ಕೆ.ಆರ್.ಪೇಟೆ: ಸಾಂಸ್ಕೃತಿಕ ಮತ್ತು ಪ್ರತಿಭೆ ಇರುವ ಮಕ್ಕಳನ್ನು ಒಟ್ಟಿಗೆ ಸೇರಿಸಿ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದಾಗ ಮಕ್ಕಳು ಕಲಿಕೆಯತ್ತ ಆಸಕ್ತಿ ತೋರುತ್ತಾರೆ ಎಂದು ಎಸ್ಡಿಎಂಸಿ ಉಪಾಧ್ಯಕ್ಷೆ ಲೋಕಾಕ್ಷಿ ಜಗದೀಶ್ ತಿಳಿಸಿದರು.
ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಕ್ಕಿಹೆಬ್ಬಾಳು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಟ್ಟೆ ಕಡೆಯ ಗ್ರಾಮದ ಮಕ್ಕಳಿಗೂ ಶಿಕ್ಷಣ ಸಿಗಬೇಕು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಶಿಕ್ಷಣಕ್ಕೆ ಸಂಬಂಧಪಟ್ಟ ವಿನೂತನವಾದ ಹಲವಾರು ಕಾರ್ಯಕ್ರಮ ರೂಪಿಸುತ್ತಿದೆ. ಇಂತಹ ಕಾರ್ಯಕ್ರಮವನ್ನು ಮಕ್ಕಳು ಉಪಯೋಗಿಸಿಕೊಳ್ಳಬೇಕು ಎಂದರು.
ಕಲಿಕಾ ಹಬ್ಬ ಕಾರ್ಯಕ್ರಮದ ವಿಭಾಗಗಳಾದ ರಸಪ್ರಶ್ನೆ, ಗಟ್ಟಿ ಓದು, ಕತೆ ಕಟ್ಟುವುದು, ಕೈಬರಹ ಚಟುವಟಿಕೆ, ಜ್ಞಾಪಕ ಶಕ್ತಿ ಚಟುವಟಿಕೆ, ಕಥೆ ಹೇಳುವ ಚಟುವಟಿಕೆ, ಗಣಿತ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಶಿಕ್ಷಣ ಸಂಯೋಜಕ ವೀರಭದ್ರಯ್ಯ, ಮುಖ್ಯ ಶಿಕ್ಷಕ ರವಿ ಜಿ.ಎನ್, ಬಿ.ಆರ್.ಪಿ ಬೋರೇಗೌಡ, ಸಿ.ಆರ್.ಪಿ ವೇಣು, ಬೀರವಳ್ಳಿ ಸಿ.ಆರ್.ಪಿ ಮಹೇಶ್, ಮೋಹನ್, ಪ್ರವೀಣ್, ದಯಾನಂದ, ದೈಹಿಕ ಶಿಕ್ಷಣ ಶಿಕ್ಷಕ ಕುಮಾರ್, ಮಂಜುಳಾ, ಕುಮಾರಿ ಇದ್ದರು.