ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಬೆಂಗಳೂರಿನ ಕೊಡಿಗೇಹಳ್ಳಿ ಗ್ರಾಪಂ ಪಿಡಿಒ ರಂಗಸ್ವಾಮಿ ಅವರ ದೊಡ್ಡಬಳ್ಳಾಪುರ ನಿವಾಸದ ಮೇಲೆ ಬುಧವಾರ ಬೆಳಗ್ಗೆ ದಾಲಿ ನಡೆಸಿದ ಲೋಕಾಯುಕ್ತರು ಖಡತಗಳನ್ನು ಪರಿಶೀಲಿಸಿದರು.
ನಗರದ ಟಿ.ಬಿ.ನಾರಾಯಣಪ್ಪ ಬಡಾವಣೆಯಲ್ಲಿರುವ ನಿವಾಸ, ವಾಣಿಜ್ಯ ಸಂಕೀರ್ಣ, ಪಾಲನಜೋಗಹಳ್ಳಿಯಲ್ಲಿರುವ ವಾಣಿಜ್ಯ ಮಳಿಗೆಗಳ ಮೇಲೂ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಇದಲ್ಲದೆ ರಂಗಸ್ವಾಮಿ ಅವರ ಹುಟ್ಟೂರು ತೂಬಗೆರೆ ಹೋಬಳಿಯ ಸೋತೇನಹಳ್ಳಿ ನಿವಾಸ, ರಾಜಾನುಕುಂಟೆಯ ಕಾಕೋಳು ರಸ್ತೆಯಲ್ಲಿರುವ 7 ಕೋಟಿ ರೂ. ಮೌಲ್ಯದ ನಿವಾಸ ಹಾಗೂ ತಾಲೂಕಿನ ಗುಂಜೂರು ಬಳಿಯ ಜಮೀನು ಸೇರಿ ಹಲವೆಡೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ಮಾಡಿದ್ದು, ಸಂಜೆಯಾದರೂ ದಾಖಲೆಗಳ ಪರಿಶೀಲನೆ ಮುಂದುವರಿದಿತ್ತು.
ಅಕ್ರಮ ಆಸ್ತಿ ಪತ್ತೆ: ಸುಮಾರು 20 ಅಧಿಕಾರಿಗಳ ತಂಡ ಬೆಳಗ್ಗೆ 5.30ಕ್ಕೆ ದಾಳಿ ನಡೆಸಿದ್ದು, ಆದಾಯಕ್ಕಿಂತ ಹೆಚ್ಚು ಹಾಗೂ ಬೇನಾಮಿ ಹೆಸರಿನಲ್ಲಿ ಆಸ್ತಿ ಹೊಂದಿರುವ ಆರೋಪದ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲಿದ್ದಾರೆ. ಪಿಡಿಒ ರಂಗಸ್ವಾಮಿ ಅವರ ಪತ್ನಿ ಗೌರಮ್ಮ ತಾಲೂಕಿನ ಕೊಡಿಗೇಹಳ್ಳಿ ಗ್ರಾಪಂ ಉಪಾಧ್ಯಕ್ಷೆಯಾಗಿದ್ದಾರೆ. ಪರಿಶೀಲನೆ ವೇಳೆ ತೂಬಗೆರೆ ಗ್ರಾಪಂ ವ್ಯಾಪ್ತಿಯಲ್ಲಿ 28 ಎಕರೆ ಜಮೀನು ಹೊಂದಿರುವುದು ಪತ್ತೆಯಾಗಿದೆ ಎನ್ನಲಾಗಿದೆ.