ವಿಜಯವಾಣಿ ಸುದ್ದಿಜಾಲ ಕೋಟ
ಸಾಹಿತ್ಯವೇ ಬದುಕನ್ನು ಶ್ರೀಮಂತಗೊಳಿಸುತ್ತದೆ. ಹೆಚ್ಚೆಚ್ಚು ಓದಬೇಕು. ಅದು ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಈ ನಿಟ್ಟಿನಲ್ಲಿ ಓದುವವರ ಸಂಖ್ಯೆ ಹೆಚ್ಚಬೇಕು ಎಂದು ಉಡುಪಿ ಜಿಲ್ಲಾ ಕಸಾಪದ ಪೂರ್ವಾಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಹಾಗೂ ಮಿತ್ರ ಮಂಡಳಿ ಕೋಟ ವತಿಯಿಂದ ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ.ಕಾರಂತ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾದ ಏಳು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಮಣೂರು ಗೀತಾನಂದ ಫೌಂಡೇಶನ್ನ ಪ್ರವರ್ತಕ ಆನಂದ.ಸಿ.ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರಂತರ ಊರಿನಲ್ಲಿ ಅಮೂಲ್ಯವಾದ ಏಳು ಕೃತಿಗಳು ಬಿಡುಗಡೆಯಾಗಿವೆ. ಈ ಭಾಗದ ಸಮಗ್ರ ಚಿತ್ರಣ ಈ ಕೃತಿಗಳ ಮೂಲಕ ನಮಗೆ ಸಿಗುತ್ತಿದೆ ಎಂದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ನೀಲೇಂದ್ರ ವಾಣಿ ಮತ್ತು ಕೋಟ ಹದಿನಾಲ್ಕು ಗ್ರಾಮಗಳು, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕೋಟ ಅವರ ಸಮಗ್ರ ಬರಹಗಳು ಭಾಗ-1, ಹಿರಿಯ ಸಾಹಿತಿ ಪ್ರೊ.ಉಪೇಂದ್ರ ಸೋಮಯಾಜಿ ಅವರ ಮೆಚ್ಚಿ ಬರೆವ ಪುಳಕ, ಲೇಖಕಿ ಸೃಜನಾ ಸೂರ್ಯ ಅವರ ದುಂಡು ಮಲ್ಲಿಗೆ ಮುಖದವಳು(ಕಥಾ ಸಂಕಲನ), ಲೇಖಕಿ ಸುವ್ರತಾ ಅಡಿಗರ ಮಕ್ಕಳ ಕಾದಂಬರಿ ಬಿಲ್ಲಿ ಮತ್ತು ಗೆಳೆಯರು ಹಾಗೂ ಕನಸುಗಳಿಗೆ ಅರ್ಥ ಹುಡುಕುತ್ತಾ(ಕಥಾ ಸಂಕಲನ) ಲೋಕಾರ್ಪಣೆಗೊಂಡವು.
ಕೃತಿಗಳ ಕುರಿತು ಮುಂಜುನಾಥ ಉಪಾಧ್ಯ ಪಾರಂಪಳ್ಳಿ, ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಉಪನ್ಯಾಸಕ ಜಿ.ಸಂಜೀವ, ಲೇಖಕಿ ಪೂರ್ಣಿಮಾ ಕಮಲಶಿಲೆ ಮಾತನಾಡಿದರು. ಲೇಖಕರ ಪರವಾಗಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು.
ಸಾಹಿತಿ ನರೇಂದ್ರ ಕುಮಾರ ಕೋಟ, ನರಸಿಂಹಮೂರ್ತಿ ರಾವ್ ಮಣಿಪಾಲ, ಶ್ರೀನಿವಾಸ ಉಪಾಧ್ಯ, ಪೂರ್ಣಿಮಾ ಸುರೇಶ್, ಮುಖ್ಯಶಿಕ್ಷಕಿ ಪುಷ್ಪಾವತಿ, ಕೋ ಚಂದ್ರಶೇಖರ ನಾವಡ, ಆನಂದ ಸಾಲಿಗ್ರಾಮ, ದಿನಕರ ಆರ್ ಶೆಟ್ಟಿ ಉಪಸ್ಥಿತರಿದ್ದರು. ಬ್ರಹಾವರ ಕಸಾಪ ಅಧ್ಯಕ್ಷ ರಾಮಚಂದ್ರ ಐತಾಳ ಸ್ವಾಗತಿಸಿದರು. ಲೇಖಕಿ ಸುವ್ರತಾ ಅಡಿಗ ವಂದಿಸಿದರು. ಮಹಾಲಕ್ಷ್ಮೀ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು.