ಕೊಡಗು ವಿವಿ ಉಳಿಸಲು ಮುಂದಾಗಿ

blank

ಮಡಿಕೇರಿ: ಕೊಡಗು ಜಿಲ್ಲೆಗೆ ಒದಗಿಬಂದ ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿ ಬೆಳಸಲು ಪ್ರತಿಯೊಬ್ಬರು ಕೈಜೋಡಿಸುವಂತಾಗಬೇಕು ಎಂಬ ಅಭಿಪ್ರಾಯ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆದ ಕೊಡಗು ವಿಶ್ವವಿದ್ಯಾಲಯದ ಸಾಧಕ-ಬಾಧಕ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ರಾಜ್ಯ ಸರ್ಕಾರ ರಾಜ್ಯದಲ್ಲಿ ೯ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಚಿಂತನೆ ನಡೆಸಿದ್ದು, ಅದರಲ್ಲಿ ಕೊಡಗು ವಿಶ್ವವಿದ್ಯಾಲಯವೂ ಒಂದು. ನೂರಾರು ಎಕರೆ ಪ್ರದೇಶದಲ್ಲಿ ಈ ವಿವಿ ಸ್ಥಾಪನೆಯಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವ ಸುಸಜ್ಜಿತ ವ್ಯವಸ್ಥೆ ಹೊಂದಿರುವ ವಿವಿಯನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ. ಈ ಹಿಂದೆ ಸರ್ಕಾರ ಎಲ್ಲಾ ವಿಶ್ವವಿದ್ಯಾಲಯಗಳಿಗೆ ೨ ಕೋಟಿ ಅನುದಾನ ನೀಡವುದಾಗಿ ಭರವಸೆ ನೀಡಿತ್ತು. ಆದರೆ, ಇಲ್ಲಿಯವರೆಗೆ ಯಾವುದೇ ಅನುದಾನವನ್ನು ನೀಡದೆ ವಿವಿಯನ್ನು ಮುಚ್ಚುವ ಸರ್ಕಾರದ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಆಂತಕ ಹೆಚ್ಚಾಗಲಿದೆ ಎಂದ ಅವರು, ದೇಶ ಮುಂದಕ್ಕೆ ಬರಬೇಕಾದರೆ ಶಿಕ್ಷಣ ಮುಖ್ಯ. ಇಂತಹ ಸಂದರ್ಭದಲ್ಲಿ ನಮಗೆ ಒದಗಿಬಂದ ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳುವಂತಾಗಬೇಕು ಎಂದರು.

ಶಿಕ್ಷಣ ತಜ್ಞ ಬಾಚರಣಿಯಂಡ ಪಿ.ಅಪ್ಪಣ್ಣ ಮಾತನಾಡಿ, ಕೊಡಗಿನ ಪ್ರಾದೇಶಿಕ, ಬೌಗೋಳಿಕ, ಸಂಸ್ಕೃತಿ, ಆಚಾರ, ವಿಚಾರಗಳು ತಳಮಟ್ಟದಿಂದಲೇ ಸಂಶೋಧನೆಯಾಗಬೇಕು. ಆ ನಿಟ್ಟಿನಲ್ಲಿ ಕೊಡಗು ವಿಶ್ವವಿದ್ಯಾಲಯ ಉಳಿಯಬೇಕು ಎಂದ ಅವರು, ಹಿಂದೆ ಧಾರ್ಮಿಕ ವಿಚಾರಕ್ಕೆ, ಅಕ್ಷರಭ್ಯಾಸಕ್ಕೆ ಪ್ರಮುಖ್ಯತೆ ಪಡೆದುಕೊಂಡಿತ್ತು. ಆದರೆ, ಇಂದು ಸಂಶೋಧನೆಯಲ್ಲಿ ವಿಶ್ವವಿದ್ಯಾಲಯಗಳು ಮುಂಚುಣಿಯಲ್ಲಿದೆ. ಆದ್ದರಿಂದ ಸರ್ಕಾರದಿಂದ ವಿವಿಧ ಧನಸಹಾಯ, ಪ್ರೋತ್ಸಾಹ ದೊರೆತ್ತಲ್ಲಿ ಮಾತ್ರ ಸಂಶೋಧನೆ ನಡೆಸಲು ಸಾಧ್ಯ. ಆ ನಿಟ್ಟಿನಲ್ಲಿ ಕೊಡಗು ವಿವಿ ಉಳಿವಿಗೆ ಎಲ್ಲರೂ ಒಮ್ಮನಸಿನಿಂದ ಹೋರಾಟ ಮಾಡಿ ಸರ್ಕಾರವನ್ನು ಎಚ್ಚರಿಸಬೇಕು ಎಂದು ಹೇಳಿದರು.

