ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಸಲಹೆ | ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಕನಕಪುರ : ಭವಿಷ್ಯದಲ್ಲಿ ಬೆಳಗಬೇಕಾದ ಮಕ್ಕಳನ್ನು ಚಿಕ್ಕಂದಿನಿಂದಲೇ ತಮ್ಮ ಗುರಿಯೆಡೆಗೆ ಸಾಗುವಂತೆ ಪಾಲಕರು ಹಾಗೂ ಶಿಕ್ಷಕರು ಮಾಡಬೇಕು ಎಂದು ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಕನ್ನಡಾಂಬೆ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ನಿಂದ ಕಳೆದ ಸಾಲಿನ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಲಿತು ಸಾಧಿಸುವುದೇ ಮುಂದಿನ ಭವಿಷ್ಯದಲ್ಲಿ ಅವರ ಸಾಧನೆಗೆ ಮೆಟ್ಟಿಲುಗಳಾಗುತ್ತವೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ವಿದ್ಯಾರ್ಜನೆಯ ಕಡೆಗೆ ಹೆಚ್ಚಿನ ಗಮನಹರಿಸಿ ಪಾಲಕರ ಋಣ ತೀರಿಸಬೇಕಿದೆ. ಹೆಚ್ಚು ಅಂಕ ಗಳಿಸಿದ 14 ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಕನ್ನಡಾಂಬೆ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ಗೆ ಅಭಿನಂದಿಸಿದರು.
ಟ್ರಸ್ಟ್ ಸಂಸ್ಥಾಪಕ ಅಸ್ಗರ ಖಾನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಕೂಗಿ ಗಿರಿಯಪ್ಪ ನಾಡು-ನುಡಿ ಹಾಗೂ ವಿದ್ಯಾಭ್ಯಾಸದ ಮಹತ್ವವವನ್ನು ತಿಳಿಸಿದರು.
ಕನ್ನಡಪರ ಹೋರಾಟಗಾರ ಹೊಸದೊಡ್ಡಿ ರಮೇಶ್ರಿಗೆ ಆದರ್ಶ ವ್ಯಕ್ತಿತ್ವದ ವ್ಯಕ್ತಿ, ಕಾಕೋಳು ಶೈಲೇಶ್ ಕರ್ನಾಟಕ ಸೇವಾ ರತ್ನ, ಯಾಕೂಬ್ ಪಾಷಾರಿಗೆ ಕನ್ನಡಪರ ಚಿಂತಕರು, ಕಬ್ಬಾಳೇಗೌಡರಿಗೆ ಕನ್ನಡಪರ ಹೋರಾಟಗಾರರು ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟ್ರಸ್ಟ್ ಸದಸ್ಯರಾದ ಸೈಯದ್ ಸಾಧಿಕ್, ಚಿಕ್ಕ ಕೆಂಪೇಗೌಡ, ಬಿಪಿ ಕಾಡಗೌಡ, ಪೂರ್ಣಚಂದ್ರ, ಸೈಯದ್ ಸಮೀರ್, ಅಂಗಡಿ ರಮೇಶ್ ಮತ್ತಿತರರು ಇದ್ದರು.