ಸೋಮವಾರಪೇಟೆ: ತಾಲೂಕಿನ ಮಾದಾಪುರದ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ಮಾದಾಪುರ ಗ್ರಾಮವನ್ನು ಹೋಬಳಿ ಮಾಡಲು ಸೋಮವಾರಪೇಟೆ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಶನಿವಾರ ಸಭೆ ಆಯೋಜಿಸಲಾಗಿತ್ತು.
ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಗೆ ಮಾದಾಪುರ, ಗರ್ವಾಲೆ, ಹರದೂರು ಗ್ರಾಮ ಪಂಚಾಯಿತಿಯನ್ನು ಸೇರಿಸಿದ್ದು, ಕಂದಾಯ ಇಲಾಖೆ ನಾಡ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಈ ಮೂರು ಗ್ರಾಮ ಪಂಚಾಯಿತಿಯನ್ನು ಸೇರಿಸಿ ಮಾದಾಪುರ ಹೋಬಳಿಯನ್ನಾಗಿ ಮಾಡಿದರೆ ಸ್ಥಳೀಯ ಜನರಿಗೆ ಅನುಕೂಲವಾಗುತ್ತದೆ ಎಂದು ಮೂವತೋಕ್ಲು ಗ್ರಾಮದ ಗಣೇಶ್ ಹೇಳಿದರು.
ಮಾದಾಪುರ, ಗರ್ವಾಲೆ ಭಾಗದ ವ್ಯಾಪ್ತಿಯ ಬಹುತೇಕ ಗ್ರಾಮಗಳು ಬೆಟ್ಟ ಗುಡ್ಡಗಳಿಂದ ಕೂಡಿದ್ದು ಈ ಭಾಗದಲ್ಲಿ ಸೋಮವಾರಪೇಟೆಯಿಂದ ಕಂದಾಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಕಾರ್ಯ ತಡವಾಗುತ್ತಿದೆ. ಆದ್ದರಿಂದ ಮಾದಾಪುರವನ್ನು ಹೋಬಳಿಯನ್ನಾಗಿ ಮಾಡಿ ಇಲ್ಲೇ ಕಂದಾಯ ಇಲಾಖೆ ಕಚೇರಿ ನಿರ್ಮಿಸಬೇಕು ಎಂದು ಉಮೇಶ್ ಉತ್ತಪ್ಪ ಆಗ್ರಹಿಸಿದರು.
ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿ ಮೊದಲು ಈ ಭಾಗಕ್ಕೆ ಬರುತ್ತಿದ್ದರು. ಇತ್ತೀಚೆಗೆ ಬರುತ್ತಿಲ್ಲ. ಯಾವುದೇ ಕೆಲಸಗಳು ಆಗಬೇಕು ಅಂದರೆ ತಹಸೀಲ್ದಾರ್ ಕಚೇರಿಗೆ ಬರಲು ತಿಳಿಸುತ್ತಾರೆ. ಕೆಲವರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಯಾರೆಂದು ಇದುವರೆಗೂ ತಿಳಿಯದ ಪರಿಸ್ಥಿತಿಗೆ ಇಲ್ಲಿದೆ ಎಂದು ಇಗ್ಗೋಡ್ಲು ಗ್ರಾಮದ ದೇವಯ್ಯ ಹೇಳಿದರು. ಮಾದಾಪುರ ಹೋಬಳಿ ಮಾಡಲು ಗ್ರಾಮ ಸಭೆಯಲ್ಲಿ ಚರ್ಚೆಗಳು ನಡೆದಿವೆ. ಮನವಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ ಮಾತನಾಡಿ, ಮಾದಾಪುರ ಹೋಬಳಿ ಮಾಡಿದಲ್ಲಿ ಸ್ಥಳೀಯರಿಗೆ ಸೋಮವಾರಪೇಟೆಗೆ ತೆರಳುವ ಅವಶ್ಯಕತೆ ಇರುವುದಿಲ್ಲ. ಮಾದಾಪುರ, ಹರದೂರು, ಗರ್ವಾಲೆ ಈ ಮೂರು ಪಂಚಾಯಿತಿ ಈ ಹೋಬಳಿ ವ್ಯಾಪ್ತಿಗೆ ಸೇರಲಿದೆ. ಮಾದಾಪುರದಲ್ಲಿ ಪೊಲೀಸ್ ಉಪಠಾಣೆ, ಆಸ್ಪತ್ರೆ, ಪೆಟ್ರೋಲ್ ಬಂಕ್ ಎಲ್ಲವೂ ಇದೆ. ವಾರದಲ್ಲಿ ಒಂದು ದಿನ ಸಂತೆಯೂ ನಡೆಯುತ್ತಿದೆ. ಈ ಭಾಗದಲ್ಲಿ ಬಸ್ಗಳ ಮಾರ್ಗವು ಚೆನ್ನಾಗಿದ್ದು, ಸೋಮವಾರಪೇಟೆ-ಮಡಿಕೇರಿ ಇವೆರಡು ತಾಲೂಕುಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಯ ಮಧ್ಯದಲ್ಲಿ ಮಾದಾಪುರ ಇದೆ. ಎಲ್ಲ ರೀತಿಯ ಮೂಲ ಸೌಕರ್ಯ ವ್ಯವಸ್ಥೆಯೂ ಇಲ್ಲಿದೆ. ಮುಂದೆ ಸಮಿತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಇದರ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಸೋಮವಾರಪೇಟೆ ತಾಲೂಕು ರೈತ ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ನಿವೃತ್ತ ತಹಸೀಲ್ದಾರ್ ಜಯರಾಮ್, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮನು ಬಿದ್ದಪ್ಪ, ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ, ಗರ್ವಾಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ್, ಹರದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್, ಗೌತಮ್ ಕಿರಗಂದೂರು, ಭವಿನ್ ಮತ್ತಿತರರು ಇದ್ದರು.