ಕೊಡಗು ವಿಶ್ವವಿದ್ಯಾಲಯದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೃಷ್ಣೆ ಗೌಡ ಮಾತನಾಡಿ, ಕೊಡಗು ವಿಶ್ವವಿದ್ಯಾಲಯ ನಮ್ಮ ಅಸ್ಮಿತೆ. ಇಲ್ಲಿ ಪ್ರತಿಯೊಬ್ಬರು ಸೈನಿಕರಂತೆ ಹೋರಾಡಿ ವಿವಿ ಉಳಿವಿಗೆ ಪಣತೊಟ್ಟಿದ್ದಾರೆ. ಸುಮಾರು ೫೦ ಜನರ ತಂಡ ಶಾಸಕರ ನೇತೃತ್ವದಲ್ಲಿ ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ೮ ಜನ ಸಚಿವರಿಗೆ ಕೊಡಗು ವಿವಿಯ ಸಾಧಕ-ಬಾಧಕಗಳನ್ನು ಮನವಿರಿಕೆ ಮಾಡಿಕೊಡಲಾಗಿದೆ. ಕೊಡಗು ವಿವಿ ಆರಂಭಗೊಂಡು ಕೇವಲ ಎರಡುವರ್ಷಗಳಾಗಿದ್ದು, ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಉತ್ತಮ ವಾತಾವರಣದಲ್ಲಿ ಇರುವ ವಿಶ್ವವಿದ್ಯಾಲಯವನ್ನು ಇಬ್ಬರು ಶಾಸಕರು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಸಮಾಜ ಸೇವಕ ನಾಪಂಡ ಮುತ್ತಪ್ಪ ಮಾತನಾಡಿ, ಸದ್ಯದಲ್ಲಿ ಮುಚ್ಚುವ ಮತ್ತು ವಿಲೀನಗೊಳಿಸುವ ಯಾವುದೇ ಪ್ರಕ್ರಿಯೆ ಆಗಲ್ಲ. ಇದಕ್ಕೆ ಬೇಕಾದ ಅನುದಾನವನ್ನು ಓದಗಿಸುವ ಕೆಲಸ ಸರ್ಕಾರ ಮಾಡಬೇಕು. ಯಾವ ಸರ್ಕಾರ ಇದ್ದರೂ ಕೊಡಗಿಗೆ ಬಂದಿದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು ಎಂದರು.

ಈ ಹಿಂದೆ ಕೊಡಗಿನಲ್ಲಿ ಬಡವರು, ನಿರ್ಗತಿಕರಿಗೆ ಕೈಗೆಟಕುವ ದರದಲ್ಲಿ ಉನ್ನತ ಶಿಕ್ಷಣ ನೀಡಲು ಸಾಧ್ಯವಾಗುತ್ತಿರಲಿಲ್ಲ. ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಲು ಆರ್ಥಿಕ, ಸದೃಢತೆ ಮತ್ತು ಸುರಕ್ಷತೆ ಅಗತ್ಯವಿತ್ತು. ಇದರಿಂದ ಬಡವರು, ಹಿಂದುಳಿದವರು, ಆದಿವಾಸಿಗಳಿಗೆ ಉನ್ನತ ಶಿಕ್ಷಣ ನೀಡಲು ಸಾಧ್ಯವಾಗುತ್ತಿರಲಿಲ್ಲ. ಪ್ರಸ್ತುತ ದಿನಗಳಲ್ಲಿ ಎಲ್ಲರಿಗೂ ಪರಿಣಾಮಕಾರಿಯಾಗಿ ಶಿಕ್ಷಣ ನೀಡುವಂತಾಗಬೇಕು. ಆದ್ದರಿಂದ ಕೊಡಗು ವಿಶ್ವ ವಿದ್ಯಾನಿಲಯ ಉಳಿಯಬೇಕು ಎಂದರು.

ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ಮಾತನಾಡಿ, ಯಾವುದೇ ಕಾರಣಕ್ಕೂ ಕೊಡಗಿನ ವಿವಿ ಮುಚ್ಚಲು ಬಿಡುವುದಿಲ್ಲ. ಯುವ ಜನರ ಓದಿಗೆ ಅಗತ್ಯವಾದ ವಿವಿ ಕಳೆದುಕೊಂಡರೆ ಭವಿಷ್ಯದಲ್ಲಿ ವಿದ್ಯಾರ್ಥಿಗಳು ದೂರದ ಊರಿಗೆ ತೆರಳಬೇಕಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದರಿಂದ ಹೆಚ್ಚಿನ ಹೊರೆಯಾಗಲಿದೆ. ಇದನೆಲ್ಲ ಗಮನದಲ್ಲಿಟ್ಟುಕೊಂಡ ಕೊಡಗಿನ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ಬಗ್ಗೆ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಕೊಡಗು ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮ್ಮದ್ ಮಾತನಾಡಿ, ಖಾಸಗಿ ವಿವಿಗಳಿಗೆ ಸಿಗುವ ಪ್ರೋತ್ಸಾಹ ಸರ್ಕಾರಿ ವಿಶ್ವವಿದ್ಯಾಲಗಳಿಗೆ ಏಕೆ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಕೆಲವು ಆತಂರಿಕ ಕಾರಣದಿಂದ ವಿದ್ಯಾರ್ಥಿಗಳ ಕೊರತೆ ಇದ್ದು, ಕೌಶಲ್ಯಾಧರಿತ ಶಿಕ್ಷಣ ಇಂದು ಅಗತ್ಯವಾಗಿದೆ. ಕೊಡಗು ವಿಶ್ವವಿದ್ಯಾಲಯದಲ್ಲಿ ಎಲ್ಲವನ್ನೂ ನೀಡಲಾಗುತ್ತಿದೆ. ಕೊಡಗು ವಿವಿಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದು, ವಿವಿಯ ಅಶ್ಮಿತೆಯನ್ನು ಕಳೆಯಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ ಶೀಘ್ರ ನಿರ್ಧರ ಕೈಗೊಳ್ಳಬೇಕು ಮತ್ತು ಉಪನ್ಯಾಸಕರ ವರ್ಗವಣೆ ಪೂರ್ಣಗೊಳಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ರಾಜಕೀಯವನ್ನು ಬದಿಗೊತ್ತಿದಾಗ ಮಾತ್ರ ಶಿಕ್ಷಣ ಕ್ಷೇತ್ರ ಸುಧಾರಣೆ ಕಾಣಲು ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಹಿಂದುಳಿದ ಜಿಲ್ಲೆಗಳಿಗೆ ಮಾತ್ರ ವಿಶ್ವವಿದ್ಯಾಲಯವನ್ನು ನೀಡಲಾಗಿದ್ದು, ಇಲ್ಲಿಯವರೆಗೆ ಕರ್ನಾಟಕದಲ್ಲಿ ಆರ್ಥಿಕ ಕಾರಣವನ್ನು ನೀಡಿ ಯಾವುದೇ ವಿಶ್ವವಿದ್ಯಾಲಯಗಳು ಮುಚ್ಚಿರುವ ಸಂದರ್ಭ ಇಲ್ಲ. ಆದ್ದರಿಂದ ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಖಜಾಂಚಿ ಆನಂದ್, ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ವನಿತಾ ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ನಿರ್ದೇಶಕ ಲೋಹಿತ್, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್, ಪತ್ರಕರ್ತ ಕೆ.ಎಸ್.ಮೂರ್ತಿ ಸೇರಿದಂತೆ ಮತ್ತಿತರು ಹಾಜರಿದ್ದರು.

