
ವಿಜಯಪುರ: ಜೀವನದಲ್ಲಿ ಸಂತೋಷ, ಉಲ್ಲಸಿತ ಹಾಗೂ ಸದೃಢ ಮನಸ್ಸು ಹೊಂದಲು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳು ಅತ್ಯವಶ್ಯಕ. ಆರೋಗ್ಯ ದೃಷ್ಟಿಯಿಂದ, ಮನಸ್ಸು ಪ್ರಫುಲ್ಲತೆಯಿಂದ ಇರಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದಷ್ಟೇ ಅಲ್ಲದೇ ನಮ್ಮ ಬದುಕಿನ ದೈನಂದಿನ ಭಾಗವಾಗಿಸಿಕೊಳ್ಳಬೇಕು. ಕ್ರೀಡೆಗಳು ದೇಹ ಮನಸ್ಸುಗಳ ಸದೃಢತೆಗೆ ಸಹಕಾರಿಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ನಡೆದ 2024-25ನೇ ಸಾಲಿನ ಅಂಗವಿಕಲರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲೆಯ ಐದು ತಾಲೂಕಿನಲ್ಲಿ ಅಂಗವಿಕಲರ ಕ್ರೀಡಾಕೂಟವನ್ನು ಬಹು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ತಾಲೂಕು ಮಟ್ಟದಲ್ಲಿ ನಡೆದ ಕ್ರೀಡೆಗಳಲ್ಲಿ ಅತ್ಯಂತ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಿ ಇದೀಗ ಜಿಲ್ಲಾ ಮಟ್ಟದಲ್ಲಿ ನಡೆಯುವ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಕ್ರೀಡಾ ಮನೋಭಾವನೆ ಮೆರೆಯಬೇಕು. ಸೋಲು-ಗೆಲುವು ಮುಖ್ಯವಲ್ಲ. ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕೆಂದರು.
ಕ್ರೀಡೆಗಳಿಂದ ಜೀವನದಲ್ಲಿ ಚೈತನ್ಯ ಹಾಗೂ ಲವಲವಿಕೆಯಿಂದಿರಲು ಸಹಾಯಕವಾಗುತ್ತವೆ. ಬೌದ್ಧಿಕ ಮತ್ತು ಮಾನಸಿಕ ಸದೃಢತೆಗೆ ಈ ತರಹದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಚೈತನ್ಯಮಯ ಹಾಗೂ ಚಟುವಟಿಕೆಯಿಂದ ಕೂಡಿದ ಜೀವನ ನಡೆಸಿ ಎಂದು ಅವರು ಹೇಳಿದರು.
ಡಾ.ಜಾವೀದ ಎಂ. ಜಮಾದಾರ ಮಾತನಾಡಿ, ಸಾಧಕರನ್ನು ಪ್ರೇರಣೆಯಾಗಿಟ್ಟುಕೊಂಡು ಛಲದಿಂದ ಸಾಧನೆ ಮಾಡಬೇಕು ಎಂದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಸವಿತಾ ಕಾಳೆ, ವಾರ್ತಾಧಿಕಾರಿ ಅಮರೇಶ ದೊಡಮನಿ, ಅರವಿಂದ ಕೊಪ್ಪ, ಎಸ್.ಜಿ. ಲೋಣಿ ನಿಮಿಷ ಆಚಾರ್ಯ, ವಿಜಯಕುಮಾರ ಹೊಸಮನಿ, ನಿವೃತ್ತ ಶಿಕ್ಷಕ ಎಚ್.ಮಮದಾಪೂರ ಮತ್ತಿತರರಿದ್ದರು.
ಕ್ರೀಡಾಕೂಟದಲ್ಲಿ 100 ಮೀ.ಓಟ, ಗುಂಡು ಎಸೆತ, ಬಕೇಟ್ನಲ್ಲಿ ರಿಂಗ್ ಹಾಕುವುದು, ಥ್ರೋಬಾಲ್ ಎಸೆತ, 50 ಮೀ. ಅಂಧರ ನಡಿಗೆ, ಮ್ಯೂಜಿಕಲ್ ಚೇರ್, ಉದ್ದಜಿಗಿತ ವಿವಿಧ ಕ್ರೀಡೆಗಳು ಜರುಗಿದವು.