ಕೊಪ್ಪಳ: ನಗರದ ಪರಿಶಿಷ್ಟ ಪಂಗಡ ಮೆಟ್ರಿಕ್ ನಂತರದ ವಸತಿ ನಿಲಯದ ಅಡುಗೆ ಸಿಬ್ಬಂದಿ ಬದಲಾವಣೆ ಇತರ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ವಿದ್ಯಾರ್ಥಿಗಳು ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ನಿಲಯದಲ್ಲಿ 200 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, 500 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದಾರೆ. ಇದರಿಂದ ನಿತ್ಯ ಸಮಸ್ಯೆ ಉಲ್ಬಣಿಸುತ್ತಿದೆ. ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಅಡುಗೆ ಸಿಬ್ಬಂದಿ ಆಹಾರ ಧಾನ್ಯಗಳನ್ನು ಮನೆಗೆ ಕೊಂಡೊಯ್ಯುತ್ತಾರೆ. ಕಸದ ನಿರ್ವಹಣೆ ಮಾಡುತ್ತಿಲ್ಲ. ಬಿಸಿ ನೀರು ಪೂರೈಸುತ್ತಿಲ್ಲ. ಶೌಚಗೃಹ ಸ್ವಚ್ಛಗೊಳಿಸುತ್ತಿಲ್ಲ.
ಹೆಚ್ಚುವರಿ ವಿದ್ಯಾರ್ಥಿಗಳನ್ನು ಬೇರೆ ಕಟ್ಟಡಗಳಿಗೆ ಸ್ಥಳಾಂತರಿಸಬೇಕು. ಮೂಲ ಸೌಕರ್ಯ ಕಲ್ಪಿಸಬೇಕು. ಅಡುಗೆ ಸಿಬ್ಬಂದಿ ಬದಲಾಯಿಸಬೇಕು. ಗುಣಮಟ್ಟದ ಆಹಾರ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ವಿಷಯ ತಿಳಿದು ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 10 ದಿನದಲ್ಲಿ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರು.
ಬಳಿಕ ವಿಪ ಸದಸ್ಯೆ ಹೇಮಲತಾ ನಾಯಕ ಭೇಟಿ ನೀಡಿ ವಾರ್ಡನ್, ಅಡುಗೆ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ಮಂಗಳವಾರದಿಂದಲೇ ಅಡುಗೆ ಸಿಬ್ಬಂದಿ ಬದಲಾಯಿಸಲು ಸೂಚಿಸಿದರು. ವಿದ್ಯಾರ್ಥಿಗಳಾದ ಬಸವರಾಜ, ಇಂದ್ರೇಶ, ಮಂಜುನಾಥ, ಕುಂಟೆಪ್ಪ, ಹನುಮೇಶ, ವಿಜಯ, ಗಿರೀಶ ಇತರರಿದ್ದರು.