ಕುಷ್ಟಗಿ: ನರೇಗಾ ಯೋಜನೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಎಸಗಿದ ತಾಲೂಕಿನ ಬೆನಕನಾಳ ಗ್ರಾಮ ಪಂಚಾಯಿತಿಯ ಪಿಡಿಒ ನಾಗರತ್ನಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಂಗಳವಾರ ಆದೇಶ ಹೊರಡಿಸಿದ್ದಾರೆ.


ನರೇಗಾ ಯೋಜನೆಯ ನಮ್ಮ ಹೊಲ ನಮ್ಮ ದಾರಿಗೆ ಸಂಬಂಧಿಸಿದಂತೆ ಬೆನಕನಾಳ ಗ್ರಾಮದ ಬಿಂಗಿಕೊಪ್ಪ ದಾರಿಯಿಂದ ರಾಜಾಸಾಬ ಲಾಡ್ಲಿ ಹೊಲದವರೆಗೆ ರಸ್ತೆ ಅಭಿವೃದ್ಧಿಪಡಿಸುವುದು, ಯಲಬುಣಚಿ ಗ್ರಾಮದ ಶಿವನಗೌಡ ಸಿದ್ದನಗೌಡ ಮೂಗನೂರು ರವರ ಹೊಲದಿಂದ ಮುರ್ತುಜಾಸಾಬ ಸುಂಕದ್ ಅವರ ಹೊಲದವರೆಗೆ ಹಾಗೂ ಯಲಬುಣಚಿ ಗ್ರಾಮದ ದಾವಲಸಾಬ ಪೀರಸಾಬ ಸೂಡಿರವರ ಹೊಲದಿಂದ ದಾದೇಸಾಬ ಇಮಾಮಸಾಬರವರ ಹೊಲದ ವರೆಗಿನ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಯಲಬುಣಚಿ ಗ್ರಾಮದ ಗುತ್ತಿಗೆದಾರ ಮೌನೇಶ ಬನ್ನಿಗೋಳ ಅವರು 2024ರ ಜು.8ರಂದು ತಾಪಂ ಇಒಗೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಹಾಗೂ ತಾಲೂಕು ಸಂಯೋಜಕರಿಂದ ಪರಿಶೀಲನೆ ನಡೆಸಿದ ಇಒ ಪಂಪಾಪತಿ ಹಿರೇಮಠ ಅವರು ಕಾಮಗಾರಿ ನಿರ್ವಹಿಸುವಲ್ಲಿ ಪಿಡಿಒ ನಾಗರತ್ನಾ ವಿಫಲರಾಗಿ ಕರ್ತವ್ಯಲೋಪ ಎಸಗಿದ್ದಾರೆಂದು ಜಿಪಂ ಸಿಇಒಗೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರು.