ಕೆರೂರ: ಬಾದಾಮಿ ತಾಲೂಕಿನಲ್ಲಿ 3 ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿ 25 ಸಾವಿರ ಯುವಕರಿಗೆ ಉದ್ಯೋಗ ಕಲ್ಪಿಸುವ ಜತೆಗೆ ಸುತ್ತಲಿನ ಸಾವಿರಾರು ರೈತರಿಗೆ ಅನುಕೂಲ ಒದಗಿಸಿದ ಹೆಮ್ಮೆ ಎಂಆರ್ಎನ್ ಸಮೂಹ ಸಂಸ್ಥೆಗಿದೆ ಎಂದು ಬೀಳಗಿ ಶಾಸಕ, ಸಕ್ಕರೆ ಉದ್ಯಮಿ ಮುರುಗೇಶ ನಿರಾಣಿ ಹೇಳಿದರು.
ಸಮೀಪದ ಕಲ್ಲಾಪುರ ಗ್ರಾಮದ ಬಳಿಯ ನಿರಾಣಿ ಶುಗರ್ಸ್ ಕಾರ್ಖಾನೆಯಲ್ಲಿ ಪ್ರಸ್ತುತ ವರ್ಷದ ಕಬ್ಬು ನುರಿಸುವ ಕಾರ್ಯಕ್ಕೆ ಭಾನುವಾರ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಿರಾಣಿ ಸಮೂಹ 25 ಕೋಟಿಗೆ ಖರೀದಿಸಿರುವ ಬಾದಾಮಿ ಶುಗರ್ಸ್ ನವೆಂಬರ್ 17 ರಂದು ಹಾಗೂ 60 ಕೋಟಿಗೆ ಖರೀದಿಸಿದ ಕೆರಕಲಮಟ್ಟಿಯ ಕೇದಾರನಾಥ ಶುಗರ್ಸ್ ನವೆಂಬರ್ 30 ರಂದು ಪ್ರಾರಂಭಿಸಲು ಎಂಆರ್ಎನ್ ಸಂಸ್ಥೆ ಸಿದ್ಧವಾಗಿದೆ. ಒಂದೂ ಕೈಗಾರಿಕೆ ಇಲ್ಲದ ಬಾದಾಮಿ ತಾಲೂಕಿನಲ್ಲಿ ತಾಯಿ ಬನಶಂಕರಿ ದೇವಿ ಕೃಪೆಯಿಂದ 3 ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಲಿವೆ ಎಂದು ಹೇಳಿದರು.
ಕಬ್ಬು ಬೆಳೆದ ಸುತ್ತಮುತ್ತಲಿನ ಸಾವಿರಾರು ರೈತರಿಗೆ ಅನುಕೂಲವಾಗಲಿದ್ದು ಎಂಆರ್ಎನ್ ಸಮೂಹ ಸಂಸ್ಥೆ ಈವರೆಗೆ 75 ಸಾವಿರ ಜನರಿಗೆ ಉದ್ಯೊಗ ಒದಗಿಸಿದೆ. ಇಥೆನಾಲ್ ತಯಾರಿಕೆಯಲ್ಲಿ ಎಂಆರ್ಎನ್ ಸಂಸ್ಥೆ ದೇಶದಲ್ಲೇ ಮೂರನೇ ಸ್ಥಾನದಲ್ಲಿದ್ದು ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ವಿಮಾನಕ್ಕೆ ಬಳಸುವ ಇಂಧನ ತಯಾರಿಸಲು ಯೊಜನೆ ರೂಪಿಸಿದೆ. ಸರ್ಕಾರ ನಿಗದಿಪಡಿಸಿದ ದರದಲ್ಲಿ ಕಬ್ಬು ಖರೀದಿಸಿ ರೈತರಿಗೆ ಪ್ರತಿ 15 ದಿನಕ್ಕೊಮ್ಮೆ ಬಿಲ್ ಪಾವತಿಸಲಾಗುತ್ತಿದೆ. ನಿರಾಣಿ ಸಮೂಹ ಸಂಸ್ಥೆ ಸಕ್ಕರೆ ಉತ್ಪಾದನೆ ಕ್ಷೇತ್ರದಲ್ಲಿ ಕೃಷ್ಣೆಯಿಂದ ಕಾವೇರಿವರೆಗೆ ತನ್ನ ವಿಸ್ತಾರ ಚಾಚಿದೆ ಎಂದರು.
ವಿಠ್ಠಲ ಭಟ್ಟ ಸ್ವಾಮಿಗಳು ಪೂಜೆ ನೆರವೇರಿಸಿದರು. ಶ್ರೀಶೈಲ ನಿರಾಣಿ, ಪಿ.ಆರ್. ಗೌಡರ, ಮಧು ಯಡ್ರಾಮಿ, ಜಿಪಂ ಸದಸ್ಯ ಬಸವರಾಜ ಹೊಸಮನಿ, ಭೀಮನಗೌಡ ಪಾಟೀಲ, ಮಲ್ಲು ಕಂಟೆಪ್ಪನವರ, ಕಿರಣ ಬಡಿಗೇರ ಹಾಗೂ ಕಾರ್ಖಾನೆ ಮ್ಯಾನೇಜರ್ ರವಿಕಾಂತ ಪಾಟೀಲ ಭಾಗಿಯಾಗಿದ್ದರು.