ಆಡುಭಾಷೆಯಲ್ಲಿ ಅನುಭವ ಅರುಹಿದ ಮಹಾಯೋಗಿ

blank

ಆಡುಭಾಷೆಯಲ್ಲಿ ಅನುಭವ ಅರುಹಿದ ಮಹಾಯೋಗಿ

(ಲೇಖಕರು ರಾಜ್ಯದ ಕಾನೂನು, ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವರು)

ಮಹಾಯೋಗಿ ವೇಮನರು ಭಾರತೀಯ ದರ್ಶನ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಂತ ಕವಿ. ತಾನು ಕಂಡ, ಅನುಭವಿಸಿದ ಸತ್ಯವನ್ನು ಆಡುಭಾಷೆಯಲ್ಲಿ ಸಣ್ಣ ಸಣ್ಣ ಪದ್ಯಗಳ ಮೂಲಕ ತಿಳಿಸಿದ ಅವರು ಒಬ್ಬ ಸಿದ್ಧಪುರುಷ, ಕ್ರಾಂತಿಕಾರಿ ಚಿಂತಕ, ಮೂಢ ನಂಬಿಕೆ ವಿರೋಧಿ, ಸಮಾಜ ಸುಧಾರಕ. ಪ್ರತಿ ವರ್ಷ ಅವರ ಜಯಂತಿಯನ್ನು ಜ.19ರಂದು ಆಚರಿಸಲಾಗುತ್ತದೆ.

ವೇಮನ ಚಾರಿತ್ರಿಕ ವ್ಯಕ್ತಿಯಾದರೂ ಅವರ ಜೀವನ ಕುರಿತ ದಾಖಲೆಗಳು ವಿರಳ. ಕೆಳವರ್ಗದಿಂದ ಬಂದು ಜನರಾಡುವ ಸರಳ ಭಾಷೆಯಲ್ಲಿ ದರ್ಶನ ಶಾಸ್ತ್ರವನ್ನೇ ತೆರೆದಿಟ್ಟ ಚಿಂತಕರ ಬಗ್ಗೆ, ಸಮಾಜ ಸುಧಾರಕರ ಬಗ್ಗೆ ಪಾಶ್ಚಾತ್ಯರ ಆಗಮನವಾಗುವವರೆಗೆ ಗಂಭೀರವಾದ ಅಧ್ಯಯನ ನಡೆಯಲಿಲ್ಲ. ಅದಕ್ಕೆ ಮಹಾಯೋಗಿ ವೇಮನರೇ ಸಾಕ್ಷಿ.

ಮಹಾಯೋಗಿ ವೇಮನ ಭಾರತ ಕಂಡ ಖ್ಯಾತ ಸಂತರು, ದಾರ್ಶನಿಕರು. ತಾನು ಕಂಡ, ಅನುಭವಿಸಿದ ಸತ್ಯವನ್ನು ಆಡುಭಾಷೆಯಲ್ಲಿ ಸಣ್ಣ ಸಣ್ಣ ಪದ್ಯಗಳ ಮೂಲಕ ತಿಳಿಸಿದ್ದಾರೆ. ಅವುಗಳಲ್ಲಿ ಆಡಂಬರವಿಲ್ಲ, ವೈಭವೀಕರಣವಿಲ್ಲ, ಎಲ್ಲವೂ ನೇರ ಮತ್ತು ಸ್ಪಷ್ಟ. ಸ್ಥಾಪಿತ ಧರ್ಮ, ಜನಾಂಗ, ಜಾತಿ, ದೇಶ, ಭಾಷೆ, ವ್ಯಕ್ತಿ ಪ್ರಚಾರಗಳಂತಹ ಮಾನವ ಕಲ್ಪಿತ ವಿಷಯಗಳಂತೆ ಪರಮ ಸತ್ಯ ಅರಿತು ಆನಂದಿಸಿ ಬರೆದಿದ್ದಾರೆ. ಅವರ ಕಾವ್ಯದಲ್ಲಿ ಮಡಿ-ಮೈಲಿಗೆ, ಪಾಪ-ಪುಣ್ಯ, ಮೇಲು-ಕೀಳು ಸುಳಿದಿಲ್ಲ. ಕೆಟ್ಟದ್ದನ್ನು ಖಂಡಿಸಿದ್ದಾರೆ. ಒಳ್ಳೆಯದ್ದನ್ನು ಪುರಸ್ಕರಿಸಿದ್ದಾರೆ. ಜನಮಾನಸದಲ್ಲಿರುವ ಅಜ್ಞಾನವನ್ನು ದೂರ ಮಾಡಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸರಳವಾಗಿ ಉಪದೇಶಿಸಿದ್ದಾರೆ.

