ತಿರುವನಂತಪುರಂ: ನವದೆಹಲಿಯ ಜವಾಹರ್ ಲಾಲ್ ಯೂನಿವರ್ಸಿಟಿಯಲ್ಲಿ ಜ.5ರಂದು ನಡೆದ ಹಿಂಸಾಚಾರದಲ್ಲಿ ತೀವ್ರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್ ಅವರನ್ನು ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ಮಾಡಿದರು.
ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಇಂದು ಪೊಲಿಸರು ಒಂಭತ್ತು ಜನ ಶಂಕಿತರ ಫೋಟೋವನ್ನು ಇಂದು ಬಿಡುಗಡೆ ಮಾಡಿದ್ದು, ಅದರಲ್ಲಿ ಐಷೆ ಘೋಷ್ ಕೂಡ ಒಬ್ಬರು.
ಜ.5ರಂದು ನಡೆದ ಹಿಂಸಾಚಾರದಲ್ಲಿ ಐಷೆ ಘೋಷ್ ಅವರ ತಲೆ ಹಾಗೂ ಕೈಗೆ ತೀವ್ರ ಏಟಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುವ ಐಷೆ ಘೋಷ್ರನ್ನು ಇಂದು ನವದೆಹಲಿಯಲ್ಲಿರುವ ಕೇರಳ ಹೌಸ್ನಲ್ಲಿ ಭೇಟಿಯಾದ ಪಿಣರಾಯಿ ವಿಜಯನ್, ಅವರ ಆರೋಗ್ಯ ವಿಚಾರಿಸಿದರು. ಅಲ್ಲದೆ, ಗಾಯಗೊಂಡಿದ್ದ ಉಳಿದ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಮಾಹಿತಿ ಪಡೆದರು.
ಅಷ್ಟೇ ಅಲ್ಲದೆ, ಸುಧನ್ವ ದೇಶಪಾಂಡೆ ಅವರು ಬರೆದ ‘ಹಲ್ಲಾ ಬೋಲ್: ದಿ ಡೆತ್ ಆ್ಯಂಡ್ ಲೈಫ್ ಆಫ್ ಸಫ್ದರ್ ಹಶ್ಮಿ’ ಪುಸ್ತಕವನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.
ಶುಲ್ಕ ಹೆಚ್ಚಳ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಜೆಎನ್ಯು ವಿದ್ಯಾರ್ಥಿ ಸಂಘಟನೆಯೊಂದಿಗೆ ಇಡೀ ದೇಶವೇ ಇದೆ. ನಿಮ್ಮ ಪ್ರತಿಭಟನೆ ಬಗ್ಗೆ ಎಲ್ಲರಿಗೂ ಗೊತ್ತು. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ನಿಮಗೆ ಏನಾಗಿದೆ ಎಂಬುದೂ ಎಲ್ಲರಿಗೂ ತಿಳಿದಿದೆ ಎಂದು ಐಷೆ ಘೋಷ್ ಬಳಿ ಪಿಣರಾಯಿ ವಿಜಯನ್ ಹೇಳಿದ್ದಾರೆ ಎನ್ನಲಾಗಿದೆ.
ಪಿಣರಾಯಿ ವಿಜಯನ್ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಐಷೆ ಘೋಷ್, ತಮ್ಮ ಪರವಾಗಿ ನಿಂತಿದ್ದಕ್ಕೆ ಇಡೀ ಕೇರಳಕ್ಕೆ ಧನ್ಯವಾದ ತಿಳಿಸಿದ್ದಾರೆ.
ಇನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ಸಂಘಪರಿವಾರ ಬಲಪ್ರಯೋಗದಿಂದ ಜೆಎನ್ಯು ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿತು. ಆದರೆ ಜೆಎನ್ಯು ಯಾವುದೇ ಕಾರಣಕ್ಕೂ ರಾಜಿಯಾಗಲಿಲ್ಲ. ಐಷೆ ಘೋಷ್ ತನ್ನ ತಲೆಗೆ ಗಾಯವಾಗಿದ್ದರೂ ಲೆಕ್ಕಿಸದೆ ಹೋರಾಟದ ಮುಂದಾಳತ್ವ ವಹಿಸಿದ್ದಾರೆ ಎಂದು ಬರೆದಿದ್ದಾರೆ. (ಏಜೆನ್ಸೀಸ್)