ಕೂಡ್ಲಿಗಿ: ಅವಿಭಕ್ತ ಕುಟುಂಬಗಳಲ್ಲಿರುವ ಭ್ರಾತೃತ್ವ ಹಾಗೂ ಸಾಮೂಹಿಕ ಜವಾಬ್ದಾರಿ ವಿಭಕ್ತ ಕುಟುಂಬದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ತಾಲೂಕು ಸಮನ್ವಯಾಧಿಕಾರಿ ರೇಖಾ ನೀರಲಕೇರಿ ಅಭಿಪ್ರಾಯಪಟ್ಟರು.


ಪಟ್ಟಣದ ಬಾಪೂಜಿ ನಗರದಲ್ಲಿ ಆಯೋಜಿಸಿದ್ದ ‘ಅಜ್ಜಿಯ ಕೈತುತ್ತು’ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳು ಹೆಚ್ಚಿದ್ದವು. ಮನೆಯಲ್ಲಿ ಹಿರಿಯರ ಮಾರ್ಗದರ್ಶನದಂತೆ ಒಟ್ಟಾಗಿ ಜೀವನ ನಡೆಸುತ್ತಿದ್ದರು. ಅಜ್ಜ-ಅಜ್ಜಿ ಮೊಮ್ಮಕ್ಕಳಿಗೆ ಪೌರಾಣಿಕ, ನೀತಿ ಕಥೆಗಳನ್ನು ಹೇಳುತ್ತಿದ್ದರು. ಹಬ್ಬ ಹರಿದಿನದ ಮಹತ್ವವನ್ನು ತಿಳಿಸಿ, ಮನೆಯ ಮಕ್ಕಳಿಗೆ ಕೈ ತುತ್ತು ನೀಡುವುದು ಸಾಮಾನ್ಯವಾಗಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಕೂಡು ಕುಟುಂಬಗಳು ಮರೆಯಾಗಿದ್ದು, ವಿಭಕ್ತ ಕುಟುಂಬಗಳೇ ಹೆಚ್ಚಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ವಿರುಪಾಪುರ ವಲಯದ ಮೇಲ್ವಿಚಾರಕ ರುದ್ರೇಶ್ ಮಾತನಾಡಿ, ಆಧುನಿಕತೆ ಪರಿಣಾಮದಿಂದ ನಶಿಸುತ್ತಿರುವ ಅವಿಭಕ್ತ ಕುಟುಂಬದಲ್ಲಿ ಅಜ್ಜಿಯ ಕೈ ತುತ್ತು ನೀಡುವ ಸಂಸ್ಕೃತಿಯನ್ನು ಮತ್ತೆ ಯುವಸಮೂಹಕ್ಕೆ ನೆನಪಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.