ಗುಂಡ್ಲುಪೇಟೆ: ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ನರೇಗಾ ಯೋಜನೆ ಬಳಸಿಕೊಳ್ಳಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ಮಂಗಳವಾರ ತಾಲೂಕಿನ ಮಂಚಹಳ್ಳಿ ಗ್ರಾಮದಲ್ಲಿ 24/7 ನೀರು ಸರಬರಾಜು ಯೋಜನೆಯ ಘೋಷಣೆ ನಂತರ ಅವರು ಮಾತನಾಡಿದರು.
ಸದ್ಯ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಬೋರ್ಡ್ ಇಲ್ಲದಿರುವುದರಿಂದ ಎಲ್ಲಾ ಗ್ರಾಮಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆಯಾಗುತ್ತಿದೆ. ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಶಾಸಕರ ಅನುದಾನ ಒಂದನ್ನೇ ಅವಲಂಬಿಸುವ ಬದಲು ಚರಂಡಿ, ರಸ್ತೆ ನಿರ್ಮಾಣ, ಶಾಲಾ ಕೊಠಡಿ ನಿರ್ಮಾಣ ಮುಂತಾದ ಕೆಲಸ ಕಾರ್ಯಗಳನ್ನು ನರೇಗಾ ಯೋಜನೆಯಲ್ಲಿ ಕೈಗೊಳ್ಳಬೇಕು. ಇದರಿಂದ ಗ್ರಾಮಾಂತರ ಪ್ರದೇಶಗಳ ಕೂಲಿ ಕಾರ್ಮಿಕರಿಗೆ ಅಗತ್ಯ ಉದ್ಯೋಗ ದೊರಕುತ್ತದೆ. ನರೇಗಾ ಯೋಜನೆಯಲ್ಲಿ ವಿಳಂಬವಾಗುತ್ತಿರುವ ಮೆಟೀರಿಯಲ್ ಬಿಲ್ಗಳನ್ನು ಸಹ ಶೀಘ್ರವೇ ಪಾವತಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ಗಳಾದ ಮಧುಸೂದನ್, ಶಿವಮೂರ್ತಿ, ಮುಖಂಡರಾದ ಮಂಚಹಳ್ಳಿ ಲೋಕೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಆಲತ್ತೂರು ಜಯರಾಂ, ಆಲತ್ತೂರು ಗ್ರಾಪಂ ಅಧ್ಯಕ್ಷೆ ಮಂಜುಳಾ, ಸದಸ್ಯ ರಾಮಣ್ಣ ಇತರರಿದ್ದರು.