ಮುಧೋಳ: ಸಮಾಜದಲ್ಲಿ ಶಿಕ್ಷಕರಿಗೆ ಶ್ರೇಷ್ಠ ಸ್ಥಾನವಿದೆ. ಸಾಮರಸ್ಯ ಮನೋಭಾವದಿಂದ ಬದುಕಲು ಶಿಕ್ಷಕರು ಮಕ್ಕಳಿಗೆ ತಿಳಿಸಬೇಕು. ಸಹಪಠ್ಯ ಚಟುವಟಿಕೆಯಲ್ಲಿ ಭಾಗವಹಿಸಿದ ಶಿಕ್ಷಕರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಬೇಕು ಎಂದು ಬಿಇಒ ಸಮೀರ ಮುಲ್ಲಾ ಹೇಳಿದರು.
ಆರ್ಎಂಜಿ ಪ್ರೌಢಶಾಲಾ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಸಹಪಠ್ಯ ಚಟುವಟಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ನಿರಂತರವಾಗಿ ಕಲಿಕಾರ್ಥಿಯಾಗಿದ್ದರೆ ಮಾತ್ರ ಮಕ್ಕಳಿಗೆ ಮಾರ್ಗದರ್ಶನ ಮಾಡಲು ಸಾಧ್ಯ ಎಂದರು.
ನಿಕಟಪೂರ್ವ ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ ಮಾತನಾಡಿ, ಸ್ಪರ್ಧೆಗಳು ಆರೋಗ್ಯಯುತವಾಗಿರಬೇಕು. ಸೋಲು ಗೆಲುವು ಮುಖ್ಯವಲ್ಲ. ಸೋಲಿನ ಬಗ್ಗೆ ಅವಲೋಕನ ಮಾಡಿಕೊಂಡು ಗೆಲುವಿನ ಮೆಟ್ಟಿಲು ಏರಲು ಪ್ರಯತ್ನಿಸಬೇಕು ಎಂದರು.
ಬಿಆರ್ಪಿ ನೋಡೆಲ್ ವೈ.ಎಂ.ಪಮ್ಮಾರ ಮಾತನಾಡಿ, ಸಹಪಠ್ಯದಲ್ಲಿ ಶಿಕ್ಷಕರ ಆಸಕ್ತಿ ಮೆಚ್ಚುವಂತಹುದು. ತಾಲೂಕಿನ ಹೆಸರನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.
ಆರ್ಎಂಜಿ ಉಪಪ್ರಾಚಾರ್ಯ ಪಿ. ಎಸ್. ಹಿರೇಮಠ, ಉಮಾ ಕಾತರಕಿ, ಎಂ.ಬಿ.ಡಂಗಿ, ರಾಣಿ ಬರಗಿ, ಪಿ. ಎಂ. ಹುಗ್ಗಿನವರ, ಸಿ.ಆರ್. ಸೊನ್ನದ, ಎಸ್.ವಿ. ಗುಲಗಾಲಜಂಬಗಿ, ವೆಂಕಟೇಶ ಗುಡೆಪ್ಪನವರ, ಎಸ್. ಎಸ್. ಸಿಂಧೆ, ಮಹಾಲಿಂಗಪ್ಪ ಹೂಗಾರ ಇದ್ದರು. ಭಾವಗೀತೆ, ಟಿಎಲ್ಎಂ ತಯಾರಿಕೆ, ರಸಪ್ರಶ್ನೆ, ಪ್ರಬಂಧ, ಚಿತ್ರಕಲೆ ಆಶುಭಾಷಣ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಶಿಕ್ಷಕರಿಗೆ ಬಹುಮಾನ ವಿತರಣೆ ಮಾಡಿದರು.
.