144 ವರ್ಷಗಳಿಗೊಮ್ಮೆ ಜರುಗುವ, ವಿಶ್ವದಲ್ಲೇ ಅತಿ ದೊಡ್ಡ ಧಾರ್ವಿುಕ ಉತ್ಸವವಾದ ‘ಮಹಾ ಕುಂಭ ಮೇಳ’ಕ್ಕೆ ಉತ್ತರ ಪ್ರದೇಶದ ಪ್ರಯಾಗರಾಜ್ ಸರ್ವ ರೀತಿಯಲ್ಲೂ ಸಜ್ಜಾಗಿದೆ. ಲಕ್ಷಾಂತರ ಸಾಧು-ಸಂತರು, ಅಘೊರಿಗಳು ಮತ್ತು ಕೋಟ್ಯಂತರ ಭಕ್ತರು ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯುವ ಈ ‘ಆಧ್ಯಾತ್ಮಿಕ ಮಹಾಸಾಗರ’ದಲ್ಲಿ ಭಕ್ತಿಭಾವದಿಂದ ಮಿಂದೇಳಲಿದ್ದಾರೆ.

45 ದಿನ 40 ಕೋಟಿ ಜನ!
2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ, ಅಂದರೆ ಒಟ್ಟು 45 ದಿನಗಳ ಕಾಲ ಪ್ರಯಾಗ್ರಾಜ್ನಲ್ಲಿ ನಡೆಯಲಿರುವ ಮಹಾಕುಂಭಮೇಳವು ಶತಮಾನದ ಅತಿದೊಡ್ಡ ಧಾರ್ವಿುಕ ಸಮಾರಂಭವಾಗಿದೆ. ಈ ಮಹಾ ಉತ್ಸವದ ಸುಗಮ ನಿರ್ವಹಣೆಗಾಗಿ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಅಭೂತಪೂರ್ವ ಸಿದ್ಧತೆಗಳನ್ನು ಮಾಡಿದೆ. ಸುಮಾರು 40 ಕೋಟಿಗೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಆದರೆ ಸರ್ಕಾರವು ನೂರು ಕೋಟಿ ಜನ ಸೇರುವುದಕ್ಕೆ ಎಷ್ಟು ಸೌಲಭ್ಯಗಳು ಬೇಕೋ ಅಷ್ಟು ಸವಲತ್ತುಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದೆ.
ಸಾಂಸ್ಕೃತಿಕ ವೈವಿಧ್ಯ
ಕುಂಭಮೇಳವು ಧಾರ್ವಿುಕತೆ ಮತ್ತು ಆಧ್ಯಾತ್ಮಿಕತೆಯ ಜತೆಜತೆಗೆ ಭಾರತದ ಸಾಂಸ್ಕೃತಿಕ ವೈವಿಧ್ಯವನ್ನು ಕೂಡ ಪ್ರತಿಬಿಂಬಿಸುತ್ತದೆ. ದೇಶದ ವಿವಿಧ ರಾಜ್ಯಗಳ ಜನರು ಮಾತ್ರವಲ್ಲದೆ, ವಿದೇಶಗಳಿಂದಲೂ ಲಕ್ಷಾಂತರ ಮಂದಿ ಆಗಮಿಸಿ ಈ ಮೇಳದಲ್ಲಿ ಭಾಗವಹಿಸುತ್ತಾರೆ. ನಾನಾ ಭಾರತೀಯ ಸಮುದಾಯಗಳ ಜನರು ಇಲ್ಲಿ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುತ್ತಾರೆ.
