ಮೈಸೂರು: ‘ಸುಸ್ಥಿರ ಅಭಿವೃದ್ಧಿ ನಮ್ಮ ಗುರಿ’ ಪರಿಕಲ್ಪನೆಯಡಿ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಕೊನೇ ದಿನದಲ್ಲಿ ನಿರೀಕ್ಷೆ ಮೀರಿ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವವರೆಗೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಮೇಳದಲ್ಲಿ ಒಂದೇ ಸೂರಿನಡಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಕೃಷಿ ಪರಿಕರ ಸೇರಿ ಇತರ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. ಉಪಯುಕ್ತ ಮಾಹಿತಿಗಳನ್ನು ಪಡೆಯಲು ರೈತರು ಮತ್ತು ಸಾರ್ವಜನಿಕರು ಮಳಿಗೆಗಳಿಗೆ ಭೇಟಿ ನೀಡುತ್ತಿದ್ದಾರೆ. ವಾರಾಂತ್ಯ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ರೈತರು, ಕೃಷಿ ವಿದ್ಯಾರ್ಥಿಗಳು ಹಾಗೂ ಶಾಲಾ ಮಕ್ಕಳು ಮೇಳಕ್ಕೆ ಧಾವಿಸುತ್ತಿದ್ದಾರೆ. ಇತ್ತ ಉತ್ಪಾದಕರ ಹಾಗೂ ಖರೀದಿದಾರರ ನಡುವೆ ಸಮಾಗಮವಾಗುತ್ತಿದೆ. ಮಳಿಗೆ ಸಿಬ್ಬಂದಿ ಪಾದರಸದಂತೆ ಓಡಾಡಿಕೊಂಡು ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಮಧ್ಯಾಹ್ನ 2ಕ್ಕೆ ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇರಲಿದೆ. ನಂತರ, ಸಂಜೆ 5ರಿಂದ ಡೊಳ್ಳು ಕುಣಿತ, ಜಾನಪದ ಮತ್ತು ಕೊಡವ ವೈಭವ ಸೇರಿ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದ್ದು, ಜನರಿಗೆ ಇನ್ನಷ್ಟು ಮನರಂಜನೆ ಸಿಗಲಿದೆ. ಬೆಳಗ್ಗೆಯಿಂದ ರಂಗೋಲಿ ಸ್ಪರ್ಧೆ, ಪುರುಷ, ಮಹಿಳಾ ಮತ್ತು ಮಕ್ಕಳ ಕ್ರೀಡೆ, ಶ್ವಾನ ಪ್ರದರ್ಶನ ಸೇರಿ ಇತರ ದೇಶಿಯ ಕ್ರೀಡೆಗಳು ನಡೆಯುತ್ತಿದ್ದು, ಜನರ ಕಣ್ಮನ ಸೆಳೆಯುತ್ತಿವೆ.
ಎಂದಿನಂತೆ ಮೂರನೇ ದಿನದಲ್ಲೂ ಬೆಳಗ್ಗೆಯಿಂದ ಸುಡು ಬಿಸಿಲಿನ ಮಧ್ಯೆಯೂ ಮೇಳಕ್ಕೆ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ. ಮಣ್ಣುರಹಿತ ಕೃಷಿ, ಕೃಷಿಯಲ್ಲಿ ಡ್ರೋನ್ ಬಳಕೆ, ಯಂತ್ರೋಪಕರಣ ಹಾಗೂ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳು ನೋಡುಗರ ಗಮನ ಸೆಳೆಯುತ್ತಿವೆ. ಕೆಲವರು ಟ್ರ್ಯಾಕ್ಟರ್ ಚಲಾಯಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡೆಯುತ್ತಿದ್ದಾರೆ. ಸಿರಿಧಾನ್ಯ, ಹಾಗೂ ಅವುಗಳ ಮಹತ್ವ, ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯ, ಜಲಾನಯನ ನಿರ್ವಹಣೆ, ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿಯ ಸೇರಿ ಉಪಯುಕ್ತ ಮಾಹಿತಿಗಳನ್ನು ಸಾರ್ವಜನಿಕರು ಪಡೆಯುತ್ತಿದ್ದಾರೆ.
ಸಾಕಿದ ಹೋರಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ ರೈತ: ಕೇಕ್ ಕತ್ತರಿಸಿ, ಊರಿಗೆಲ್ಲ ಊಟ
ಹೆಣ್ಣು ಮಗು ಎಂಬ ಕಾರಣಕ್ಕೆ ಬಿಟ್ಟು ಹೋದ ಗಂಡ: ಮಗಳನ್ನು ಡಾಕ್ಟರ್ ಮಾಡಲು ರಿಕ್ಷಾ ಚಾಲಕಿಯಾದ ತಾಯಿ