ಕರ್ಣಾಟಕ ಬ್ಯಾಂಕ್ ಸಾಂಸ್ಕೃತಿಕ ಚಟುವಟಿಕೆ ಹಾಗೂ ಸಾಮಾಜಿಕ ಕಾರ್ಯಗಳಿಗೆ ಕೊಡುಗೆ ನೀಡುವ ಮೂಲಕ ಧಾರ್ಮಿಕ- ಸಾಂಸ್ಕೃತಿಕ-ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದು ಕುಟುಂಬ ಬ್ಯಾಂಕ್ ಆಗಿದೆ. ಬ್ಯಾಂಕ್ನ ಎಲ್ಲ ಯೋಜನೆಗಳ ಉಪಯೋಗವನ್ನು ಗ್ರಾಹಕರು ಪಡೆದುಕೊಂಡಾಗ ಇನ್ನಷ್ಟು ಉನ್ನತಿ ಹೊಂದಲು ಸಾಧ್ಯ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಹೇಳಿದರು.

ಮರಕ್ಕಿಣಿಯಲ್ಲಿ ಕರ್ಣಾಟಕ ಬ್ಯಾಂಕ್ನ ಅಡ್ಯನಡ್ಕ ಶಾಖೆ ಸ್ಥಳಾಂತರ ಕಾರ್ಯಕ್ರಮದಲ್ಲಿ ನೂತನ ಶಾಖಾ ಪ್ರಾಂಗಣ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ರಾಜಾ ಬಿ.ಎಸ್. ಮಾತನಾಡಿ, ಬ್ಯಾಂಕ್ ಎಂಬುದು ಗೌರವ ಭಾವನೆ ಹಾಗೂ ಗ್ರಾಹಕರ ನಡುವಿನ ಸಂಬಂಧ. ಗ್ರಾಹಕರಿಗೆ ಸಾಧ್ಯವಾದಷ್ಟು ಉತ್ತಮ ಸೇವೆ ನೀಡಲಾಗುತ್ತಿದ್ದು, ಗ್ರಾಹಕರ ಸಹಕಾರದಿಂದ ಬ್ಯಾಂಕ್ ಅಭಿವೃದ್ಧಿ ಹೊಂದುತ್ತಿದೆ. ೧೦೧ ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್ ೧೫ ರೀಜನಲ್ ಕಚೇರಿ ಹಾಗೂ ದೇಶದಲ್ಲಿ ೯೪೯ ಶಾಖೆಗಳನ್ನು ಹೊಂದಿದೆ ಎಂದರು.
ಹಳೆಯ ಹಾಗೂ ಹೊಸ ಕಟ್ಟಡ ಮಾಲೀಕರನ್ನು ಗೌರವಿಸಲಾಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ, ಯಕ್ಷಗಾನ ಗುರುಗಳಾದ ಸಬ್ಬಣಕೋಡಿ ರಾಮ ಭಟ್ಟ, ಕರ್ನಾಟಕ ಬ್ಯಾಂಕ್ನ ನಿವೃತ್ತ ಅಽಕಾರಿ ಸಾಯ ರಾಮಚಂದ್ರ ಭಟ್ ಅವರನ್ನು ಗೌರವಿಸಲಾಯಿತು.
ಉಪ ಮಹಾಪ್ರಬಂಧಕ ವಸಂತ ರಮೇಶ್ ಹೇರ್ಳೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಾಖಾ ಪ್ರಬಂಧಕ ರಾಮಕೃಷ್ಣ ವಿ.ಯು. ವಂದಿಸಿದರು. ಮುಖ್ಯ ಪ್ರಬಂಧಕ ಶ್ರೀಹರಿ ಕಾರ್ಯಕ್ರಮ ನಿರೂಪಿಸಿದರು.