ಗೊಂದಲದ ಹೇಳಿಕೆ ಬೇಡ
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೊಡಗು ವಿಶ್ವವಿದ್ಯಾಲಯವನ್ನು ಮಂಗಳೂರು ವಿಶ್ವವಿದ್ಯಾಲಯಕ್ಕೆ ವಿಲೀನಗೊಳಿಸಲಾಗುವುದೆಂದು ಹೇಳಲಾಗುತ್ತಿದೆ. ಆದರೆ, ಮಂಗಳೂರು ವಿವಿಯ ಪರಿಸ್ಥಿತಿ ಏನು ಎಂಬುದನ್ನು ಅವಲೋಕ ಮಾಡಬೇಕಾಗಿದೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಸುಲಭದ ಶಿಕ್ಷಣ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಕೊಡಗು ವಿಶ್ವವಿದ್ಯಾಲಯವನ್ನು ಮುಂದುವರೆಸುವ ಪ್ರಯತ್ನ ನಡೆಯಬೇಕೆ ಹೊರತು, ವಿವಿಗಳಲ್ಲಿ ದಾಖಲಾತಿ ಆರಂಭವಾಗುತ್ತಿರುವ ಸಂದರ್ಭದಲ್ಲಿ ಗೊಂದಲದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ರಾಜ್ಯ ಸರ್ಕಾರದಿಂದ ಅನುದಾನ ನೀಡದಿದ್ದರೂ ಪರವಾಗಿಲ್ಲ, ಕೊಡಗು ವಿವಿಯನ್ನು ಉಳಿಸಿಕೊಂಡು ಗೊಂದಲ ಹೇಳಿಕೆಗಳಿಗೆ ಕಡಿವಾಣ ಹಾಕಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಗೆ ನಂಬರ್ ಒನ್ ವಿಶ್ವವಿದ್ಯಾಲಯ ಎನಿಸಿಕೊಳ್ಳುವುದರಲ್ಲಿ ಸಂಶವಿಲ್ಲ ಎಂದರು.

 

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಲಿ
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಇತರ ಜಿಲ್ಲೆಗಳಿಗೆ ತೆರಳಿ ಶಿಕ್ಷಣ ಪಡೆಯಲು ಕಷ್ಟ ಪಡುವ ವಿದ್ಯಾರ್ಥಿಗಳಿಗೆ ನಮ್ಮದೇ ಜಿಲ್ಲೆಯಲ್ಲಿ ಉತ್ತಮ ಉನ್ನತ ಶಿಕ್ಷಣ ಪಡೆಯಲು ಕೊಡಗು ವಿಶ್ವವಿದ್ಯಾಲಯ ಸಹಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪ್ರತಿಯೊಬ್ಬರಿಗೂ ಶಿಕ್ಷಣ ಮುಖ್ಯವಾಗಿದ್ದು, ಶಿಕ್ಷಣವೇ ದೇಶ ಆಸ್ತಿ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಹೆಚ್ಚು ಅನುದಾನ ನೀಡುವಂತಾಗಬೇಕು. ಶಿಕ್ಷಣ ಇದ್ದರೆ ದೇಶ ಮುಂದೆ ಬರಲು ಸಾಧ್ಯ ಎಂದರು.

 

ನಮ್ಮ ಜಿಲ್ಲೆ ಗುಡ್ಡಗಾಡು ಪ್ರದೇಶ, ಕ್ರೀಡೆ ಮತ್ತು ಸೈನ್ಯಕ್ಕೆ ಒತ್ತು ಕೊಟ್ಟ ಜಿಲ್ಲೆ. ಅಲ್ಲದೇ ಪರಿಸರಕ್ಕೆ ದೊಡ್ಡ ಕೊಡುಗೆ ನೀಡಲಾಗಿದೆ. ಹೀರಿಗರುವ ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆ ನೀಡುವ ನಿಟ್ಟಿನಲ್ಲಿ ಸರ್ಕಾರದಿಂದ ಬಂದ ಸೌಲಭ್ಯಗಳನ್ನು ಯಾವುದೇ ಕಾರಣಕ್ಕೂ ಕೈ ಬಿಡುವ ಕೆಲಸ ಆಗಬಾರದು.
ಅಪ್ಪಚ್ಚು ರಂಜನ್, ಮಾಜಿ ಶಾಸಕರು, ಮಡಿಕೇರಿ ವಿಧಾನಸಭಾ ಕ್ಷೇತ್ರ

 