ಲಕ್ಷಾಂತರ ಟೆಂಟ್ಗಳು
ಗಂಗಾ ನದಿಯ ದಡದಲ್ಲಿ ತಾತ್ಕಾಲಿಕ ಬೃಹತ್ ಟೆಂಟ್ ಸಿಟಿಯನ್ನು ನಿರ್ವಿುಸಲಾಗಿದೆ. ಸುಮಾರು 1.6 ಲಕ್ಷ ಟೆಂಟ್ಗಳನ್ನು ನಿರ್ವಿುಸಲಾಗುತ್ತಿದೆ. ಈ ತಾತ್ಕಾಲಿಕ ನಗರವು ಯಾತ್ರಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸುವ ಲಕ್ಷಾಂತರ ಟೆಂಟ್ಗಳನ್ನು ಒಳಗೊಂಡಿರುತ್ತದೆ. 1.5 ಲಕ್ಷ ಶೌಚಾಲಯಗಳು, 50 ಸಾವಿರಕ್ಕೂ ಹೆಚ್ಚು ನೀರಿನ ಸಂಪರ್ಕಗಳನ್ನು ಒದಗಿಸುವ ಬೃಹತ್ ಪೈಪ್ಲೈನ್ ಜಾಲವನ್ನು ಸ್ಥಾಪಿಸಲಾಗಿದೆ. 67 ಸಾವಿರ ಎಲ್ಇಡಿ ದೀಪಗಳು, 2 ಸಾವಿರ ಸೌರ ದೀಪಗಳನ್ನು ಅಳವಡಿಸಲಾಗಿದೆ.
ಧಾರ್ವಿುಕ ಚಟುವಟಿಕೆಗಳು
ಭಜನೆ, ಕೀರ್ತನೆ, ಪ್ರವಚನ, ಯೋಗ ಮತ್ತು ಧ್ಯಾನದಂತಹ ಧಾರ್ವಿುಕ ಚಟುವಟಿಕೆಗಳು ಕುಂಭಮೇಳದಲ್ಲಿ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ನಿರಂತರವಾಗಿ ನಡೆಯುತ್ತವೆ. ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ ಭಜನಾ ತಂಡಗಳು, ಕೀರ್ತನಕಾರರು, ಪ್ರವಚನಕಾರರು, ಯೋಗಪಟುಗಳು ಮತ್ತು ಯೋಗ ಶಿಕ್ಷಕರು ಇದರಲ್ಲಿ ಭಾಗವಹಿಸುತ್ತಾರೆ.
ಖದೀಮರ ಮೇಲೆ ನಿಗಾ
ಮಹಾ ಕುಂಭ ನಗರಕ್ಕೆ ಒಟ್ಟು ಸುಮಾರು 40 ಕೋಟಿಗಿಂತ ಅಧಿಕ ಭಕ್ತರು ಭೇಟಿ ಕೊಡುವ ನಿರೀಕ್ಷೆಯಿದ್ದು, ಇಷ್ಟೊಂದು ದೊಡ್ಡ ಸಂಖ್ಯೆಯ ಭಕ್ತರಿಗೆ ಸರಿಯಾದ ಮಾಹಿತಿ ನೀಡುವ ಉದ್ದೇಶದಿಂದ ಮುದ್ರಣ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮದಂಥ ಪ್ರತಿಯೊಂದು ಮಾರ್ಗವನ್ನೂ ಬಳಸಿಕೊಳ್ಳಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಸೈಬರ್ ತಜ್ಞರು ಆನ್ಲೈನ್ ಬೆದರಿಕೆಗಳ ಮೇಲೆ ನಿಕಟ ನಿಗಾ ಇರಿಸಲಿದ್ದಾರೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಫೇಸ್ಬುಕ್, ಎಕ್ಸ್ ಮತ್ತು ಇನ್ಸ್ಟಾಗ್ರಾಮ್ಂಥ ಡಿಜಿಟಲ್ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಗ್ಯಾಂಗ್ಗಳ ಮೇಲೆ ಕಣ್ಣಿಡಲಿದ್ದಾರೆ.
ಕುಂಭಮೇಳ ಜಿಲ್ಲೆ
ಮೇಳದ ಸುಗಮ ನಿರ್ವಹಣೆಗಾಗಿ ಉತ್ತರ ಪ್ರದೇಶ ಸರ್ಕಾರವು ಪ್ರತ್ಯೇಕವಾಗಿ ಕುಂಭ ಮೇಳ ಜಿಲ್ಲೆಯನ್ನು ರಚಿಸಿದೆ. ಈ ಜಿಲ್ಲೆಯು ಪ್ರಯಾಗ್ರಾಜ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಿದೆ. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಭದ್ರತೆಯನ್ನು ಒದಗಿಸುವುದು ಮತ್ತು ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಮುಂತಾದ ಜವಾಬ್ದಾರಿಗಳನ್ನು ಜಿಲ್ಲಾಡಳಿತ ಹೊಂದಿದೆ.
