ಕೊಪ್ಪಳ: ತಾಲೂಕಿನ ಬಸಾಪುರ, ಕಿಡದಾಳ ಗ್ರಾಮಗಳಿಗೆ ಹಲವು ದಿನಗಳಿಂದ ಇದ್ದ ರಸ್ತೆ ಸಂಚಾರ ಸಮಸ್ಯೆ ಸೋಮವಾರ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹಾರವಾಗಿದೆ.


ಬಸಾಪುರ ಗ್ರಾಮದ ರೈಲ್ವೇ ಗೇಟ್ ಅಂಡರ್ ಪಾಸ್ ಕಾಮಗಾರಿ ಪ್ರಗತಿಯಲ್ಲಿದೆ. ನಾನಾ ಕಾರಣಗಳಿಂದ ಅದು ಕೋರ್ಟ್ನಲ್ಲಿದ್ದು, ಕಾಮಗಾರಿ ಸ್ಥಗಿತಗೊಂಡಿದೆ. ಬಸಾಪುರ, ಕಿಡದಾಳ ಗ್ರಾಮಗಳ ಸಂಪರ್ಕಕ್ಕೆ ಇದೇ ಮುಖ್ಯ ರಸ್ತೆ. ಹಾಲವರ್ತಿ ಗ್ರಾಪಂ, ಬೆಳವಿನಾಳ ಗ್ರಾಮಕ್ಕೆ ಬರಬೇಕೆಂದರೆ, ಗಿಣಿಗೇರಾ ಅಥವಾ ಕೊಪ್ಪಳ ಮಾರ್ಗವಾಗಿ ಬರಬೇಕಿದೆ. ಇದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರಾಘವೇಂದ್ರ ಹಿಟ್ನಾಳ, ತಹಸೀಲ್ದಾರ್ ವಿಠ್ಠಲ್ ಚೌಗಲಾ, ಗ್ರಾಮೀಣ ಠಾಣೆ ಸಿಪಿಐ ಸುರೇಶ ಡಿ, ಪಿಎಸ್ಐ ಅಶೋಕ ಬೇವೂರು ಹಾಗೂ ಪ್ರಮುಖರ ಸಮ್ಮುಖದಲ್ಲಿ ಕಿಡದಾಳ ನಡುವಿನ ಇನ್ನೊಂದು ರೈಲ್ವೆ ಗೇಟ್ ಮಾರ್ಗವಾಗಿ ಈ ಮೊದಲು ಇದ್ದ ರಸ್ತೆ ಮರು ಬಳಕೆಗೆ ಅವಕಾಶ ನೀಡಲಾಯಿತು.
ಜಮೀನು ಮಾಲೀಕರ ಮನವೊಲಿಸಿ ಹೊಸದಾಗಿ ರಸ್ತೆ ಮರು ನಿರ್ಮಿಸಿಕೊಡಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಪ್ರಮುಖರಾದ ಹನಮಂತಪ್ಪ ಕಿಡದಾಳ, ಭರಮಪ್ಪ ಗೊರವರ್, ಆನಂದ ಕಿನ್ನಾಳ, ನಾಗರಾಜ ಕಿಡದಾಳ, ಮುದಿಯಪ್ಪ ಆದೋನಿ ಇದ್ದರು.