ಲೋಕಾಪುರ: ಅಯ್ಯಚಾರ ಲಿಂಗದೀಕ್ಷೆ ಮಕ್ಕಳಲ್ಲಿ ಸಂಸ್ಕಾರ ವೃದ್ಧಿಯಾಗುತ್ತದೆಂದು ಹಿರೇಮಠದ ಡಾ. ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಹನ್ನೊಂದು ದಿನಗಳ ಪರ್ಯಂತ ಹಮ್ಮಿಕೊಂಡಿದ್ದ ವೇದಾಧ್ಯಯನ ಸಂಸ್ಕೃತಿ, ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಶಿವದೀಕ್ಷೆಗಿಂತ ದೊಡ್ಡ ದೀಕ್ಷೆ ಬೇರೆ ಇಲ್ಲ. ಶಿವದೀಕ್ಷೆ ತೆಗೆದುಕೊಂಡವರಿಗೆ ಲೌಕಿಕ ಬದುಕಿನಲ್ಲಿ ದೈವಿಗುಣ ಹೆಚ್ಚಾಗಲಿದೆ ಎಂದರು.
ಚಿಪ್ಪಲಕಟ್ಟಿಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ವೀರಶೈವ ಸಂಪ್ರದಾಯದಂತೆ ಜಂಗಮ ವಟುಗಳಿಗೆ ನೀಡುವ ಅಯ್ಯಚಾರ ಪದ್ಧತಿಯನ್ನು ಜಂಗಮರು ಉಳಿಸಿಕೊಂಡು ಹೋಗಬೇಕು. ಪೂರ್ವಜರ ಆಚಾರ, ವಿಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದರು.
ಚಿಪ್ಪಲಕಟ್ಟಿಯ ಗುರುಸಿದ್ಧಯ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಸಮಾಜದ ಮುಖಂಡರಾದ ಆರ್.ಕೆ. ಮಠದ, ಎಸ್.ಎನ್.ಹಿರೇಮಠ, ಎಂ.ಎಂ. ವಿರಕ್ತಮಠ, ಗುಣಾಕರ ಶೆಟ್ಟಿ, ಸಂಕಪ್ಪ ಗಂಗಣ್ಣವರ, ಶಿವಪ್ಪ ಚೌಧರಿ, ಸೊಲಬಣ್ಣ ತೇಲಿ, ಶಂಕರ ತೇಲಿ, ಹುದ್ದಾರ, ಪರಶುರಾಮ ವನಶಿ, ಶಿವಪ್ಪ ಗಾಣಗೇರ, ಮುತ್ತಪ್ಪ ಗಂಗಣ್ಣವರ ಇದ್ದರು. ಆರ್.ಜಿ. ಮುತ್ತಿನಮಠ ಶಿಕ್ಷಕರು ನಿರೂಪಿಸಿದರು.