ಸ್ನಾನಘಟ್ಟಗಳ ನಿರ್ಮಾಣ
ಭಕ್ತರು ಗಂಗೆಯಲ್ಲಿ ಸ್ನಾನ ಮಾಡಲು ಘಾಟ್ಗಳನ್ನು ಬಳಸುತ್ತಾರೆ. ಸುಮಾರು 8 ಕಿ.ಮೀ. ಉದ್ದದ ನದಿ ತೀರದಲ್ಲಿ ಸುಮಾರು 25-30 ಘಾಟ್ಗಳನ್ನು ನಿರ್ವಿುಸಲಾಗಿದೆ. ಒಂಬತ್ತು ಪಕ್ಕಾ ಘಾಟ್ಗಳು, 7 ನದಿ ತೀರದ ರಸ್ತೆಗಳು ಮತ್ತು 12 ಕಿ.ಮೀ. ಉದ್ದದ ತಾತ್ಕಾಲಿಕ ಘಾಟ್ಗಳನ್ನು ನಿರ್ವಿುಸಲಾಗಿದೆ. ಸ್ನಾನಕ್ಕೆ ಅನುಕೂಲವಾಗುವಂತೆ ಮೆಟ್ಟಿಲುಗಳು, ಬಟ್ಟೆ ಬದಲಾಯಿಸುವ ಕೊಠಡಿಗಳು ಮತ್ತು ಇತರ ಸೌಲಭ್ಯಗಳನ್ನು ಈ ಘಾಟ್ಗಳು ಹೊಂದಿವೆ.
ಮಹಾಕುಂಭದ ಉದ್ದೇಶ?
- ಧಾರ್ವಿುಕ, ಆಧ್ಯಾತ್ಮಿಕ ಶುದ್ಧೀಕರಣ
- ಪಾಪಗಳಿಂದ ಮುಕ್ತಿ ಪಡೆಯುವುದು
- ಪವಿತ್ರ ಸ್ನಾನದಿಂದ ಮೋಕ್ಷ ಗಳಿಕೆ
- ಆಧಾತ್ಮಕ ಜ್ಞಾನವನ್ನು ವೃದ್ಧಿಸಿಕೊಳ್ಳಲು
ಡ್ರೋನ್ ಸಮೀಕ್ಷೆ, ಸೈಬರ್ ಗಸ್ತು
360 ಡಿಗ್ರಿ ವರ್ಚುವಲ್ ರಿಯಾಲಿಟಿ ಶೋಗಳು, ಅದ್ಭುತ ಡ್ರೋನ್ ಶೋ, ಡ್ರೋನ್ ಸಮೀಕ್ಷೆ ಮೊದಲಾದವು 2025ರ ಮಹಾ ಕುಂಭ ಸಮಯದ ಇತರ ಕೆಲವು ತಂತ್ರಜ್ಞಾನ ವಿಶೇಷಗಳಾಗಿರುತ್ತವೆ. ಸ್ಥಳದಲ್ಲಿ ಸಂಪೂರ್ಣ ಸೈಬರ್ ಸೆಕ್ಯುರಿಟಿ ವ್ಯವಸ್ಥೆ ಮಾಡಲಾಗಿದೆ. ಸೈಬರ್ ಗಸ್ತು ಕಾರ್ಯಕ್ಕೆ 56 ಸೈಬರ್ ವಾರಿಯರ್ಗಳು ಮತ್ತು ತಜ್ಞರನ್ನು ನಿಯೋಜಿಸಲಾಗಿದೆ. ವಂಚಕ ವೆಬ್ಸೈಟ್ಗಳು, ಸಾಮಾಜಿಕ ಮಾಧ್ಯಮ ತಾಣಗಳು, ನಕಲಿ ಲಿಂಕ್ಗಳು ಮತ್ತು ಇತರ ಅಪಾಯಗಳ ತಡೆಗೆ ಒಂದು ಪ್ರತ್ಯೇಕ ಸೈಬರ್ ಪೊಲೀಸ್ ಠಾಣೆಯನ್ನೇ ಸ್ಥಾಪನೆ ಮಾಡಲಾಗಿದೆ.
