More

    ಕೋಲಾರ ಜಿಲ್ಲೆಯಾದ್ಯಂತ ಶಿವಾಲಯಗಳಲ್ಲಿ ಶಿವನಾಮ ಸ್ಮರಣೆ, ಹರಿದುಬಂದ ಭಕ್ತ ಸಾಗರ

    ಕೋಲಾರ: ಜಿಲ್ಲೆಯಾದ್ಯಂತ ಶುಕ್ರವಾರ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಕಳೆಗಟ್ಟಿತು. ನಗರ ಸೇರಿ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಹಬ್ಬ ಆಚರಿಸಲಾಯಿತು.

    ಮಹಿಳೆಯರು ಮನೆ ಮುಂದೆ ರಂಗೋಲಿ ಬಿಡಿಸಿ, ಬಾಗಿಲಿಗೆ ತಳಿರು ತೋರಣ ಕಟ್ಟಿ ಹೂವುಗಳಿಂದ ಸಿಂಗರಿಸಲಾಗಿತ್ತು.
    ಶಿವಾಲಯಗಳಲ್ಲಿ ಇಡೀ ದಿನ ಶಿವನಾಮ ಸ್ಮರಣೆ, ಅಖಂಡ ಭಜನೆ ನಡೆಯಿತು. ಅಲ್ಲದೇ, ವಿಶೇಷ ಪೂಜೆ, ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಬಿಲ್ವಾರ್ಚನೆ, ಯಾಮ ಪೂಜೆ ನಡೆದವು. ದೇವಾಲಯಗಳನ್ನು ತೋರಣದಿಂದ ಸಿಂಗರಿಸಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

    ಕೋಟೆ ಬಡಾವಣೆಯಲ್ಲಿನ ಸೋಮೇಶ್ವರ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬಂದಿತು. ದೇವಾಲಯ ಆವರಣದ ನಂದಿ ವಿಗ್ರಹದ ಮುಂಭಾಗದಲ್ಲಿ ಭಕ್ತರು ದೀಪ ಬೆಳಗಿ ಹಣ್ಣು ಕಾಯಿ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಶಿವಲಿಂಗ ದರ್ಶನದೊಂದಿಗೆ ತೀರ್ಥ ಪ್ರಸಾದ ಸ್ವೀಕರಿಸಿದರು.

    ಮನೆಗಳಲ್ಲಿ ಹಿರಿಯರು ಉಪವಾಸ ವ್ರತ ಆಚರಿಸಿ, ದೇವರಿಗೆ ರಾಗಿ, ಜೋಳ ಹಾಗೂ ಸಾಮೆ ಪುರಿಯಿಂದ ಸಿದ್ಧಪಡಿಸಿದ ಉಂಡೆಗಳನ್ನು ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದರು.

    ನಗರ ಹೊರವಲಯದ ಪರ್ವತ ಶ್ರೇಣಿಯ ಅಂತರಗಂಗೆ ಬೆಟ್ಟದ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬಸವ ಮೂರ್ತಿಯ ಬಾಯಿಂದ ಬರುವ ಪವಿತ್ರ ಗಂಗೆಗೆ ಭಕ್ತರು ಮುಗಿಬಿಳುತ್ತಿರುವ ದೃಶ್ಯ ಕಂಡುಬಂತು.
    ಶಿವರಾತ್ರಿಯ ಮಾರನೇ ದಿನವಾದ ಪಾರಣೆಯಂದು ಸೂರ್ಯ ಕಿರಣಗಳು ಅಂತರಗಂಗೆ ಬೆಟ್ಟದಲ್ಲಿನ ಕಾಶಿ ವಿಶ್ವೇಶ್ವರಸ್ವಾಮಿ ದೇವರ ಮೂರ್ತಿಯನ್ನು ಸ್ಪರ್ಶಿಸಲಿದ್ದು, ಈ ಚಮತ್ಕಾರದ ವೀಕ್ಷಣೆಗೆ ದೇವಾಲಯದಲ್ಲಿ ಸಿದ್ಧತೆ ನಡೆದಿದೆ.

    ಕಾಳಮ್ಮಗುಡಿ ಬೀದಿಯಲ್ಲಿನ ಕಾಳಿಕಾಂಬಾ ಕಮಟೇಶ್ವರ ದೇವಾಲಯ, ಗೌರಿಪೇಟೆಯ ಬಯಲು ಬಸವೇಶ್ವರ ದೇವಾಲಯ, ಅರಳೆಪೇಟೆಯ ಬಸವೇಶ್ವರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ, ಬಿಲ್ವಾರ್ಚನೆ ನೆರವೇರಿತು.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಿರುವಾರ ಗ್ರಾಮದ ಈಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮ ನಡೆದವು. ಗ್ರಾಮದ ಭಜನಾ ತಂಡದ ಕಲಾವಿದರು ರಾತ್ರಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.

    ರಾಜ್ಯೋತ್ಸವ ರಸಪ್ರಶ್ನೆ - 29

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts