ಲಿಂಗಸುಗೂರು : ತಾಲೂಕಿನ ತಾಂಡಾಗಳಲ್ಲಿ ಮದ್ಯ, ಕಳ್ಳಬಟ್ಟಿ ಸಾರಾಯಿ ಮಾರಾಟ ಕುರಿತು ಸಾರ್ವಜನಿಕರ ದೂರು ಹಿನ್ನೆಲೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಮದ್ಯ ಹಾಗೂ ಲಕ್ಷಾಂತರ ರೂ. ನಗದು ವಶಕ್ಕೆ ಪಡೆದರು.
ಡಿವೈಎಸ್ಪಿ ಎಸ್.ಎಸ್.ಹುಲ್ಲೂರು ನೇತೃತ್ವದಲ್ಲಿ ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್ಐ ಪ್ರಕಾಶರಡ್ಡಿ ಡಂಬಳ ಹಾಗೂ ಸಿಬ್ಬಂದಿ ತಂಡ ಶನಿವಾರ ಸಂಜೆ ಗೋನವಾಟ್ಲ ತಾಂಡಾದಲ್ಲಿ ದಾಳಿ ನಡೆಸಿ ಮದ್ಯ ಮಾರಾಟ ಮಾಡುತ್ತಿದ್ದ ರಾಜು ಪೋಮಣ್ಣ ಚವ್ಹಾಣ (29) ಆರೋಪಿಯ ವಶದಲ್ಲಿದ್ದ 11,705 ರೂ. ಮೌಲ್ಯದ 650 ಎಂಎಲ್.ನ 67 ಕಿಂಗ್ ಫಿಷರ್ ಬಾಟಲ್ಗಳು, 330 ಎಂಎಲ್.ನ 24 ಕಿಂಗ್ ಫಿಷರ್ ಟೀನ್ ಬಾಟಲ್ಗಳು ಹಾಗೂ 7,55,390 ರೂ. ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳ್ಳಬಟ್ಟಿ ಮಾರಾಟ ಮಾಡುತ್ತಿದ್ದವರ ಮೇಲೂ ದಾಳಿ ನಡೆಸಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು 6 ಆರೋಪಿಗಳನ್ನು ಬಂಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ನಾಗರಾಜ, ಭೀಮಣ್ಣ, ವೆಂಕಟೇಶ, ಗಿರಿಜಾಪತಿ, ಅಮರೇಶ, ಶರಣಪ್ಪರಡ್ಡಿ, ಈರಣ್ಣ, ನಿಂಗಪ್ಪ, ನಾಗಾರ್ಜುನ ಸೇರಿ ಇತರರಿದ್ದರು.