ಜನನ, ಬಾಲ್ಯ

ವೇಮನರು ಆಂಧ್ರಪ್ರದೇಶದ ಕೊಂಡವೀಡು ಪಟ್ಟಣದ ಮೂಗಚಿಂತಪಲ್ಲಿಯಲ್ಲಿ ಕೋಮಗಿರಿ ವೇಮ ಭೂಪಾಲ ಮತ್ತು ಮಲ್ಲಮಾಂಬೆ ಎಂಬ ದಂಪತಿಯ ಮಗನಾಗಿ 1412ರಲ್ಲಿ ಜನಿಸಿದರು. ತೆಲುಗು ಭಾಷಿಕ ಪ್ರದೇಶಗಳನ್ನು ದೀರ್ಘ ಕಾಲ ಆಳಿದ ಕಾಕತೀಯರು 1310ರಲ್ಲಿ ದಿಲ್ಲಿಯ ಮಲಿಕ್ ಕಾಫುರನ ದಾಳಿಯಿಂದಾಗಿ ಧೂಳೀಪಟವಾದರು. ರಾಜಕೀಯ ಅರಾಜಕ ಸ್ಥಿತಿಯಲ್ಲಿ ಸಣ್ಣ ಸಣ್ಣ ರಾಜ್ಯಗಳು ಹುಟ್ಟಿಕೊಂಡವು. ಸ್ವತಃ ರಾಜರಾದ ಪ್ರೋಲಯ ವೇಮರಡ್ಡಿ 1324ರಲ್ಲಿ ಅವಂತಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ಸುಮಾರು 28 ವರ್ಷಗಳ ಕಾಲ ಆಳಿದರು. ಇದೇ ಮನೆತನಕ್ಕೆ ಸೇರಿದ ಕುಮಾರ ಗಿರಿರಡ್ಡಿ (1386-1402) ರಾಜ್ಯ ಕಳೆದುಕೊಂಡ ನಂತರ ಮೂಗಚಿಂತಪಲ್ಲಿ ಗ್ರಾಮದ ಹೊರವಲಯದಲ್ಲಿ ತೋಟದ ಮನೆಯಲ್ಲಿ ವಾಸವಾಗಿದ್ದರು.

ಇಲ್ಲಿಯೇ ಯೋಗಿ ವೇಮನರ ಜನನವಾಯಿತು. ಅರಸು ಮನೆತನದ ಸಂಪ್ರದಾಯದಂತೆ ವೇಮನರು ಮನೆಯಲ್ಲಿಯೇ ಶಿಕ್ಷಣ ಪಡೆದರು. ಮಹಾಸಂತರ ಸಂಪರ್ಕದಿಂದ ಸತ್ಯದ ಸಾಕ್ಷಾತ್ಕಾರವಾದ ನಂತರ ವೇಮನರ ಜೀವನದಲ್ಲಿ ಭಾರಿ ಬದಲಾವಣೆಯಾಯಿತು. ಚಾರ್ಲ್ಸ್ ಫಿಲಸ್ ಬ್ರೌನ್ ಎಂಬ ಬ್ರಿಟಿಷ್ ಅಧಿಕಾರಿ 1816ರಲ್ಲಿ ವೇಮನರ ಜೀವನ ಹಾಗೂ ತತ್ವ ಚಿಂತನೆಯ ಅಧ್ಯಯನ ಮಾಡಿದ. ಜನರಿಂದ ಸಂಗ್ರಹಿಸಿದ 2100 ಪದ್ಯಗಳನ್ನು ಪ್ರಕಟಿಸಿದ.

