ವಿವಾಹ ನೋಂದಣಿ ಮಾಡಿಸಿದ ನವದಂಪತಿ- ಯುವತಿಯನ್ನು ಕರೆದೊಯ್ಯುವ ಯತ್ನ ವಿಫಲ
ಗುಡಿಬಂಡೆ: ಪಾಲಕರ ವಿರೋಧದ ನಡುವೆಯೂ ಪೊಲೀಸ್ ಬಂದೋಬಸ್ತ್ನಲ್ಲಿ ಅಂತರ್ಜಾತಿ ಪ್ರೇಮಿಗಳ ವಿವಾಹ ಶುಕ್ರವಾರ ನೆರವೇರಿತು.
ತಾಲೂಕಿನ ಗಂಧಂನಾಗೇನಹಳ್ಳಿಯ ಮುನಿಆಂಜಿನೇಯ ಮತ್ತು ಗೌರಿಬಿದನೂರು ತಾಲೂಕಿನ ಹಳೇ ಉಪ್ಪಾರಹಳ್ಳಿಯ ದಿವ್ಯಶ್ರೀ ವಿವಾಹವಾದವರು. ಇಬ್ಬರು ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ವಿವಾಹಕ್ಕೆ ಪಾಲಕರು ಅಡ್ಡಿಯಾಗಿದ್ದ ಕಾರಣ ಪ್ರೇಮಿಗಳು ಮನೆಬಿಟ್ಟು ಹೋಗಿ ವಿವಾಹವಾಗಿದ್ದರು. ನಂತರ ಇಬ್ಬರು ಗುಂಡಿಬಂಡೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿಗೆ ಆಗಮಿಸುತ್ತಿದ್ದಂತೆ ಕಚೇರಿ ಆವರಣದಲ್ಲಿದ್ದ ಯುವತಿಯ ಸಂಬಂಧಿಕರು ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಲು ಮುಂದಾಗುತ್ತಿದ್ದಂತೆ ಸ್ಥಳದಲ್ಲಿದ್ದವರು ತಡೆದು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನು ಠಾಣೆಗೆ ಕರೆದೊಯ್ದು ರಕ್ಷಣೆ ನೀಡಿದರು.
ನಂತರ ತಾಲೂಕು ದಲಿತ ಹಾಗೂ ವಾಲ್ಮೀಕಿ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಉಪನೊಂದಣಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿ ವಿವಾಹ ನೋಂದಣಿ ಮಾಡಿಸಿ ನಂತರ ತಹಸೀಲ್ದಾರ್ ಸಿಗ್ಬತ್ವುಲ್ಲಾ ವಿವಾಹ ನೋಂದಣಿ ಪ್ರಮಾಣಪತ್ರವನ್ನು ಪ್ರೇಮಿಗಳಿಗೆ ನೀಡಿ ಉತ್ತಮವಾಗಿ ಬದುಕುವಂತೆ ಹಾರೈಸಿದರು.
ಗೌರಿಬಿದನೂರು ಠಾಣೆಯಲ್ಲಿ ಯುವತಿಯ ಪಾಲಕರು ನಾಪತ್ತೆ ದೂರು ನೀಡಿದ್ದು, ಆ ದೂರನ್ನು ಮುಕ್ತಾಯಗೊಳಿಸಲು ಗೌರಿಬಿದನೂರಿಗೆ ಹೋಗಲು ಭಯ ಆಗುತ್ತದೆಂದು ಪ್ರೇಮಿಗಳು ತಿಳಿಸಿದ್ದರಿಂದ, ಗೌರಿಬಿದನೂರು ಠಾಣೆಯ ಸಿಬ್ಬಂದಿ ಗುಡಿಬಂಡೆಗೆ ಠಾಣೆಗೆ ಆಗಮಿಸಿ ಯುವತಿಯ ಅಭಿಪ್ರಾಯ ಸಂಗ್ರಹಿಸಿ ದೂರು ಮುಕ್ತಾಯಗೊಳಿಸಿದರು.
ಶಿಡ್ಲಘಟ್ಟದಲ್ಲಿ 13 ಗೃಹಬಳಕೆ ಸಿಲಿಂಡರ್ ವಶ
ಶಿಡ್ಲಘಟ್ಟ: ತಾಲೂಕು ಕಚೇರಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ನಿರೀಕ್ಷಕರ ತಂಡ ನಗರದ ವಿವಿಧೆಡೆ ಶುಕ್ರವಾರ ಕಾರ್ಯಾಚರಣೆ ಕೈಗೊಂಡು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದೆ.
ನಗರದ ವಿವಿಧ ಹೋಟೆಲ್, ಕಾಫಿ ಟೀ ಅಂಗಡಿ ಮೊದಲಾದ ಕಡೆ ದಿಢೀರ್ ದಾಳಿ ನಡೆಸಿದ ಆಹಾರ ನಿರೀಕ್ಷಕರಾದ ಪ್ರಕಾಶ್, ವೆಂಕಟಲಕ್ಷ್ಮಮ್ಮ ನೇತೃತ್ವದ ತಂಡ ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದು ಒಟ್ಟು 13 ಗೃಹಬಳಕೆ ಸಿಲಿಂಡರ್ಗಳನ್ನು ವಶಕ್ಕೆ ಪಡೆಯಿತು.
ವಶಕ್ಕೆ ಪಡೆದ ಸಿಲಿಂಡರ್ಗಳನ್ನು ತನಿಖಾ ವರದಿಯೊಂದಿಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದ ವಶಕ್ಕೆ ನೀಡಲಿದ್ದು ಜಿಲ್ಲಾಧಿಕಾರಿಗಳು ಸಂಬಂಧಿಸಿದವರಿಗೆ ನೋಟಿಸ್ ನೀಡಲಿದ್ದಾರೆ. ವಾಣಿಜ್ಯ ಬಳಕೆಗೆಂದು ಸಿಲಿಂಡರ್ಗಳನ್ನು ಪಡೆದ ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಸಿಲಿಂಡರ್ಗಳನ್ನು ವಾಪಸ್ ಮಾಡಲಿದ್ದಾರೆ. ಇಲ್ಲವಾದಲ್ಲಿ ಸಿಲಿಂಡರ್ಗಳನ್ನು ಮುಟ್ಟು ಗೋಲು ಹಾಕಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.