ಬೆಂಗಳೂರು : ಕರ್ನಾಟಕದ ಶ್ರೀನಿವಾಸ್ ಪ್ರಭು ಮುಂಡ್ಕೂರು ಜೂನ್ 15ರಂದು ಚೆನ್ನೈನಲ್ಲಿ ಟ್ರೈ2ಚಾಂಪ್ ಆಯೋಜಿಸಿದ್ದ ಟ್ರಯಾಥ್ಲಾನ್ ಸ್ಪರ್ಧೆಯನ್ನು ಯಶಸ್ವಿಯಾಗಿ ಮುಗಿಸಿ ಗಮನಸೆಳೆದಿದ್ದಾರೆ. ವಿಶ್ವದ ಅತ್ಯಂತ ಕಠಿಣ ಕ್ರೀಡೆಗಳಲ್ಲಿ ಒಂದಾಗಿರುವ ಟ್ರಯಾಥ್ಲಾನ್ನಲ್ಲಿ ಈಜು, ಸೈಕ್ಲಿಂಗ್ ಮತ್ತು ಓಟವನ್ನು ಒಳಗೊಂಡ ಸ್ಪ್ರಿಂಟ್ ಟ್ರಯಾಥ್ಲಾನ್ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಇದರಲ್ಲಿ ಸ್ವಲ್ಪವೂ ಬಿಡುವು ಇಲ್ಲದೆ 750 ಮೀಟರ್ ಈಜು, 20 ಕಿಲೋಮೀಟರ್ ಸೈಕ್ಲಿಂಗ್ ಮತ್ತು 5 ಕಿಲೋಮೀಟರ್ ಓಟವನ್ನು ಪೂರೈಸಬೇಕಾಗುತ್ತದೆ ಮತ್ತು ಇದು ದೈಹಿಕ ಕ್ಷಮತೆಗೆ ಅತ್ಯಂತ ಸವಾಲುದಾಯಕವಾಗಿರುತ್ತದೆ.
ಬೆಂಗಳೂರಿನ 25 ವರ್ಷದ ಶ್ರೀನಿವಾಸ್ ಪ್ರಭು, ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದಾರೆ. ಭಾಗವಹಿಸಿದ ಮೊದಲ ಟ್ರಯಾಥ್ಲಾನ್ನಲ್ಲೇ ಅವರು ಯಶಸ್ವಿಯಾಗಿ ಸ್ಪರ್ಧೆ ಮುಗಿಸಿದ ಹೆಗ್ಗಳಿಕೆ ಪಡೆದಿದ್ದಾರೆ. ನವೆಂಬರ್ನಲ್ಲಿ ಗೋವಾದಲ್ಲಿ ನಡೆಯಲಿರುವ ಐರನ್ಮ್ಯಾನ್ (3.8 ಕಿಲೋಮೀಟರ್ ಈಜು, 180 ಕಿಲೋಮೀಟರ್ ಸೈಕ್ಲಿಂಗ್, 42.2 ಕಿಲೋಮೀಟರ್ ಓಟ)ಸ್ಪರ್ಧೆಯಲ್ಲಿ ಭಾಗವಹಿಸಲು ಅವರು ಈಗ ಸಿದ್ಧತೆ ನಡೆಸುತ್ತಿದ್ದಾರೆ.