ವೇಮನರ ಬೋಧನೆ

ಜನರು ಆಡುವ ಭಾಷೆಯೇ ವೇಮನರ ಭಾಷೆ. ಅವರ ಬೋಧನೆ ಜನಸಾಮಾನ್ಯರಿಗೆ ನಿಲುಕುವಂಥದ್ದು. ಅವರು ಬಳಸುವ ರೂಪಕಗಳು, ಉಪಮೆಗಳು ಜನರ ಅನುಭವಕ್ಕೆ ಸಮೀಪವಾಗಿವೆ. ಮಾತುಗಳು ಮೊನಚಾಗಿವೆ, ಮನ ಮಿಡಿಯುವಂತಿವೆ. ಅವರ ಬೋಧನೆಯಲ್ಲಿ ಸತ್ವವಿದೆ, ಶಕ್ತಿ ಇದೆ. ವೈಯಕ್ತಿಕ ಜೀವನ, ಸುಗಮ ಜೀವನ, ರಾಷ್ಟ್ರ ಜೀವನದಲ್ಲಿ ವ್ಯಕ್ತಿ ಪಾಲಿಸಬೇಕಾದ ಜೀವನ ಮೌಲ್ಯಗಳು ಅವರ ಪದ್ಯಗಳಲ್ಲಿವೆ. ಯೋಗಿ ವೇಮನರು ಬಹು ಸಮರ್ಥವಾಗಿ ಪ್ರಭಾವಶಾಲಿಯಾಗಿ ಇವುಗಳನ್ನೆಲ್ಲ ಪ್ರತಿಪಾದಿಸಿದ್ದಾರೆ. ವೇಮನರು ಸಮದರ್ಶಿ. ಅವರಿಗೆ ಭಿನ್ನತೆ ಕಾಣದು. ‘ತನ್ನ ಹಾಗೆ ಅರಿಯೇ, ಧರೆಯ ಜೀವಜಂತು’ ಎಂದ ವೇಮನ ‘ಸಕಲ ಜೀವಿಗಳನು ಸಮನಾಗಿ ನೋಡುವವರೇ ಯೋಗಿ’ ಎಂದು ಬೋಧಿಸಿದರು. ‘ಎಲ್ಲರಲ್ಲಿ, ಎಲ್ಲದರಲ್ಲಿ ಭಗವಂತನನ್ನು ನೋಡುವ ಸಮದೃಷ್ಟಿಯನ್ನು ಮನದಲ್ಲಿ ನಿಲ್ಲಿಸಿ ಲೌಕಿಕ ಆಕರ್ಷಣೆಗಳನ್ನು ತ್ಯಜಿಸಿದವನಿಗೆ ಬ್ರಹ್ಮನ ಸಾಕ್ಷ್ಯಾತ್ಕಾರವಾಗುವುದು’ ಎಂದು ಪ್ರತಿಪಾದಿಸಿದರು. ‘ನಮ್ಮ ಮಾತುಗಳೇ ನಮ್ಮ ವ್ಯಕ್ತಿತ್ವದ ಕನ್ನಡಿ, ನಮ್ಮ ಮಾತು ಸತ್ಯವಾಗಿರಬೇಕು, ಇನ್ನೊಬ್ಬರ ಮನ ನೋಯಿ ಸದಂತಿರಬೇಕು. ಕೋಗಿಲೆ ವನದಲ್ಲಿ ಕುಹೂ ಕುಹೂ ಎಂದು ಹಾಡುವಂತಿರಬೇಕು’ ಎಂದರು ವೇಮನರು.