ಹಿನ್ನೆಲೆ
ಕುಂಭಮೇಳದ ಇತಿಹಾಸ ಪುರಾಣಗಳಲ್ಲಿ ಬೇರೂರಿದೆ. ಸಮುದ್ರಮಂಥನದ ಸಮಯದಲ್ಲಿ ಅಮೃತದ ಕುಂಭಕ್ಕಾಗಿ ದೇವರುಗಳು ಮತ್ತು ರಾಕ್ಷಸರ ನಡುವೆ ಹೋರಾಟ ನಡೆಯಿತು ಎಂಬುದು ಪ್ರತೀತಿ. ಈ ಹೋರಾಟದಲ್ಲಿ ಅಮೃತದ ಕುಂಭದಿಂದ ನಾಲ್ಕು ಹನಿಗಳು ಭೂಮಿಗೆ ಬಿದ್ದವು ಎಂದು ನಂಬಲಾಗಿದೆ. ಈ ಸ್ಥಳಗಳೇ ಕುಂಭಮೇಳ ನಡೆಯುವ ಹರಿದ್ವಾರ, ಪ್ರಯಾಗ್ರಾಜ್, ಉಜ್ಜಯಿನಿ, ನಾಸಿಕ್. ಈ ನಾಲ್ಕು ಸ್ಥಳಗಳಲ್ಲಿ ಕುಂಭಮೇಳವು ಒಂದು ಚಕ್ರದಲ್ಲಿ ನಡೆಯುತ್ತದೆ. ಪ್ರತಿ ಸ್ಥಳದಲ್ಲಿ 12 ವರ್ಷಗಳಿಗೊಮ್ಮೆ ಪುನರಾವರ್ತನೆಯಾಗುತ್ತದೆ.
ಪ್ರಮುಖ ಅಮೃತ ಸ್ನಾನಗಳು
1. ಮಕರ ಸಂಕ್ರಾಂತಿ ಶಾಹಿ ಸ್ನಾನ (ಜನವರಿ 14/15)
2. ಮೌನಿ ಅಮಾವಾಸ್ಯೆ ಶಾಹಿ ಸ್ನಾನ (ಜನವರಿ 29)
3. ವಸಂತ ಪಂಚಮಿ ಶಾಹಿ ಸ್ನಾನ (ಫೆಬ್ರವರಿ 3)
4. ಮಾಘ ಪೂರ್ಣಿಮೆ ಶಾಹಿ ಸ್ನಾನ (ಫೆಬ್ರವರಿ 12)
5. ಮಹಾ ಶಿವರಾತ್ರಿ ಶಾಹಿ ಸ್ನಾನ (ಫೆಬ್ರವರಿ 26)
ಡಿಜಿಟಲ್ ಸ್ಪರ್ಶ, ಭಕ್ತರ ಹರ್ಷ
ಈ ಸಲದ ಮಹಾ ಕುಂಭ ಮೇಳವು ಆಧ್ಯಾತ್ಮಿಕತೆ ಮತ್ತು ಆಧುನಿಕ ಆವಿಷ್ಕಾರಗಳ ಅಭೂತಪೂರ್ವ ಮಿಶ್ರಣ ಆಗಲಿದೆ. ಕಾರ್ಯಕ್ರಮಗಳ ನಿಗದಿತ ಸ್ಥಳವನ್ನು ಸುಲಭವಾಗಿ ಪತ್ತೆ ಮಾಡಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರಿಂದ ಹಿಡಿದು ಭದ್ರತಾ ವ್ಯವಸ್ಥೆಯನ್ನು ಖಾತರಿಪಡಿಸುವವರೆಗೆ ಪ್ರತಿಯೊಂದಕ್ಕೂ ಅತ್ಯಾಧುನಿಕ ಡಿಜಿಟಲ್ ಹಾಗೂ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಕುಂಭ ನಗರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬೃಹತ್ ಪೋಸ್ಟರ್ಗಳ ಮೇಲಿನ ಕ್ಯೂಆರ್ ಕೋಡ್ಅನ್ನು ಸ್ಕ್ಯಾನ್ ಮಾಡಿದರೆ ಇಳೆಯ ಮೇಲಿನ ಅತಿ ದೊಡ್ಡ ಧಾರ್ವಿುಕ ಮೇಳಕ್ಕೆ ನಡೆಸಲಾಗಿರುವ ವ್ಯವಸ್ಥೆಗಳ ಇಂಚಿಂಚು ವಿವರವೂ ಕಣ್ಣ ಮುಂದೆ ಬರುತ್ತದೆ.
