ಗೋಕರ್ಣ: ಭಾರತೀಯ ಅಕ್ಷರ ವಿದ್ಯೆ ಮತ್ತು ಸಮಗ್ರ ಭಾರತೀಯ ಜ್ಞಾನ ಶಾಖೆಗಳಿಗೆ ವೇದಗಳೇ ಆದಿಮೂಲ. ಈ ಹಿನ್ನೆಲೆಯಲ್ಲಿ ವೇದಗಳು ಕೇವಲ ಮಂತ್ರ ಸಂಹಿತೆಗಳು. ಮಾತ್ರವಲ್ಲದೆ, ಈ ತನಕದ ಸಮಸ್ತ ಸಾಹಿತ್ಯ ಪರಂಪರೆಯ ಉಗಮ ತಾಣವಾಗಿದೆ. ಈ ಹಿನ್ನೆಲೆಯಲ್ಲಿ ವೇದಗಳು ಸನಾತನ ಭಾರತದ ಸರ್ವಾದಿ ಸಾಹಿತ್ಯ ಕೃತಿಗಳಾಗಿದ್ದು, ಇವುಗಳ ಸಮಗ್ರ ಅಧ್ಯಯನಕ್ಕೆ ಸುಸಜ್ಜಿತವಾದ ವ್ಯವಸ್ಥೆಯಾಗಬೇಕು ಎಂದು ಹಿರಿಯ ಸಾಹಿತಿ ಮತ್ತು ಜ್ಯೋತಿರ್ವಿಜ್ಞಾನಿ ಮಹಾಬಲಮೂರ್ತಿ ಕೊಡ್ಲೆಕೆರೆ ಹೇಳಿದರು.

ಇಲ್ಲಿನ ರಮಾ ಫಣಿಭಟ್ಟ ಗೋಪಿ ಅವರು ಇಲ್ಲಿನ ಹಿರಿಯ ಸಾಮಾಜಿಕ ಕಾರ್ಯಕರ್ತ ಮತ್ತು ವಿಶ್ವ ಹಿಂದು ಪರಿಷತ್ ಪ್ರಮುಖ ದಿ.ಡಾ.ಎಸ್.ವಿ. ಜಠಾರ ಕುರಿತು ರಚಿಸಿದ ಸಂಸ್ಮರಣಾ ಗ್ರಂಥ ‘ಗೋಕರ್ಣ ಭೂಷಣ’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಎಡ, ಬಲ ಇತ್ಯಾದಿ ಪಂಥಗಳ ಕುರಿತ ಗದ್ದಲಗಳಲ್ಲಿ ವೇದ ಸಾಹಿತ್ಯದ ಸುಸ್ವರ ಮರೆಯಾಗಿ ಕ್ಷೀಣಿಸುವಂತಾಯಿತು. ಅಂದಿನಿಂದಲೇ ವೇದ ಸಾಹಿತ್ಯ ಅಧ್ಯಯನಕ್ಕೆ ಆದ್ಯತೆ ಮತ್ತು ಅವಕಾಶಗಳ ವ್ಯವಸ್ಥೆ ಆಗಬೇಕಿತ್ತು. ಈ ನಿಟ್ಟಿನಲ್ಲಿ ತೋರಲಾದ ಅವಜ್ಞೆಯಿಂದ ಈ ದೇಶದ ಸನಾತನ ಜ್ಞಾನ ಮೂಲವನ್ನು ವಿಶ್ವಕ್ಕೆ ವಿತರಿಸುವ ಬಹು ಮಹತ್ವದ ಪ್ರಯತ್ನದಿಂದ ಭಾರತ ವಂಚಿತವಾಗುವಂತಾಯಿತು ಎಂದು ಖೇದ ವ್ಯಕ್ತ ಪಡಿಸಿದರು.
ಸಮಾರಂಭದಲ್ಲಿ ಕ್ಷೇತ್ರದ ಪ್ರಧಾನ ವೇದ ವಿದ್ವಾಂಸ ವೇ. ಗಣೇಶ ಜೋಗಳೇಕರ, ರಾಜಗೋಪಾಲ ಅಡಿ ಗುರೂಜಿ ಅವರು ದಿ.ಡಾ.ಎಸ್.ವಿ. ಜಠಾರ ಅವರ ಘನ ವ್ಯಕ್ತಿತ್ವವನ್ನು ಪರಿಚಯಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಕ್ಷೇತ್ರ ಪುರೋಹಿತ ಆಚಾರ್ಯ ನಾರಾಯಣ ಉಪಾಧ್ಯ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದು ಪರಿಷತ್ ಸೇರಿ ಸಮಗ್ರ ಸಂಘ ಪರಿವಾರದ ಕುರಿತಾಗಿ ತಮ್ಮ ಜೀವನವನ್ನು ಅರ್ಪಣೆ ಮಾಡಿಕೊಂಡಿದ್ದ ದಿವಂಗತ ಡಾ.ಎಸ್.ವಿ. ಜಠಾರ ಅವರ ಆರು ದಶಕಗಳಿಗೂ ಹೆಚ್ಚಿನ ಆತ್ಮನಿಷ್ಠ ವೈದ್ಯಕೀಯ ಸೇವೆ, ನಾಟಕ, ಸಂಗೀತ, ವೇದಾಧ್ಯಯನ ಮತ್ತು ದೇವತಾ ಅರ್ಚನೆ ಕುರಿತಾದ ಹೊಂದಿದ್ದ ಪರಮ ಆಸಕ್ತಿಯನ್ನು ಸ್ಥೂಲವಾಗಿ ವರ್ಣಿಸಿದರು.
ದಿ.ಡಾ. ಜಠಾರ ಅವರ ಸೊಸೆ ರಜನಿ ಜಠಾರ ಕೃತಿ ಬಿಡುಗಡೆಗೊಳಿಸಿದರು.
ಗ್ರಂಥಕರ್ತೆ ರಮಾ ಫಣಿಭಟ್ಟ ಗೋಪಿ ಮಾತನಾಡಿದರು. ಬೆಂಗಳೂರಿನ ಧನಲಕ್ಷ್ಮೀ ಎಚ್., ಶಿಕ್ಷಕಿ ಭವಾನಿ ಗೋಪಿ, ಶಂಕರ ಗೋಪಿ ಕಾರ್ಯಕ್ರಮ ನಿರ್ವಹಿಸಿದರು.