ಭಾಷೆಯಾಡದಿರಲು ದೇಶ ಮೆಚ್ಚದಯ್ಯ

ಭಾಷೆಯಾಡುವಾಗ ಬೇಕು ಹೊಣೆಯು

ಭಾಷೆ ಹಿರಿಮೆ ಅರಿತು ಈಶನರಿಯಬೇಕು

ವಿಶ್ವದಾಭಿರಾಮ ಕೇಳು ವೇಮ

ಎಂದಿದ್ದಾರೆ ವೇಮನರು. ‘ಇನ್ನೊಬ್ಬರು ಮಾತನಾಡುವಾಗ ಲಕ್ಷ್ಯ ಕೊಟ್ಟು ಕೇಳಬೇಕು. ಸಜ್ಜನರ ಮಾತು ಬಂಗಾರ ಮೊಳಗಿದಂತೆ. ಅಯೋಗ್ಯರ ಮಾತು ಕಂಚು ಮೊಳಗಿದಂತೆ’ ಎಂದು ಸಾರುವ ವೇಮನರು, ‘ಇತರರನ್ನು ಗೌರವಿಸಬೇಕು. ಎಲ್ಲರೂ ಸಮತೆ ಸಂಯಮದಿಂದಿರಬೇಕು. ಸೇವಾ ಪಥದಲ್ಲಿರುವವರಿಗಂತೂ ಸಹನೆ ಒಂದು ದೊಡ್ಡ ಶಕ್ತಿ. ಪ್ರೀತಿ ಪ್ರೇಮ ಬಾಳಿನ ಕಣ್ಣುಗಳಿದ್ದಂತೆ. ಅವನ್ನು ಕಳೆದುಕೊಂಡವರ ಬಾಳು ಕುರುಡಾಗುತ್ತದೆ. ಕುಟುಂಬ ಜೀವನ ಶಾಂತಿ ನೆಮ್ಮದಿಯಿಂದ ಇರಬೇಕಾದರೆ ಕುಟುಂಬದ ಸದಸ್ಯರಲ್ಲಿ ಪ್ರೀತಿ ಪ್ರೇಮ ಬೆಸೆದಿರಬೇಕು’ ಎನ್ನುತ್ತಾರೆ.

ತಂದೆ-ತಾಯಿ ತಮ್ಮ ತನಯ, ಅಣ್ಣ-ತಮ್ಮ/

ಸುಖದ ಬಂಧು, ಭೃತ್ಯ ಸಕಲ ಜನರು

ಕಲೆತು ವರ್ದಿಪತ್ನಿ ಘನತೆ ಇರುವುದಷ್ಟೆ

ವಿಶ್ವದಾಭಿರಾಮ ಕೇಳು ವೇಮ.

‘ದೇವರು ಕೊಟ್ಟ ವರಗಳಲ್ಲಿ ಅತ್ಯಂತ ಶ್ರೇಷ್ಠವಾದುದು ನಿಷ್ಕಳಂಕ ಪ್ರೀತಿ’ ಎಂದು ಸಾರುವ ವೇಮನರು ‘ನಿಜವ ಶ್ರಮದಿ ಅರಿತು ನಿತ್ಯನಾಗಬೇಕು, ಮಾತಿನೊಳಗೆ ಮಾತುಗಾತಕೊಂಡು ನುಡಿಯ ಕೇಳುವವನಿಗೆ – ನೋಟರೋ’ ಎಂದು ಎಚ್ಚರಿಸುತ್ತಾರೆ.

ಉರ್ವಿವಾಸಿಗೆಲ್ಲ ಒಂದೇ ತಾಟವಿಟ್ಟು

ಅರಳಿಸಿ ಸ್ನೇಹನ ಅಳಿಸಿ ಕುಲವ

ಶಿರದ ಮೇಲೆ ಕರವ ಇರಿಸಿ ಉಣಲು ಹೇಳಿರೋ

ವಿಶ್ವದಾಭಿರಾಮ ಕೇಳು ವೇಮ

ವೇಮನರ ವಚನದಲ್ಲಿ ಆದರ್ಶ ಸಮಾಜದ ಆಶಯ ಧ್ವನಿತವಾಗಿದೆ. ಸಹಭೋಜನ ಮಾಡುವುದೆಂದರೆ ಸಮಾನತೆಯನ್ನು ನೈಜವಾಗಿ ಆಚರಿಸುವುದಾಗಿದೆ. ಒಂದೇ ತಾಟಿನಲ್ಲಿ ಊಟ ಮಾಡುವುದು ಎಂದರೆ ಇಲ್ಲಿ ಆಹಾರದಲ್ಲಿ ಭಿನ್ನತೆ ಇಲ್ಲ ಎಲ್ಲರಲ್ಲೂ ಪ್ರೀತಿ ಪ್ರೇಮ ಅರಳಬೇಕು ಜಾತಿಯ ಭಾವನೆ ಅಳಿಸಬೇಕು ಎಂದರ್ಥ. ಜಾತಿ-ಮತ ಪಂಥಗಳನ್ನು ಮೀರಿದ ವೇಮನರ ವಿಚಾರಧಾರೆ ಮನುಕುಲದ ಒಳಿತನ್ನು ಬಯಸುವವರಿಗೆ ದಾರಿದೀಪವಾಗಿದೆ. ವೇಮನ ತನ್ನ ಕಾಲಕ್ಕಿಂತ ಬಹು ಮುಂದೆ ಇದ್ದ ಉದಾರವಾದಿಯಾಗಿದ್ದಾರೆ. ಅವರ ಜೀವನ, ಕಾವ್ಯ, ಸತ್ಯ ಪ್ರತಿಪಾದನೆ ವ್ಯಕ್ತಿಯನ್ನು ಉದ್ಧರಿಸುವ ಪ್ರಕಾಶವಾಗಿದೆ.

ಸುಮಾರು 68 ವರ್ಷ ಬಾಳಿದ ಯೋಗಿ ವೇಮನರು ಕಡಪಾ ಜಿಲ್ಲೆಯ ಕದಿರು ತಾಲ್ಲೂಕಿನ ಕಟಾರುಪಲ್ಲಿಯಲ್ಲಿ ನಿಧನರಾದರು. ವೇಮನರ ಜೀವಿತ ಕಾಲ 1412ರ ಜ. 19ರಿಂದ 1480ರ ರಾಮನವಮಿಯವರೆಗೆ ಎಂದು ಹೇಳಲಾಗುತ್ತದೆ.

ನಿರಂತರ ತತ್ವ ಪ್ರಸಾರ

ವೇಮನರ ವಚನಗಳೆಲ್ಲ ತೆಲುಗಿನಲ್ಲಿದ್ದವು. ‘ವೇಮನ ಪ್ರಿಯ ಸೋಮ’ ದಿ. ಎಸ್.ಆರ್. ಪಾಟೀಲರು ಬಹುತೇಕ ವಚನಗಳನ್ನು ಕನ್ನಡೀಕರಿಸಿ ಕರ್ನಾಟಕಕ್ಕೆ ವೇಮನರನ್ನು ಪೂರ್ಣರೂಪದಲ್ಲಿ ಪರಿಚಯಿಸಿದರು. ಹುಬ್ಬಳ್ಳಿ-ಧಾರವಾಡದ ವೇಮನ ವಿದ್ಯಾವರ್ಧಕ ಸಂಘವು ವೇಮನರ ತತ್ವಪ್ರಸಾರದ ಕೆಲಸವನ್ನು ಗಣನೀಯವಾಗಿ ಮಾಡಿತು. ರಾಜ್ಯದ ಸಚಿವರಾಗಿದ್ದ ದಿ. ಕೆ.ಎಚ್.ಪಾಟೀಲರು ತತ್ವಪ್ರಸಾರದ ಜತೆಗೆ ಇತಿಹಾಸ ಹೆಕ್ಕಿ ಜ. 19ರಂದು ಜಯಂತಿ ಆಚರಣೆ ಮಾಡಲು ದಿನ ಗೊತ್ತುಪಡಿಸಿದರು.

ವೇಮನರ ತತ್ವಗಳಲ್ಲಿ ಶ್ರದ್ಧೆಯುಳ್ಳ ಜನರಿಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಜಯಂತಿ ಆಚರಣೆ ಮಾಡಲು ಪ್ರೇರಣೆ ಮೂಡಿಸಿದರು. ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವೇಮನ ಪೀಠ ಸ್ಥಾಪಿಸಿ, ಅದು ಯೋಗ್ಯ ಸೇವೆ ಮಾಡುತ್ತಿದೆ. ಪೀಠದ ಪ್ರಾಧ್ಯಾಪಕರಾಗಿದ್ದ ಆಂಧ್ರದ ಕಡಪ ಮೂಲದ ಪ್ರೋ. ಪಿ.ಎಸ್.ಎನ್. ರೆಡ್ಡಿ ಸೇವೆ ಸಲ್ಲಿಸುವಾಗ ವೇಮನರ ಕೆಲ ವಚನಗಳು ನಮ್ಮ ದೇಶದಲ್ಲಿ ಲಭ್ಯವಿಲ್ಲದಿರುವ ಸುಮಾರು 8-10 ವಚನಗಳನ್ನು ಫ್ರಾನ್ಸ್​ನ ಇತಿಹಾಸ ಗ್ರಂಥಾಲಯದಿಂದ ಪಡೆದಿದ್ದು ಸ್ಮರಣೀಯ.

ಈಗ ಪ್ರೋ. ನೀಲಗುಂದ ಅವರು ವೇಮನ ಅಧ್ಯಯನ ಪೀಠದ ಕೆಲಸ ಮುಂದುವರಿಸಿದ್ದು, ಸಾಕಷ್ಟು ಪ್ರಕಟಣೆಗಳನ್ನು ಹಾಗೂ ಸಂಶೋಧನೆಯ ಜತೆಗೆ ಕೆಲವು ಕೋರ್ಸ್​ಗಳನ್ನು ಪ್ರಾರಂಭಿಸಿದ್ದಾರೆ. ಆಂಧ್ರದ ಪ್ರೋ. ಗೋಪಿ ಅವರು ವೇಮನರ ಬಗ್ಗೆ ಬಹುದೊಡ್ಡ ಕೆಲಸ ಮಾಡಿದ ತಜ್ಞ. ಈಗ 5 ವರ್ಷಗಳಿಂದ ಕರ್ನಾಟಕ ಸರ್ಕಾರ ಎಲ್ಲೆಡೆ ಜ. 19ರಂದು ಅಧಿಕೃತವಾಗಿ ಮಹಾಯೋಗಿ ವೇಮನರ ಜಯಂತಿಯನ್ನು ಆಚರಿಸುತ್ತಿದೆ.

ಸ್ಟಾರ್​ ನಟಿಯರಿಗೆ ಡಬ್​ ಮಾಡೋದು ಯುವತಿ ಅಲ್ಲ ಯುವಕ! ಸೌತ್​ ಬ್ಯೂಟಿಗಳ ಧ್ವನಿ ಹಿಂದಿದೆ ಈತನ ಜಾದು | Dubbing Artist

Share This Article

ಖಾಲಿ ಹೊಟ್ಟೆಯಲ್ಲಿ ಒಂದು ಚಿಟಿಕೆ ಶುಂಠಿ ತಿಂದು, ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Ginger

Ginger: ಅಡುಗೆಯ ರುಚಿ ಹೆಚ್ಚಿಸಲು ನಾವು ವಿವಿಧ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತೇವೆ, ಅವುಗಳಲ್ಲಿ ಶುಂಠಿಯೂ…

ಸಣ್ಣ ಇರುವವರು ದಪ್ಪವಾಗಲು ಇಲ್ಲಿದೆ ಸುಲಭ ಮಾರ್ಗ: ಇಂತಹ ನ್ಯಾಚುರಲ್​​ ಆಹಾರ ಸೇವಿಸಿದ್ರೆ ಸಾಕು| Weight Gain

Weight Gain: ಸಾಮಾನ್ಯವಾಗಿ ದಪ್ಪಗಿರುವ ವ್ಯಕ್ತಿಗಳು ಸಣ್ಣದಾಗಲು ಕಷ್ಟ ಎಂದು ಬಹುತೇಕರು ಪರಿಗಣಿಸುತ್ತಾರೆ. ಆದರೆ, ಸಣಕಲು…

ನಾಗರಹಾವು ಕಚ್ಚಿದ್ರೆ ತಕ್ಷಣ ಈ ರೀತಿ ಮಾಡಿ… ಇಲ್ಲವಾದಲ್ಲಿ ಮೂರೇ ನಿಮಿಷಕ್ಕೆ ಪ್ರಾಣ ಹೋಗುತ್ತೆ! Cobra Snake

Cobra Snake : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು…