ಅಧಿಕಾರಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಸೂಚನೆ ಮರಳವಾಡಿಯಲ್ಲಿ ಜನಸಂಪರ್ಕ ಸಭೆ ಉದ್ಘಾಟನೆ
ಹಾರೋಹಳ್ಳಿ: ಬೇಸಿಗೆ ಬಿಸಿಲು ಹೆಚ್ಚಾದಂತೆ ಕುಡಿಯುವ ನೀರಿನ ಬವಣೆ ತೀವ್ರವಾಗಲಿದ್ದು, ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಶಾಸಕ ಎಚ್. ಎ. ಇಕ್ಬಾಲ್ ಹುಸೇನ್ ಸೂಚನೆ ನೀಡಿದರು.
ತಾಲೂಕಿನ ಮರಳವಾಡಿಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಮರಳವಾಡಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಜನ ಸಂಪರ್ಕ ಸಭೆ ಮತ್ತು ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 15ನೇ ಹಣಕಾಸು ಯೋಜನೆಯ ಹಣ ಉಳಿಸಿ ಕುಡಿಯುವ ನೀರಿಗೆ ಬಳಸಬೇಕು. ಈಗಾಗಲೇ ಕೆಲ ಕೊಳವೆ ಬಾವಿಗಳು ಬತ್ತಿ ಹೋಗುತ್ತಿದ್ದು, ಜನರಿಗೆ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.
ನಾನು ಶಾಸಕನಾದ ನಂತರ ಕೇವಲ ಒಂದೂವರೆ ವರ್ಷದಲ್ಲಿ ಸುಮಾರು 700 ಕೋಟಿ ರೂ.ನಷ್ಟು ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗಿದೆ. ರಸ್ತೆ, ಶುದ್ಧ ಕುಡಿಯುವ ನೀರು, ಚರಂಡಿ, ಆಶ್ರಯ ಮನೆಗಳ ನೀಡಿಕೆ, ಕಾಂಕ್ರೀಟ್ ರಸ್ತೆ, ಡಾಂಬರೀಕರಣ ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೆಲವು ಮುಗಿದಿದೆ. ಇನ್ನು ಹಲವಾರು ಕಾಮಗಾರಿಗಳು ಚಾಲನೆಯಲ್ಲಿವೆ ಎಂದು ಹೇಳಿದರು.
25 ವರ್ಷಗಳಿಂದ ಇಲ್ಲಿ ಆಳ್ವಿಕೆ ಮಾಡಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದವರು ಹಾರೋಹಳ್ಳಿ ಮರಳವಾಡಿಯನ್ನು ಅತಿ ಹಿಂದುಳಿದ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಚುನಾವಣೆ ಸಮಯ ಮಾತ್ರ ಇವರಿಗೆ ಗೊತ್ತಿತ್ತೇ ವಿನಾ ಅಭಿವೃದ್ಧಿ ಬಗ್ಗೆ ತಿಳಿದಿರಲಿಲ್ಲ. ಈಗ ನಾವು ಅದಕ್ಕೆ ಮುಕ್ತಿ ನೀಡುತ್ತಿದ್ದೇವೆ ಎಂದರು.
ಮರಳವಾಡಿ ಗ್ರಾಮ ಪಂಚಾಯಿತಿಗೆ 5 ಕೋಟಿ ರೂ. ಗೂ ಹೆಚ್ಚು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಹಿಂದೆ 3 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕಾವೇರಿ ನೀರಾವರಿ ನಿಗಮದಿಂದ 5 ಕೋಟಿ ರೂ.ಗೂ ಹೆಚ್ಚು ಹಣ ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದರು.
ಪಿಡಿಒ ರಾಜೇಶ್ವರಿ ಮಾತನಾಡಿ, ನರೇಗಾ ಯೋಜನೆಯಲ್ಲಿ 2 ಕೋಟಿ ರೂ.ಗಳ ಕಾಮಗಾರಿ ನಡೆದಿದ್ದು, 37 ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ. 15ನೇ ಹಣಕಾಸು ಯೋಜನೆಯ 20 ಲಕ್ಷ ರೂ ಹಣವಿದ್ದು ಅದನ್ನು ಸ್ವಚ್ಛತೆ ಹಾಗೂ ಇತರ ಕೆಲಸಗಳಿಗೆ ಬಳಸಲಾಗುವುದು. 144 ಈ ಸ್ವತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.