ಲಿಂಗಸುಗೂರು: ಕಲ್ಯಾಣ ಕರ್ನಾಟಕ ಭಾಗದ ಜನತೆಯ ಬಹುದಿನಗಳ ಬೇಡಿಕೆಯಂತೆ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಲು ಅಧಿಸೂಚನೆ ಹೊರಡಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಸಿ ಕಚೇರಿ ಎಫ್ಡಿಸಿ ಆದಪ್ಪಗೆ ಏಮ್ಸ್ ಹೋರಾಟ ಸಮಿತಿ ಪ್ರಮುಖರು ಸೋಮವಾರ ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪೈಕಿ ರಾಯಚೂರು ಜಿಲ್ಲೆ ಎಲ್ಲ ರಂಗಗಳಲ್ಲಿ ಹಿಂದುಳಿದಿದ್ದು, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ.ಡಿ.ಎಂ.ನಂಜುಂಡಪ್ಪ ವರದಿಯ ಶಿಫಾರಸಿನಂತೆ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪಿಸಬೇಕಿತ್ತು. 2012 ರಲ್ಲಿ ಸಿಎಂ ಜಗದೀಶ ಶೆಟ್ಟರ್ ಅವರು ಜಿಲ್ಲೆಯಲ್ಲಿ ಐಐಟಿ ಸ್ಥಾಪಿಸಲು ಕಲಬುರಗಿ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡರು. ಆದರೆ ಶಿಫಾರಸ್ಸು ಪತ್ರ ಕೇಂದ್ರಕ್ಕೆ ಕಳುಹಿಸುವಾಗ ರಾಯಚೂರು ಜತೆಗೆ ಮೈಸೂರು, ಧಾರವಾಡ ಹೆಸರು ಸೇರಿಸಿ ಕಳುಹಿಸಿದ್ದರಿಂದ ಧಾರವಾಡದ ಪ್ರಬಲ ರಾಜಕೀಯ ಶಕ್ತಿಗಳು ಐಐಟಿಯನ್ನು ಧಾರವಾಡಕ್ಕೆ ಪಡೆದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ 2020 ರಲ್ಲಿ ರಾಜ್ಯಕ್ಕೆ ಏಮ್ಸ್ ಮಂಜೂರು ಮಾಡಲು ನಿರ್ಧರಿಸಿತು. ಆಗ ಜಿಲ್ಲಾಧಿಕಾರಿ ಏಮ್ಸ್ ಸ್ಥಾಪನೆಗೆ ಅಗತ್ಯ ಮೂಲ ಸೌಕರ್ಯಗಳಿವೆ ಎಂದು ಸರ್ಕಾರಕ್ಕೆ ಪತ್ರ ಬರೆದರು. ಅಂದಿನಿಂದ ಇಂದಿನವರೆಗೆ ಏಮ್ಸ್ ಸ್ಥಾಪಿಸುವಂತೆ ಬೇಡಿಕೆಯಿಟ್ಟು, ರಾಯಚೂರಲ್ಲಿ ನಡೆಸುತ್ತಿರುವ ಧರಣಿ 900 ದಿನ ಪೂರೈಸಿದೆ. ಆದರೂ, ಸರ್ಕಾರ ಮುತುವರ್ಜಿ ತೋರುತ್ತಿಲ್ಲ. ಕೂಡಲೇ ಅಧಿಸೂಚನೆ ಪ್ರಕಟಿಸಿ ಕಲ್ಯಾಣ ಕರ್ನಾಟಕ ಭಾಗದ ಜನರ ಆರೋಗ್ಯ, ಪ್ರಾಣ ರಕ್ಷಣೆ, ಪ್ರಾದೇಶಿಕ ಅಸಮತೋಲನ ನಿವಾರಿಸಲು
ದಿಟ್ಟ ಹೆಜ್ಜೆ ಇಡಬೇಕೆಂದು ಒತ್ತಾಯಿಸಿದರು.
ಜಿಲಾನಿಪಾಷಾ, ಮಾದೇಶ ಸರ್ಜಾಪುರ, ಗವಿಸಿದ್ಧಪ್ಪ ಸಾಹುಕಾರ, ಮುದುಕಪ್ಪ ನಾಯಕ, ಚನ್ನಬಸವ ವಿಟ್ಲಾಪುರ, ಶಂಕರಗೌಡ ಗುಂಡಸಾಗರ, ಅಜೀಜ್ ಪಾಷಾ, ಶಿವಪುತ್ರಗೌಡ, ಪ್ರಸಾದರಡ್ಡಿ, ಕುಪ್ಪಣ್ಣ ಮಾಣಿಕ್ ಇತರರು ಇದ್ದರು.