ಅಕ್ರೂರ ಶ್ರೀಕೃಷ್ಣನನ್ನು ಕಾಣಲು ಹೊರಟ. ಅಕ್ರೂರನಿಗೆ ಆನಂದವೋ ಆನಂದ. ಸಾರಥಿ ರಥ ಓಡಿಸುತ್ತಿದ್ದಾನೆ. ಅಕ್ರೂರನಿಗೆ ಅಖಂಡವಾಗಿ ಭಗವಂತನದ್ದೇ ಚಿಂತನೆ. ಕಿಂ ಮಯಾಚರಿತಂ ಭದ್ರ ಕಿಂ ತಪ್ತಂ ಪರಮಂ ತಪಃ| ಕಿಂ ವಾಥಾಪ್ಯರ್ಹತೇ ದತ್ತಂ ಯದ್ ದ್ರಕ್ಷಾಯಮ್ಯದ್ಯ ಕೇಶವಮ್| -ನಾನು ಏನು ತಪಸ್ಸು ಮಾಡಿದೆನೋ ಏನು ಸದಾಚಾರ, ಅನುಷ್ಠಾನವನ್ನು ಮಾಡಿದೆನೋ ಅಥವಾ ಏನು ದಾನ ಮಾಡಿದೆನೋ ಇಂದು ಶ್ರೀಕೃಷ್ಣನನ್ನು ನೋಡುವ ಭಾಗ್ಯ ದೊರಕಿದೆ.
ಅಕ್ರೂರ ಮೊದಲಾದ ಜ್ಞಾನಿಗಳು ಸಹಜವಾಗಿ ಮಾತನಾಡುವಾಗಲೂ ಒಂದು ತತ್ತ್ವವನ್ನು ತಿಳಿಸದೇ ಮಾತನಾಡುವುದಿಲ್ಲ. ನಾನು ಏನು ದಾನ ಮಾಡಿದ್ದೇನೋ ಎಂಬ ಮಾತಿನಲ್ಲಿ ಹಣದ ಸದ್ವಿನಿಯೋಗ ಮಾಡಿದ ದಾನದ ಫಲವಾಗಿ ನನಗೆ ಇವತ್ತು ಕೃಷ್ಣನ ದರ್ಶನ ಆಗುತ್ತಿದೆ. ನನ್ನ ತಪಸ್ಸು ಇಲ್ಲದಿದ್ದರೆ ಇದು ಆಗುತ್ತಿರಲಿಲ್ಲ. ನಾನು ದುರಾಚಾರಿ ಆಗಿದ್ದರೆ ಇದು ಸಾಧ್ಯ ಇರಲಿಲ್ಲ. ಸದಾಚಾರ, ತಪಸ್ಸು, ದಾನ ಇವೆಲ್ಲವುಗಳ ಫಲವಾಗಿ ನನಗೆ ಇವತ್ತು ದೇವರ ದರ್ಶನದ ಭಾಗ್ಯ ಸಿಕ್ಕಿದೆ ಎಂದು ಶ್ರೀಕೃಷ್ಣನನ್ನು ಸ್ಮರಿಸುತ್ತಾನೆ. ಒಂದೊಂದು ಹೆಜ್ಜೆ ಮುಂದೆ ಸಾಗುತ್ತಿದ್ದಂತೆ ನಾನು ಕೃಷ್ಣನಿಗೆ ಹತ್ತಿರ ಆಗುತ್ತಿದ್ದೇನೆ ಎಂಬುದಾಗಿ ಭಾವಿಸುತ್ತಿದ್ದಾನೆ.
ಅವನಲ್ಲಿ ಉತ್ಸಾಹ ಹೆಚ್ಚಾಗುತ್ತಿದೆ. ಮಧ್ಯದಲ್ಲಿ ಕಂಸನನ್ನು ನೆನಪಿಸಿಕೊಳ್ಳುತ್ತಾನೆ. ಅವನು ಕಳುಹಿಸಿದ್ದಕ್ಕೆ ಕೃಷ್ಣನ ದರ್ಶನ ಆಗುತ್ತಿದೆ ಎಂದು. ಶ್ರೀಕೃಷ್ಣನ ಪಾದಸ್ಪರ್ಶ ನನಗೆ ಆಗುತ್ತದೆ. ಯಾವ ಪಾದಗಳು ಗೋಪಿಕಾಸ್ತ್ರೀಯರಿಗೆ ಆನಂದವನ್ನು ನೀಡಿದವೋ ಅಂತಹ ಪಾದಗಳ ದರ್ಶನ, ಸ್ಪರ್ಶ ನನಗೆ ಆಗುತ್ತದೆ ಎಂದರೆ ನಾನೇ ನಿಜವಾಗಿ ಪುಣ್ಯವಂತ ಎಂದು ಶ್ರೀಕೃಷ್ಣನ ಪಾದವನ್ನು ಸ್ಮರಿಸುತ್ತಾನೆ. ಪರಮಾತ್ಮನ ಪಾದಧೂಳಿಗೆ ಸಂಬಂಧ ಪಟ್ಟ ಗುಣಗಳನ್ನು ಲಕ್ಷ್ಮೀದೇವಿಗೆ ಇನ್ನೂ ಪೂರ್ಣವಾಗಿ ಎಣಿಸಲು ಆಗಿಲ್ಲ. ಅಷ್ಟು ಅನಂತ ಗುಣಗಳು ದೇವರಲ್ಲಿ ಇವೆ. ಅಂತಹ ಶ್ರೀಕೃಷ್ಣನ ಪಾದಧೂಳಿಯ ಸ್ಪರ್ಶ ನನಗೆ ಆಗುತ್ತದೆ. ಆ ಪಾದಗಳನ್ನು ನಾನು ಮುಟ್ಟುತ್ತೇನೆ ಎಂದು ಶ್ರೀಕೃಷ್ಣನನ್ನು ನೆನೆದು ಆನಂದಿಸುತ್ತಿದ್ದಾನೆ.
ಅಮೆರಿಕಾದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ, Trump 2.0 ಯುಗಾರಂಭ