ಯಲಬುರ್ಗಾ: ಶರಣರ ಚಿಂತನೆಗಳನ್ನು ಸಮಾಜದಲ್ಲಿ ಬಿತ್ತುವ ಕಾರ್ಯವಾಗಲಿ ಎಂದು ಹುಬ್ಬಳ್ಳಿಯ ಸಿದ್ಧಾರೂಢಮಠ ಹಾಗೂ ಶರಣಪ್ಪನಮಠದ ಶ್ರೀ ಬಸವಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ಶ್ರೀಸಿದ್ಧಾರೂಢ ಬಸವಾಶ್ರಮದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಜನರಲ್ಲಿ ಅಜ್ಞಾನದ ಅಂಧಕಾರ ತೊಲಗಸಿ ಜ್ಞಾನದ ಬೆಳಕು ಮೂಡಿಸುವುದೇ ದೀಪೋತ್ಸವದ ಉದ್ದೇಶವಾಗಿದೆ. ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಾತ್ಮರ ಆದರ್ಶಗಳನ್ನು ಅನುಕರಣೆ ಮಾಡುವುದರಿಂದ ಭಕ್ತಿ ಮಾರ್ಗದ ಕಡೆಗೆ ಹೋಗಲು ಸಾಧ್ಯವಾಗುತ್ತದೆ.
ಸಾಮಾನ್ಯ ಮಾನವರಾಗಿ ಹುಟ್ಟಿ ದೇವ ಮಾನವರಾಗಿ ಬೆಳೆದ ಅನೇಕ ಪುಣ್ಯ ಪುರುಷರಿದ್ದಾರೆ. ಅವರು ಸ್ವಾರ್ಥಕ್ಕೆ ಜೀವಿಸದೆ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಅವರನ್ನು ಎಂದಿಗೂ ಸ್ಮರಿಸಬೇಕು ಎಂದರು.
ಯಡ್ಡೋಣಿ ಸಿದ್ಧಾರೂಢ ಬಸವಾಶ್ರಮದ ಶ್ರೀ ಕೇಶವಾನಂದ ಸ್ವಾಮೀಜಿ ಮಾತನಾಡಿ, ಪರರಿಗೆ ಕೆಡಕು ಬಯಸದೇ ಸದಾಕಾಲ ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡುತ್ತಾ ಧರ್ಮದ ಹಾದಿಯಲ್ಲಿ ನಡೆದಾಗ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಮಕ್ಕಳ್ಳಿಯ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಿದ್ದಾರೂಢರು ಜನರಲ್ಲಿ ಆಧ್ಯಾತ್ಮಿಕ ಮನೋಭಾವ ಮೂಡಿಸಿದವರಲ್ಲಿ ಒಬ್ಬರಾಗಿದ್ದಾರೆ. ಅನೇಕ ಪವಾಡ ಮಾಡಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.
ತಾವರಗೇರಿಯ ಬ್ರಹ್ಮವಿದ್ಯಾಶ್ರಮದ ಶ್ರೀ ಕುಮಾರ ಸಿದ್ಧಾರೂಢ ಸ್ವಾಮೀಜಿ, ಯಡ್ಡೋಣಿಯ ಗವಿಸಿದ್ದಯ್ಯಸ್ವಾಮಿ ಹಿರೇಮಠ, ಶ್ರೀ ಸಿದ್ದಯ್ಯ ಹಿರೇಮಠ, ಗುಮಗೇರಿಯ ಪೂರ್ಣಿಮಾ ಕಲಾ ಸಂಸ್ಕೃತಿಯ ಸರೋಜಮ್ಮ ನಿಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.
ಶ್ರೀ ಸಿದ್ಧಾರೂಢ ಬಸವಾಶ್ರಮದಲ್ಲಿ ಬೆಳಗ್ಗೆ ಸಿದ್ಧಾರೂಢರ ಮೂರ್ತಿಗೆ ಅಭಿಷೇಕ ಪೂಜೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ಧಾರೂಢರ ಭಾವಚಿತ್ರ ಮೆರವಣಿಗೆ ನಡೆಯಿತು.
ಗ್ರಾಪಂ ಸದಸ್ಯರಾದ ನಿಂಗಪ್ಪ ತುಂಬದ, ಶರಣಪ್ಪ ಗುಡೂರ, ಶಂಕ್ರಮ್ಮ ಬಿಜಕಲ್ ಭೂದಾನಿ ಧೂಳಪ್ಪ ಮೇಟಿ, ಪ್ರಮುಖರಾದ ಮರಿಯಪ್ಪ ದಳಪತಿ, ಡಾ.ಬಸವರಾಜ ಹುಗ್ಗಿ, ಅಯ್ಯಪ್ಪ ಗುಳೇದ, ಹನುಮಗೌಡ ಗೌಡ್ರ, ಮಂಜುನಾಥ ರೊಟ್ಟಿ, ತಿರುಪತಿ ತೋಟದ, ಆದೇಶ ರೊಟ್ಟಿ, ಯಮನಪ್ಪ ಗೌಡ್ರ, ಮುದಕಪ್ಪ ವಂದಾಲಿ, ವೀರಭದ್ರಪ್ಪ ಶೆಟ್ಟರ, ಮಂಜುನಾಥ ಹುಗ್ಗಿ, ಶಂಕ್ರಪ್ಪ ಕಲ್ಲಲೊಲದ, ರಾಮಣ್ಣ ಮತ್ತಿತರರು ಇದ್ದರು.