ಹಾಸನ: ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ನಡೆದ ಆರೋಪವಿದ್ದು ತನಿಖೆ ನಡೆಸಿ ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಳಗೊಂದು ಹೊರಗೊಂದು ಮಾತಾಡಬೇಡಿ, ದೇಶದ ದುಡ್ಡು ಹಾಳು ಮಾಡಬೇಡಿ. ಈ ವಿಚಾರದಲ್ಲಿ ನಾನು ರಾಜಿಯಾಗಲ್ಲ. ತೆರೆದಿರುವ 131 ಘಟಕಗಳಲ್ಲಿ ಬಹುತೇಕ ಎಲ್ಲವೂ ಬಂದ್ ಆಗಿವೆ. ಧರ್ಮಸ್ಥಳ ಸಂಘದಿಂದ ನಡೆಯುತ್ತಿರುವ ಘಟಕಗಳು ಮಾತ್ರ ಕೆಲಸ ಮಾಡುತ್ತಿವೆ. ಈ ಆರೋಪದಲ್ಲಿ ಸುಳ್ಳಿದ್ದರೆ ಸಾರ್ವಜನಿಕ ಕ್ಷಮೆ ಕೇಳ್ತಿನಿ ಎಂದರು.
ಶಾಸಕ ಪ್ರೀತಂ ಜೆ. ಗೌಡ ಮಧ್ಯೆ ಮಾತಾಡಲು ಮುಂದಾದಾಗ ಶಿವಲಿಂಗೇಗೌಡ ತಡೆದು, ನನ್ನ ಸಮಸ್ಯೆ ಹೇಳೋತನಕ ಸುಮ್ಮನಿರಿ ಎಂದರು.