ವಿಶ್ವವಿದ್ಯಾಲಯದ ಪ್ರಗತಿಗೆ ಸ್ವಲ್ಪ ಕಾಲವಕಾಶ ನೀಡಿದ್ದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ವಿವಿ ಎನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಇದೀಗ ಬಡವರಿಗೆ, ನಿರ್ಗತಿಕರಿಗೆ, ಆದಿವಾಸಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಕೊಡಗು ವಿವಿ ಉತ್ತಮ ಅವಕಾಶವಾಗಿದ್ದು, ಭಾಷೆ, ಸಂಸ್ಕೃತಿಯ ಅಧ್ಯಯನ ಹಾಗೂ ಸ್ಥಳೀಯ ವಿಷಯಗಳನ್ನು ಪರಿಚಯಿಸಲು ಸಹಕಾರಿಯಾಗಿದೆ. ಅಲ್ಲದೇ ಸರ್ಕಾರದ ಹಲವು ಯೋಜನೆಗಳ ವೃತ್ತಿಪರ ಕೋರ್ಸುಗಳಿಗೂ ಅವಕಾಶ ಕಲ್ಪಿಸುವಂತಾಗುತ್ತದೆ ಎಂದರು.
ನಾಪಂಡ ರವಿ ಕಾಳಪ್ಪ, ಜಿಲ್ಲಾಧ್ಯಕ್ಷರು, ಬಿಜೆಪಿ

 

ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕಾದರೆ ಅಲ್ಲಿನ ಸಾಧಕ ಬಾಧಕಗಳನ್ನು ಪರಿಶೀಲಿಸಬೇಕು. ಈಗಾಗಲೇ ಸಂಪುಟದ ಉಪಸಮಿತಿಗಳನ್ನು ರಚಿಸಿ ಕೊಡಗು ವಿಶ್ವವಿದ್ಯಾಲಯದ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ವರದಿ ನೀಡುವಂತೆ ಹೇಳಲಾಗಿದೆ. ಆದರೆ, ಈಗಾಗಲೇ ಜಿಲ್ಲೆಯಲ್ಲಿರುವ ಕಾರ್ಯಪ್ಪ ಕಾಲೇಜಿನಲ್ಲಿ ಕೆಲವು ವಿಷಯವಾರು ಕೋರ್ಸುಗಳು ಮುಚ್ಚಿಹೋಗಿದೆ. ಹೀಗಿರುವಾಗ ಇಂದಿನ ಆಧುನೀಕರಣದ ವ್ಯವಸ್ಥೆಗೆ ತಕ್ಕಂತೆ ಉಪನ್ಯಾಸಕರ ಕೊರತೆ ಇದೆ. ವಿದ್ಯಾರ್ಥಿಗಳಿಗ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಒಂದಷ್ಟು ಕಾಲವಕಾಶ ಅಗತ್ಯ ಇದೆ.
ತೀತಿರ ಧರ್ಮಜಾ ಉತ್ತಪ್ಪ, ಜಿಲ್ಲಾಧ್ಯಕ್ಷರು, ಕಾಂಗ್ರೆಸ್

Share This Article

ನಿಮ್ಮ ಮುಖದಲ್ಲಿ ಬೇಡದ ಕೂದಲು ಇದೆಯೇ? ಈ ಸಲಹೆಗಳನ್ನು ಅನುಸರಿಸಿ..Unwanted Hair

Unwanted Hair : ಮುಖದ ಮೇಲೆ ಬೇಡದ ಕೂದಲು ಸಾಮಾನ್ಯ ಆದರೆ ಮಹಿಳೆಯರಿಗೆ ಮುಜುಗರದ ಸಮಸ್ಯೆಯಾಗಿದೆ.…

ಕೇವಲ 2 ಚಮಚ ಉಪ್ಪು ಇದ್ದರೆ ಸಾಕು ಮನೆಗೆ ಇರುವೆ, ಜಿರಳೆ ಬರದಂತೆ ತಡೆಯಬಹುದು..| Salt

Salt: ಉಪ್ಪು ಅಡಿಗೆಗೆ ರುಚಿಯನ್ನು ಮಾತ್ರ ನೀಡುವುದಿಲ್ಲ, ಅದು ನಿಮ್ಮ ಅಡುಗೆ ಮನೆಯ ಸ್ವಚ್ಛತೆಗೂ ಸಹಾಯ…

ಜಸ್ಟ್​ ಈ ಸಣ್ಣ ಕೆಲಸ ಮಾಡಿ… ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಿ! Glowing Skin

Glowing Skin : ಪ್ರತಿಯೊಬ್ಬರೂ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಬಯಸುತ್ತಾರೆ. ಆದರೆ, ಪ್ರಸ್ತುತ ಕಾಲದಲ್ಲಿ,…