ವಿಜಯಪುರ : ತೊಟ್ಟಿಲು ತೂಗುವ ಕೈ ಜಗತ್ತನ್ನೆ ತೂಗಬಹುದು. ಮಹಿಳೆಯೂ ಸಾಮಾಜಿಕ, ಆರ್ಥಿಕ, ರಾಜಕಿಯವಾಗಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ಹಕ್ಕುಗಳು ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ಮಹಿಳೆಯರು ಮೂಢನಂಬಿಕೆಗಳ ಸಂಕೋಲೆಯನ್ನು ತೊರೆದು ಮುನ್ನುಗ್ಗಬೇಕು. ಮಹಿಳೆ ಅಬಲೆ ಅಲ್ಲ ಸಬಲೆ ಎನ್ನುವುದನ್ನು ತೋರಿಸಬೇಕಾಗಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ಸಂಸ್ಥೆ ಅಧ್ಯಕ್ಷ ಡಾ.ಮೋಹನರಾವ ನಲವಡೆ ಮಾತನಾಡಿ, ಶೋಷಿತ ಸಮುದಾಯದ ಮಹಿಳೆಯರು ಅಭಿವೃದ್ಧಿ ಹೊಂದಬೇಕು. ಪ್ರತಿ ಕ್ಷೇತ್ರದಲ್ಲಿಯೂ ಮಹಿಳೆಯರ ಕಾರ್ಯವನ್ನು ಗುರುತಿಸುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ರಾಮನಗೌಡ ಕನ್ನೊಳಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಿಂದುಳಿದ ಜಾತಿಯ ಮಹಿಳೆಯರಿಗೆ ಹಲವಾರು ಯೋಜನೆಗಳಿದ್ದು, ಆ ಯೋಜನೆಗಳಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳಲು ಪೂರಕವಾಗಿದೆ ಎಂದು ತಿಳಿಸಿದರು.
ಡಾ.ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರಲೆ, ಸಂತೋಷ ಸಾಲವಾಡಗಿ, ಸುನೀಲ ಉಕ್ಕಲಿ, ಸಿದ್ದಮ್ಮ ಕೊಳೂರಗಿ, ಎನ್.ಆರ್ ನಾಗರತ್ನ, ರವಿ ಕಿತ್ತೂರ, ಯಶೋದಾ ಮೇಲಿನಕೆರಿ, ರೇಣುಕಾ ಮಾದರ (ಅರಳದಿನ್ನಿ), ನಂದಾ ಗುನ್ನಾಪುರ, ಜಯಶ್ರೀ ಬಿಂಗಿ, ಶಿವಲೀಲಾ ಚಲವಾದಿ, ಪುಷ್ಪಾ ಮನ್ನೂರ, ಮಲ್ಲಮ್ಮ ಹವಳಗಿ, ಜಯಶ್ರೀ ಚಿಗರಿ, ಕಸ್ತೂರಿಬಾಯಿ ಪಾಟೀಲ, ಉಮಾಶ್ರೀ ವಾಘಮೊರೆ, ಚಂದಾಬಾಯಿ ಮಾದರ, ಪಾರ್ವತಿ ಮಾದರ, ಯಲ್ಲವ್ವ ಕತ್ನಳಿ, ರೇಣುಕಾ ಬಗಲಿ, ರೇವಮ್ಮ ಗಾಡಿವಡ್ಡರ ಮತ್ತಿತರರಿದ್ದರು.