ಅಥಣಿ: ಪಟ್ಟಣದಲ್ಲಿರುವ ಐತಿಹಾಸಿಕ ಜೋಡಿ ಕೆರೆ ನಿರ್ವಹಣೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕರವೇ ತಾಲೂಕಾಧ್ಯಕ್ಷ ಬಸನಗೌಡ ಪಾಟೀಲ ನೇತೃತ್ವದಲ್ಲಿ ಕರವೇ ಪದಾಧಿಕಾರಿಗಳು ಗುರುವಾರ ಪುರಸಭೆ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟಿಸಿದರು.

ಪುರಸಭೆ ಮುಖ್ಯಾಧಿಕಾರಿಗಳು ಈ ಕೆರೆ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಕೆರೆ ಮಲಿನವಾಗಿ ದುರ್ವಾಸನೆ ಬೀರುತ್ತಿದೆ. ಕೆರೆ ಪಕ್ಕದ ಅಂಗಡಿಗಳ ಮಾಲೀಕರು ಅಂಗಡಿಯ ತ್ಯಾಜ್ಯವನ್ನು ಕೆರೆಯಲ್ಲಿ ಹಾಕುತ್ತಿದ್ದಾರೆ. ಆದರೆ, ಪುರಸಭೆ ಮಾತ್ರ ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಮೌನ ವಹಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.
ವಾರದೊಳಗೆ ಕೆರೆ ಸ್ವಚ್ಛತೆಗೆ ಮುಂದಾಗದಿದ್ದರೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಅನ್ನಾಸಾಬ ತೆಲಸಂಗ, ಇಮ್ರಾನ್ ಪಟೇಲ್, ಶಬ್ಬೀರ ಸಾತಬಚ್ಚೆ, ಮಂಜು ಹೊಳಿಕಟ್ಟಿ, ಮಹಾಂತೇಶ ಬಾಡಗಿ, ಅಭಯ ಮೈಗೂರ, ಇರ್ಫಾನ್ ಬಾಗವಾನ್, ಶ್ರೀಶೈಲ ಪೂಜಾರಿ, ಶಿವಾನಂದ ಹೊನಕಾಂಡೆ, ಮಹಾದೇವಿ ಹೊಳಿಕಟ್ಟಿ, ಸುನೀತಾ ಐಹೊಳೆ ಇತರರು ಇದ್ದರು.
ಕೆರೆಗಳಿಗೆ ತ್ಯಾಜ್ಯ ಬಿಸಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇನ್ನು ಎರಡು ದಿನಗಳಲ್ಲಿ ಕೆರೆಯ ಮೇಲಿರುವ ಅಕ್ರಮ ಗೂಡಂಗಡಿಗಳನ್ನು ತೆರವು ಮಾಡುವ ಕಾರ್ಯ ಕೈಗೊಳ್ಳಲಾಗುವುದು. ಶೀಘ್ರ ಕೆರೆಗಳ ಸ್ವಚ್ಛತೆ ಮಾಡಲಾಗುವುದು.
| ಮಹಾಂತೇಶ ಕವಲಾಪುರ ಪುರಸಭೆ ಮುಖ್ಯಾಧಿಕಾರಿ