ಮದ್ದೂರು: ಪಟ್ಟಣದ ರೈಲು ನಿಲ್ದಾಣ ಸಮೀಪ ಚಿರತೆಗಳು ಭಾನುವಾರ ಸಂಜೆ ಓಡಾಟ ನಡೆಸಿರುವುದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.
ಪಟ್ಟಣದ ಶಿವಪುರ ರೈಲು ನಿಲ್ದಾಣ ಹಾಗೂ ಆಶ್ರಯ ಬಡಾವಣೆ ನಡುವೆ ಇರುವ ಅರಳೀ ಮರದ ಬಳಿ ಚಿರತೆ ಮತ್ತು ಎರಡು ಮರಿಗಳು ಸಂಚಾರ ಮಾಡುತ್ತಿರುವುದನ್ನು ವ್ಯಕ್ತಿಯೊಬ್ಬರು ಗಮನಿಸಿದ್ದಾರೆ. ಈ ಕುರಿತು ಆಶ್ರಯ ಬಡಾವಣೆ ನಿವಾಸಿಗಳು ಮತ್ತು ರೈಲು ನಿಲ್ದಾಣದ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸಂಚಾರದ ಮಾಹಿತಿ ನೀಡಿದ್ದರಿಂದ ತಕ್ಷಣವೇ ಎಚ್ಚೆತ್ತುಕೊಂಡ ಅಧಿಕಾರಿಗಳು ರಾತ್ರಿಯೇ ಬೋನನ್ನು ಇರಿಸಿದ್ದಾರೆ.
ಚಿರತೆ ಸೆರೆಗೆ ಅಗತ್ಯ ಕ್ರಮ ಕೈಗೊಂಡಿದ್ದು, ಜನರು ರಾತ್ರಿ ಹೊತ್ತು ಒಬ್ಬರೇ ಓಡಾಟ ಮಾಡುವುದು ಹಾಗೂ ರೈತರು ಜಮೀನುಗಳಿಗೆ ತೆರಳುವಾಗ ಎಚ್ಚರಿಕೆಯಿಂದ ಇರುವಂತೆ ವಲಯ ಅರಣ್ಯಾಧಿಕಾರಿ ಗವಿಯಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.