆದು ಉತ್ತಮ ಪೀಠೋಪಕರಣಗಳು, ಹಾಸಿಗೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಭವನದ ಆವರಣದಲ್ಲಿ ವಿಶ್ರಾಂತಿ ಪೀಠಗಳು, ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ಪ್ರಾಧಿಕಾರ ನಿರ್ವಹಣೆ ಮಾಡುತ್ತಿರುವ ಇತರೆ ವಸತಿ ಗೃಹಗಳಿಗಿಂತಲೂ ಜೇನುಮಲೆ ಭವನ ಅತ್ಯುತ್ತಮವಾಗಿರಲಿದೆ ಎಂದರು.