ಏಳು ಸುತ್ತಿನ ಕೋಟೆ!
ಕೋಟ್ಯಂತರ ಜನರ ಆಗಮನದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಪೊಲೀಸರು ಏಳು ಸ್ತರಗಳನ್ನು ಒಳಗೊಂಡ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಪಿಎಸಿ, ಎನ್ಡಿಆರ್ಎಫ್, ಎಸ್ಡಿಆರ್ಎಫ್ನ 10 ಕಂಪನಿಗಳನ್ನು ನಿಯೋಜಿಸಲಾಗಿದೆ. 50 ಕಾಲ್ಸೆಂಟರ್ಗಳನ್ನು ತೆರೆಯಲಾಗಿದೆ. ತ್ರಿವೇಣಿ ಸಂಗಮ ಹಾಗೂ ವಿಐಪಿ ಘಾಟ್ಗಳಲ್ಲಿ 2 ತೇಲುವ ರಕ್ಷಣಾ ನಿಲ್ದಾಣಗಳು ತಲೆ ಎತ್ತಿವೆ. ಅಕಸ್ಮಾತ್ ಯಾರಾದರೂ ನೀರಿನಲ್ಲಿ ಮುಳುಗಿದರೆ ಅವರನ್ನು ಪತ್ತೆ ಹಚ್ಚಿ ರಕ್ಷಿಸಲು ಅಂಡರ್ವಾಟರ್ ಡ್ರೋನ್ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ 2750 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸ್ನಾನದ ಘಾಟ್ಗಳಲ್ಲಿ ತುರ್ತು ಕಾರ್ಯ ನಿರ್ವಹಿಸಲು 25 ವಾಟರ್ ಸ್ಕೂಟರ್ಗಳನ್ನು ನಿಯೋಜಿಸಲಾಗಿದೆ.
ಅಯೋಧ್ಯೆಗೂ ಭಕ್ತರ ಮಹಾಪೂರ
ಪ್ರಯಾಗರಾಜ್ನಲ್ಲಿ ನಡೆಯುವ ಮಹಾ ಕುಂಭ ಮೇಳದ ವೇಳೆ ಅಯೋಧ್ಯೆಯ ರಾಮಮಂದಿರಕ್ಕೂ ಅಪಾರ ಭಕ್ತರು ಭೇಟಿ ನೀಡುವ ಸಾಧ್ಯತೆ ಇದೆ. ಅಯೋಧ್ಯೆಯಿಂದ ಪ್ರಯಾಗರಾಜ್ 160 ಕಿಮೀ ದೂರದಲ್ಲಿದ್ದು, ರಸ್ತೆ ಮೂಲಕ 4 ಗಂಟೆಗಳ ಪ್ರಯಾಣವಾಗಿದೆ. ಜನವರಿ 13ರಿಂದ ಫೆಬ್ರವರಿ 12ರವರೆಗೆ ಸುಮಾರು ಎರಡೂವರೆ ಕೋಟಿ ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಗ್ರಾಜ್ ಮಹಾಕುಂಭಕ್ಕೆ ಭೇಟಿ ನೀಡುವ ಶೇ. 5ರಿಂದ 10ರಷ್ಟು ಭಕ್ತರು ಅಯೋಧ್ಯೆಗೆ ಬರುವ ನಿರೀಕ್ಷೆ ಇದೆ. ಮಹಾಕುಂಭಕ್ಕೆ ಒಟ್ಟಾರೆ 40 ಕೋಟಿ ಜನರ ನಿರೀಕ್ಷೆ ಮಾಡಲಾಗುತ್ತಿದೆ. ಪೌಶ್ ಪೂರ್ಣಿಮಾ (ಜನವರಿ 13)ರಿಂದ ಮಾಘಿ ಪೂರ್ಣಿಮಾ (ಫೆಬ್ರವರಿ 12) ವರೆಗಿನ ಅವಧಿಯಲ್ಲಿ 2.5 ಕೋಟಿಯಿಂದ 3 ಕೋಟಿ ಭಕ್ತರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ.