ಉತ್ತರಕನ್ನಡ: ಕಾರವಾರ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ವಿರೋಧಿಸಿ ಮೀನುಗಾರರ ಸಂಘಟನೆಗಳು ಇಂದು ಕಾರವಾರ ಬಂದ್ಗೆ ಕರೆ ನೀಡಿದ್ದವು.
ಅದರಂತೆ ಕಾರವಾರ ಸಂಪೂರ್ಣ ಬಂದ್ ಆಗಿತ್ತು. ನಗರದ ವಿವಿಧ ಸಂಘಟನೆ ಮುಖಂಡರು, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸುಮಾರು 6 ಸಾವಿರಕ್ಕೂ ಅಧಿಕ ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಮಧ್ಯೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ ಕಾರವಾರದ ಟ್ಯಾಗೋರ್ ಕಡಲತೀರಕ್ಕೆ ಭೇಟಿ ನೀಡಿ ಯೋಜನೆಯ ಕಾಮಗಾರಿ ವೀಕ್ಷಿಸಿದರು.
ಬಳಿಕ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಅವರು, ಈ ಯೋಜನೆ ಸಾಗರಮಾಲಾ ಮೀನುಗಾರರ ಅನ್ನದ ಬಟ್ಟಲು ಕಸಿಯುವ ಯೋಜನೆಯಾಗಿದೆ. ಸಚಿವರು ಮೀನುಗಾರರಿಗೆ ಯಾವುದೇ ತೊಂದರೆ ಇಲ್ಲ ಎಂದಿದ್ದರು. ಒಮ್ಮೆ ಈ ಯೋಜನೆ ಸಂಪೂರ್ಣ ಜಾರಿಯಾದರೆ ಮೀನುಗಾರರು ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು.
ಹಿಂದೆ ಯೋಜನೆ ಜಾರಿಗೆ ಬರುತ್ತಿದ್ದಾಗಲೇ ಪ್ರತಿಭಟನೆ ಮಾಡಬೇಕಿತ್ತು. ನಮ್ಮ ತಂದೆ-ತಾಯಿಗೆ ಹಿಂದಿನಿಂದಲೂ ಕಾರವಾರದ ನಂಟು ಇದೆ. ನಮಗೆ ಕಾರವಾರ ಮತ್ತು ಉಡುಪಿ ಬೇರೆ ಅಲ್ಲ. ಈಗಾಗಲೇ ನೌಕಾನೆಲೆ ಯೋಜನೆಯಿಂದ ಮೀನುಗಾರರು ತೊಂದರೆ ಅನುಭವಿಸಿದ್ದಾರೆ. ಈಗ ಮತ್ತೆ ಇಲ್ಲಿಂದ ಎತ್ತಂಗಡಿ ಮಾಡುವುದು ಅಮಾನವೀಯ ಎಂದರು.
ಮೀನುಗಾರಿಕಾ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡುತ್ತೇನೆ. ಮೀನುಗಾರರ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್)