ಬೇಲೂರು: ತಾಲೂಕಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಉಪಟಳದಿಂದ ಬೆಳೆ ಹಾನಿ ಜತೆಗೆ ಮನುಷ್ಯರ ಮೇಲೆ ದಾಳಿ ಮಾಡಿ ಜೀವ ಹಾನಿ ಮಾಡುತ್ತಿರುವ ಪುಂಡಾನೆಗಳನ್ನು ಹಿಡಿಯಲು ಭಾನುವಾರದಿಂದಲೇ ಕಾರ್ಯಾಚರಣೆ ಆರಂಭಿಸಲು ತಾಲೂಕಿನ ಬಿಕ್ಕೋಡಿಗೆ ಕುಮ್ಕಿ ಸಾಕಾನೆಗಳು ಬಂದಿಳಿದಿವೆ.
ಕಳೆದ ಹಲವು ತಿಂಗಳಿಂದ ಬೇಲೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆ ನಾಶದೊಂದಿಗೆ ಪ್ರಾಣಹಾನಿ ಮಾಡುತ್ತಿರುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಈಗಾಗಲೇ ಸಾಕಷ್ಟು ಪ್ರತಿಭಟನೆಗಳು, ಹೋರಾಟಗಳು, ರಸ್ತೆ ಸಂಚಾರ ತಡೆ ನಡೆಸಿದ ಸಂದರ್ಭ ಅಧಿಕಾರಿಗಳು ಮತ್ತು ಸಚಿವರು ಭರವಸೆ ನೀಡಿದ್ದರು. ಆ ನಂತರದಲ್ಲಿ ಜನರ ಕಣ್ಣೊರೆಸುವ ತಂತ್ರವಾಗಿ ಒಂದೆರಡು ಕಾಡಾನೆಗಳನ್ನಿಡಿದಿದ್ದರು. ಆದರೂ ಕೆಲದಿನ ಕಣ್ಣಿಗೆ ಮರೆಯಾಗಿದ್ದ 90 ಕ್ಕೂ ಹೆಚ್ಚು ಆನೆಗಳು ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬೀಡು ಬಿಟ್ಟು ಬೆಳೆ ನಾಶದೊಂದಿಗೆ ಪ್ರಾಣ ಹಾನಿ ಮಾಡುತ್ತಿವೆ.
ಈಗಾಗಲೇ ಬೇಲೂರು ತಾಲೂಕಿನಲ್ಲಿ ತಿಂಗಳೊಂದರಲ್ಲೇ 3 ಜನರನ್ನು ಬಲಿ ಪಡೆದಿವೆ. ಅಲ್ಲದೆ ಶುಕ್ರವಾರ ತಾಲೂಕಿನ .ಬೊಮ್ಮನಹಳ್ಳಿ ಗ್ರಾಮದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಪುಂಡಾನೆ ಕೊಂದು ಹಾಕಿತ್ತು. ಇದನ್ನು ಖಂಡಿಸಿ ರೈತರು, ಬೆಳೆಗಾರರು, ಕಾರ್ಮಿಕರು ಬೇಲೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು. ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಸತ್ಯಭಾಮಾ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಮಾತಿನ ಚಕಮಕಿ ನಡೆಸಿದ್ದರು. ಅಲ್ಲದೆ ಶನಿವಾರದಿಂದಲೇ ಪುಂಡಾನೆಗಳನ್ನು ಹಿಡಿಯಬೇಕೆಂದು ಪಟ್ಟು ಹಿಡಿದ್ದರು.
ಈ ಸಂದರ್ಭ ಸಂಸದ ಶ್ರೇಯಸ್ ಪಟೇಲ್ ಮಧ್ಯಪ್ರವೇಶಿಸಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಶನಿವಾರದಿಂದಲೇ ಪುಂಡಾನೆ ಸೆರೆ ಕಾರ್ಯಾಚರಣೆಗೆ ಮುಂದಾಗಬೇಕು ಎಂದು ಪ್ರತಿಭಟನಾಕಾರರಿಗೆ ತಿಳಿಸಿದ್ದರು. ಇದರಿಂದ ಪ್ರತಿಭಟನೆ ಕೈಬಿಟ್ಟ ಪ್ರತಿಭಟನಾಕಾರರು ಶನಿವಾರದಿಂದಲೇ ಪ್ರಾರಂಭಿಸಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗಾಗಿ ಈ ಭಾರಿಯೂ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯಲಿದ್ದು ಜನರಿಗೆ ತೀವ್ರವಾಗಿ ಉಪಟಳ ನೀಡುತ್ತಿರುವ ಮೂರು ಕಾಡಾನೆಗಳನ್ನು ಟಾರ್ಗೆಟ್ ಮಾಡಿ ಈ ಬಾರಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಜ್ಜಾಗಿದ್ದು, ಬಿಕ್ಕೋಡು ಸಮೀಪದ ಆನೆ ಕ್ಯಾಂಪ್ನಲ್ಲಿ 6 ಕಾಡಾನೆಗಳು ಕಾರ್ಯಾಚರಣೆಗೆ ಸಜ್ಜಾಗಿದ್ದು, ಅಧಿಕಾರಿಗಳು ಜನರ ಕಣ್ಣೊರೆಸುವ ಕೆಲಸ ಮಾಡದೆ ಜನರ ಸಾವಿಗೆ ಕಾರಣವಾದ ಎಲ್ಲ ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.